ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ತಾನುರಿದು ಇತರರಿಗೆ ಬೆಳಕನ್ನು ನೀಡುವುದಕ್ಕೆ ದೀಪ ಎನ್ನುತ್ತಾರೆ. ತಮ್ಮದೇ ಸಮಸ್ಯೆ ಹಲವಾರು ಇರುವಾಗ ಇವರು ಮತ್ತೊಬ್ಬರಿಗೆ ಸಹಾಯದ ಹಸ್ತ ಚಾಚಿ ಇವರು ದೀಪದಂತೆ, ನೆರವಾಗುತ್ತಿದ್ದಾರೆ. ರಾಜ್ಯ ಸರ್ಕಾರ ಈ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಇವರಿಗೆ ಯಾವುದೇ ಪ್ಯಾಕೇಜ್ ಘೋಷಿಸಿಲ್ಲವಾದರೂ ಕೂಡ, ಬಡ ಕುಟುಂಬಗಳಿಗೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ನೆರವಾಗುತ್ತಿದ್ದಾರೆ. ಪೂಜೆ ಮಾಡಿ ತಮ್ಮ ಜೀವನ ಸಾಗಿಸಬೇಕಾದ ಅರ್ಚಕರು, ಬಡ ಬ್ರಾಹ್ಮಣ ಕುಟುಂಬಗಳಿಗೆ ನೆರವಾಗುತ್ತಿದ್ದು, ಎಲೆ ಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಇವರ ಸೇವೆ ಎಲ್ಲರಗಿಂತಲೂ ವಿಭಿನ್ನ.

ಈಗಾಗಲೇ, ಪ್ರಪಂಚೆದೆಲ್ಲೆಡೆ ಕೊರೋನಮಹಾಮಾರಿ ತಾಂಡವವಾಡುತ್ತಿದ್ದು, ಅದರಂತೆ ರಾಜ್ಯದಲ್ಲಿಯೂ ಕೂಡ ಕೊರೋನಾ ಎಂಬ ಹೆಮ್ಮಾರಿ ರುದ್ರ ನರ್ತನವೇ ಮಾಡತೊಡಗಿದೆ. ಇಂತಹ ಸಂದರ್ಭದಲ್ಲಿ ಇದನ್ನು ತಡೆಯಲು, ರಾಜ್ಯ ಸರ್ಕಾರ ಲಾಕ್ ಡೌನ್ ಮೊರೆ ಹೋಗಿದ್ದು, ಆದರೆ, ದುಡಿಮೆಯಿಲ್ಲದ ಅದೆಷ್ಟೋ ಜನರಿಗೆ ಯಾವುದೇ ಪ್ಯಾಕೇಜ್ ಇನ್ನು ತಲುಪಿಸಿಲ್ಲ. ಸರ್ಕಾರದಿಂದ ಈವರೆಗೂ, ಯಾವುದೇ ಪ್ಯಾಕೇಜ್ ನಂತಹ ಅನುದಾನ ಬಿಡುಗಡೆಯಾಗದೇ, ದಿನಗೂಲಿಯಿಂದ ಹಿಡಿದು ಪ್ರತಿಯೊಬ್ಬರು ದಿನದ ಕೂಳಿಗೂ ಕಷ್ಟ ಪಡುವಂತಾಗಿದೆ. ಈ ನಡುವೆ, ಅರ್ಚಕರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಯಾವುದೇ ಪೂಜಾ ಕಾರ್ಯಕ್ರಮಗಳಿಲ್ಲ. ಮನೆಗಳಲ್ಲಿ ಸತ್ಯನಾರಾಯಣ ಪೂಜೆಯಿಂದ ಹಿಡಿದು, ದೇವಾಲಯದಲ್ಲಿ ಸೇರಿದಂತೆ ಎಲ್ಲಿಯೂ ಹೋಮ-ಹವನ, ಪೂಜೆಯಾಗದೇ, ಇವರ ಪರಿಸ್ಥಿತಿಯೇ ದುಸ್ತರವಾಗಿದೆ. ಆದರೆ, ಇವೆಲ್ಲೆದರ ನಡುವೆಯೂ, ಶಿವಮೊಗ್ಗದ ಅರ್ಚಕರು, ಆರ್ಥಿಕವಾಗಿ ತೀರಾ ಹಿಂದುಳಿದ ಬ್ರಾಹ್ಮಣರ ಕುಟುಂಬಗಳಿಗೆ ಆಧಾರವಾಗಿದ್ದಾರೆ. ಬಡ ಬ್ರಾಹ್ಮಣರ ಮನೆಯ ವಿದ್ಯುತ್ ಬಿಲ್, ಮನೆ ಬಾಡಿಗೆ, ವೃದ್ಧರಿಗೆ, ಅಶಕ್ತರಿಗೆ ಔಷಧಿಯ ನೆರವು ನೀಡಿ, ಎಲೆಮರೆಕಾಯಿಯಂತೆ ಸೇವೆಯಲ್ಲಿ ತೊಡಗಿದ್ದಾರೆ ಈ ಅರ್ಚಕರು.

ಶಿವಮೊಗ್ಗದ ವಿಪ್ರ ಯುವ ಪರಿಷತ್ ಸಂಘಟನೆ ಹೆಸರಿನಲ್ಲಿ, ಬಡ ಬ್ರಾಹ್ಮಣರ ಕೈ ಹಿಡಿಯುತ್ತಿರುವ ಅರ್ಚಕರು, ತಾವೇ ಸಮಸ್ಯೆಯಲ್ಲಿದ್ದುಕೊಂಡು, ಬಡವರಿಗೆ ನೆರವು ನೀಡುತ್ತಿರುವುದು ವಿಶೇಷ. ಲಾಕ್ ಡೌನ್ ಹಿನ್ನೆಲೆಯಲ್ಲಿ ಈಗಾಗಲೇ, ತೊಂದರೆಯಲ್ಲಿರುವ ಈ ಅರ್ಚಕರು, ಆರ್ಥಿಕವಾಗಿ ಹಿಂದುಳಿದಿರುವ, ತೊಂದರೆ ಅನುಭವಿಸುತ್ತಿರುವ ಬ್ರಾಹ್ಮಣರ ಕುಟುಂಬಗಳಾದ, ಪುರೋಹಿತರು, ಅಡುಗೆ ಭಟ್ಟರಿಗೆ ನೆರವಿನ ಸಹಾಯ ಹಸ್ತ ಚಾಚಿರುವುದು ವಿಶೇಷ. ಒಂದೊತ್ತಿನ ಊಟಕ್ಕೂ ಸಂಚಾಕಾರದ ಹಿನ್ನೆಲೆಯಲ್ಲಿ, ತೊಂದರೆ ಅನುಭವಿಸುತ್ತಿರುವ ಕುಟುಂಬಗಳಿಗೆ ಈ ಮೂಲಕ ನೆರವಾಗುತ್ತಿದ್ದು, ತಮಗೆ ಬರುವ ಪೂಜೆಯ ದಕ್ಷಿಣೆಯಲ್ಲಿ ಸಹಾಯ ಮಾಡುತ್ತಿರುವುದು ವಿಶೇಷವಾಗಿದೆ.

ಒಟ್ಟಿನಲ್ಲಿ, ಪೂಜೆ ಎಂದ ಕೂಡಲೇ, ಪುರೋಹಿತರಿಗೆ ಕರೆಯಿರಿ ಎನ್ನುವ ಎಲ್ಲರೂ, ಲಾಕ್ ಡೌನ್ ನಂತಹ ಕ್ಲಿಷ್ಟ ಸಂದರ್ಭದಲ್ಲಿ, ಇವರಿಗೆ ಯಾರು ಕೂಡ ಕೇಳುವವರಿಲ್ಲದಂತಾಗಿದೆ. ಆದರೆ, ಇದೇ ಯುವ ಅರ್ಚಕರು, ತಮ್ಮಲ್ಲಿ ಉಳಿಸಿಕೊಂಡಿರುವ ಸೇವಿಂಗ್ಸ್ ಹಣವನ್ನೇ, ಸಂಗ್ರಹಿಸಿ, ಬಡ ಬ್ರಾಹ್ಮಣ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ. ಅನೇಕ ಸಂಘಟನೆಗಳು, ಊಟ-ಉಪಹಾರ, ಮಾಸ್ಕ್ ಗಳನ್ನು ನೀಡುತ್ತಿದ್ದರೂ ಕೂಡ, ಮನೆ ಬಾಡಿಗೆ, ವಿದ್ಯುತ್ ಬಿಲ್ ನಂತಹ ನೆರವು ನೀಡುತ್ತಿರುವುದು ವಿಶೇಷವಾಗಿದೆ.
ಅಂತ್ಯಕ್ರಿಯೆಗೆ ವಿಪ್ರ ಯುವ ಪರಿಷತ್ ನೆರವು:
ಕೊರೋನ ಲಾಕ್ ಡೌನ್ ಮಧ್ಯೆ ಅಂತ್ಯಕ್ರಿಯೆಗೆ ಸಂಬಂಧಿಕರು ಪಾಲ್ಗೊಳ್ಳುತ್ತಿಲ್ಲ. ಆದರೆ ವಿಪ್ರ ಬಂಧುಗಳು ಮೃತರಾದರೆ ಅವರ ಅಂತ್ಯಕ್ರಿಯೆಗೆ ವಿಪ್ರ ಯುವ ಪರಿಷತ್ ನೆರವು ನೀಡುತ್ತಿದೆ. ಇಂದು ಸುಮಾರು 3 ದೇಹಗಳ ಅಂತ್ಯಕ್ರಿಯೆ ನಡೆಸಿದ್ದು, ಜಿಲ್ಲೆಯ ಓರ್ವ ಪುರುಷ ಹಾಗೂ ಶಿರಸಿ ಜಿಲ್ಲೆಯ ಮಹಿಳೆಯೊಬ್ಬರು ಸೋಂಕಿನಿಂದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ನಿನ್ನೆ ಸ್ಟ್ರೋಕ್ ಆದ ಕಾರಣ ಮೃತರಾದರು. ಹಾಗೂ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಸಂಘಟನೆ ನಡೆಸಿದೆ. ಕೆಲವರ ಅಂತ್ಯಕ್ರಿಯೆ ನಡೆಸಲು ಬೇಕಾಗುವಂತಹ ಖರ್ಚು ವೆಚ್ಚಗಳನ್ನು ಸಹ ಪರಿಷತ್ ಭರಿಸುತ್ತಿದೆ.

ವಿಪ್ರ ಬಂಧುಗಳ ಅಂತ್ಯಕ್ರಿಯೆ ನಡೆಸಲು ಸಹಾಯ ಬೇಕಾದಲ್ಲಿ ಮೊ: 9663054936, ಸಂತೋಷ ಮೊ: 9035333699ಗೆ ಸಂಪರ್ಕಿಸಬಹುದು ಎಂದು ಸಂಘಟನೆ ಅಧ್ಯಕ್ಷ ರಾಘವೇಂದ್ರ ಉಡುಪ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















