ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಎಸ್ವೈ ಹೆಸರಿಡುವ ಬಗ್ಗೆ ತಮ್ಮದು ಯಾವುದೇ ತಕರಾರಿಲ್ಲ. ಅನೇಕ ವರ್ಷದಿಂದ ಶಿವಮೊಗ್ಗದ ಅಭಿವೃದ್ಧಿಗೆ ಯಡಿಯೂರಪ್ಪ ಶ್ರಮಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ D K Shivakumar ತಿಳಿಸಿದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಪೇಕ್ಷಿತ ಅಭ್ಯರ್ಥಿ ರವಿಕುಮಾರ್ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗದ ತೀರ್ಥಹಳ್ಳಿ ಮತ್ತು ಭದ್ರಾವತಿ ಎರಡು ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಮಾಡಿದ್ದೇವೆ. ಬೇರೆ ಕ್ಷೇತ್ರದಲ್ಲಿ ಶೀಘ್ರದಲ್ಲೇ ಯಾತ್ರೆ ಮಾಡುತ್ತೇವೆ. ಎರಡು ಕ್ಷೇತ್ರದಲ್ಲಿ ಜನ ಉತ್ತಮ ಬೆಂಬಲ ನೀಡಿದ್ದಾರೆ ಎಂದರು.
ರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತು ಹಾಕಬೇಕು ಎಂದು ಜನ ಬೆಂಬಲ ನೀಡ್ತಿದ್ದಾರೆ. ಅವರ ಅಪೇಕ್ಷೆಯಂತೆ ನಾವು ಕೂಡ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಹಲವು ಜನಪರ ಯೋಜನೆ ಜಾರಿಗೆ ತಂದಿತ್ತು..ಅದ್ರೆ, ಬಿಜೆಪಿ ಸರ್ಕಾರ ಅವುಗಳನ್ನು ನಿಲ್ಲಿಸಿದೆ ಎಂದು ಆರೋಪಿಸಿದರು.
Also read: ಅಡ್ವೈಸರ್ ಸಾಹಿತ್ಯ ಪ್ರಶಸ್ತಿʼಗೆ ಕೃತಿಗಳ ಆಹ್ವಾನ
ಮಲೆನಾಡಿನಲ್ಲಿ ಹಲವು ಸಮಸ್ಯೆಗಳಿದ್ದು, ನಮ್ಮ ಪ್ರಣಾಳಿಕೆಯಲ್ಲೂ ಹೇಳಿದ್ದೇವೆ. ಬಗರ್ ಹುಕುಂ, ಅರಣ್ಯಭೂಮಿ ಸಾಗುವಳಿ ರೈತರ ಹಿತಕಾಯಲು ನಾವು ಬದ್ದರಾಗಿದ್ದೇವೆ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದರು.
ವಿಐಎಸ್ಎಲ್ ಕಾರ್ಖಾನೆಯ ಕುರಿತು ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಮೈನಿಂಗ್ ನೀಡಿದ್ರೆ ಕಾರ್ಖಾನೆ ಉಳಿಯುತ್ತೆ ಎನ್ನುವುದಾದರೆ ಇಷ್ಟುವರ್ಷ ಬಿಜೆಪಿ ಏನು ಮಾಡ್ತಾ ಇದ್ರು ಡಬ್ಬಲ್ ಇಂಜಿನ್ ಸರ್ಕಾರ ಮಲಗಿತ್ತಾ ಎಂದು ಪ್ರಶ್ನಿಸಿದರು.
ಇಡಿ ಕಿರುಕುಳದ ಬಗ್ಗೆ ಮಾತನಾಡಿ, ಯಂಗ್ ಇಂಡಿಯಾ ಮಗಳ ವಿದ್ಯಾಭ್ಯಾಸದ ಕುರಿತು ಪ್ರಶ್ನೆ ಕೇಳ್ತಾರೆ ಎಂದರೆ ಇದು ಯಾವತರಹದ ವಿಚಾರಣೆ ಎಂಬುದು ತಿಳಿಯುತ್ತೆ. ಈ ಬಗ್ಗೆ ಸಿಬಿಐಗೆ ಪತ್ರಬರೆಯುವೆ ಎಂದರು.
ಶಿವಮೊಗ್ಗದ ಶಾಸಕ ಈಶ್ವರಪ್ಪ ಮತ್ತು ಜಾರಕಿ ಹೊಳಿ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ಶಾಸಕ ಸ್ಥಾನ ಕಳೆದುಕೊಂಡ ಇಬ್ಬರು ಶಾಸಕರು ಸಚಿವ ಸ್ಥಾನ ಕಳೆದುಕೊಂಡು ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ಸಂಘಟನೆಯಲ್ಲೂ ಅವರು ಇಲ್ಲ ಎಂದು ಕಿಚಾಯಿಸಿದರು.
ರಮೇಶ್ ಜಾರಕಿಹೊಳಿ ಸಿಬಿಐ ತನಿಖೆಗೆ ನೀಡಲಿ ನನ್ನ ಅಭ್ಯಂತರವಿಲ್ಲ. ಅವರು ಕೋರ್ಟ್ಗೆ ಏನು ಅಫಿಡವಿಟ್ ನೀಡಿದ್ದಾರೆ ಹೇಳಲಿ. ನನ್ನ ಹೆಸರು ಮಾತನಾಡಿದರೆ ಮಾತ್ರ ಅವರಿಗೆ ಪ್ರಚಾರ ಸಿಗುತ್ತದೆ. ಕಾಂಗ್ರೆಸ್ನಲ್ಲಿ ರಾಜ್ಯದಲ್ಲಿ ನಾಯಕರಿಲ್ಲ ಎಂದು ರಾಹುಲ್ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯನ್ನು ಕರೆಸುತ್ತಿದ್ದಾರೆ ಎಂಬ ಬಿಜೆಪಿ ಟೀಕೆಗೆ ಕಾಂಗ್ರೆಸ್ನಲ್ಲಿ ಸಾಮೂಹಿಕ ನಾಯಕತ್ವ ಎಂದು ತಿರುಗೇಟು ನೀಡಿದರು.
ಯಡಿಯೂರಪ್ಪ ಕಣ್ಣೀರು ಹಾಕಲು ಏನು ಕಾರಣ. ಅವರನ್ನು ಏಕೆ ಅಧಿಕಾರದಿಂದ ಕೆಳಗಿಳಿಸಿದರು. ಅದಕ್ಕೆ ಮೊದಲು ಬಿಜೆಪಿಯವರು ಸಮರ್ಪಕ ಉತ್ತರ ನೀಡಲಿ. ಅವರ ಮೇಲೆ ಭ್ರಷ್ಟಾಚಾರದ ಆರೋಪ ಇತ್ತ ಎನ್ನುವುದನ್ನು ಜನರಿಗೆ ತಿಳಿಸಲಿ. ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮಹಿಳೆಯರಿಗೆ 2 ಸಾವಿರ ರೂ. ಮತ್ತು ಉಚಿತ ವಿದ್ಯುತ್ ಬಗ್ಗೆ ಮತದಾರರಿಗೆ ಗ್ಯಾರಂಟಿ ನೀಡಲಿದ್ದಾರೆ ಎಂದರು.
ಶಿವಮೊಗ್ಗ ನಗರದಲ್ಲಿ ಅವರ ಪಕ್ಷದ ಆಯನೂರು ಮಂಜುನಾಥ್ ಅವರೇ ಫ್ಲೆಕ್ಸ್ ಮೂಲಕ ಸತ್ಯವನ್ನು ಹೇಳಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಸ್ಥರು ಶಿವಮೊಗ್ಗ ನಗರದಲ್ಲಿ ಶಾಂತಿ ಪದೇ ಪದೇ ಕದಡುತ್ತಿದ್ದರೆ. ವ್ಯಾಪಾರ ವ್ಯವಹಾರ ಮಾಡುವ ಸ್ಥಿತಿಯಲ್ಲಿಲ್ಲ. ಬಡ್ಡಿ ಕಟ್ಟಲು ಆಗುತ್ತಿಲ್ಲ. ಎಲ್ಲರೂ ಬಿಜೆಪಿ ಆಡಳಿತದ ಮೇಲೆ ನಿರಾಶರಾಗಿದ್ದಾರೆ. ಬಿಜೆಪಿಯ ನಾಯಕರು ತಲಾ 500 ಕೋಟಿ ಹಾಕಿ ಎರಡು ದೊಡ್ಡ ಕಾರ್ಖಾನೆಯನ್ನು ಸ್ಥಾಪಿಸಿ ಉದ್ಯೋಗವನ್ನಾದರೂ ನೀಡಬಹುದಿತ್ತು. ಅದು ಬಿಟ್ಟು ಇರುವ ಕಾರ್ಖಾನೆಯನ್ನು ಮುಚ್ಚಲು ಹೊರಟಿದ್ದಾರೆ. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ನ ಎಲ್ಲಾ ನಾಯಕರುಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















