ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತೀರ್ಥಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ ಅವರ ಉದ್ದಟತನ ಖಂಡಿಸಿ ಅವರ ಅಮಾನತ್ತಿಗೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಇಂದು ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತೀರ್ಥಹಳ್ಳಿಯಲ್ಲಿ ಪ್ರಜಾವಾಣಿ ವರದಿಗಾರ ನಿರಂಜನ್ ಅವರು ವರದಿಗಾಗಿ ರಥಬೀದಿಯಲ್ಲಿ ಫೋಟೋ, ವಿಡಿಯೋ ತೆಗೆಯುವಾಗ ಇಲ್ಲಿನ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವಥ್ ಗೌಡ ಬಲವಂತವಾಗಿ ಪತ್ರಕರ್ತ ನಿರಂಜನ್ ಅವರಿಂದ ಮೊಬೈಲ್ ಕಿತ್ತುಕೊಂಡು ಠಾಣೆಗೆ ಹೋಗಿರುತ್ತಾರೆ. ಮೊಬೈಲ್ ಪಡೆಯಲು ಠಾಣೆಗೆ ಹೋದ ನಿರಂಜನ್ ಅವರನ್ನು ಇನ್ಸ್ಪೆಕ್ಟರ್ ಅಶ್ವಥ್ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನು ಪ್ರಶ್ನಿಸಿದ ಇತರೆ ಪತ್ರಕರ್ತರ ಜೊತೆಗೂ ಉದ್ದಟತನದಿಂದ ವರ್ತಿಸಿದ್ದಾರೆ ಎಂದು ಪತ್ರಕರ್ತರು ದೂರಿದರು.
Also read: ಲೋಕಕಲ್ಯಾಣಕ್ಕಾಗಿ ಆ.23ರಿಂದ ಸಂಪೂರ್ಣ ಋಗ್ವೇದ ಘನ ಪಾರಾಯಣ: ವೇ. ಬ್ರ.ಅಚ್ಯುತ ಅವಧಾನಿ
ಇನ್ಸ್ಪೆಕ್ಟರ್ ಅವರ ವರ್ತನೆ ಖಂಡನೀಯ, ಸುಳ್ಳು ಕೇಸು ಹಾಕುವುದಾಗಿ ಪತ್ರಕರ್ತರನ್ನೆ ಬೆದರಿಸುವ ಈ ಪೊಲೀಸ್ ಅಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಸ್ಪಷ್ಡವಾಗಿದೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯ ಈ ವರ್ತನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪೊಲೀಸ್ ಅಧಿಕಾರಿ ಅಶ್ವಥ್ ಗೌಡ ಅವರನ್ನು ಈ ಕೂಡಲೆ ಅಮಾನತ್ತುಗೊಳಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಸಂಘದ ಜಿಲ್ಲಾಧ್ಯಕ್ಷರಾದ ಕೆ ವಿ ಶಿವಕುಮಾರ್, ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ. ಟಿ.ಅರುಣ್, ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಅಧ್ಯಕ್ಷರಾದ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ ನೆರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















