ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂಜಿನಿಯರಿಂಗ್ #Engineering ಓದಿ ಕೆಲಸಕ್ಕೆ ಅಲೆದು ಅಲೆದು ಸುಸ್ತಾಗಿ ಸುತ್ತಾಡುವ ಗ್ರಾಮೀಣ ಹಿನ್ನೆಲೆಯ ಮೂವರು ಮಧ್ಯಮ ವರ್ಗದ ಯುವಕರ ಬದುಕಿನ ಸುತ್ತಣ ಕಥೆ ಹೇಳುವ ಹೊಸಬರ ಇಂಟರ್ವಲ್ #Interval ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಈ ಹಿನ್ನೆಲೆಯಲ್ಲಿಯೇ ಇಂದು ಚಿತ್ರ ತಂಡ ಶಿವಮೊಗ್ಗಕ್ಕೆ ಆಗಮಿಸಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿತು.
ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯವುದರ ಜತೆಗೆ ನಿರ್ಮಾಣದಲ್ಲೂ ಸಾಥ್ ನೀಡಿರುವ ಸುಕಿ ಅಲಿಯಾಸ್ ಸುಖೇಶ್ ಮಾತನಾಡಿ, ಇಂಟರ್ವಲ್ ಚಿತ್ರಕ್ಕೂ ಮಲೆನಾಡಿನ ಶಿವಮೊಗ್ಗಕ್ಕೂ ಒಂದು ಅವಿನಾಭಾವ ನಂಟಿದೆ. ನನ್ನ ಪೂರ್ವಜರ ಮೂಲ ಶಿವಮೊಗ್ಗ ಎನ್ನುವುದರ ಜತೆಗೆ ಈ ಚಿತ್ರದ ಬಹುತೇಕ ಚಿತ್ರೀಕರಣವು ತೀರ್ಥಹಳ್ಳಿ, ಹೊಸನಗರ ತಾಲೂಕು ನಗರಗಳಲ್ಲಿ ನಡೆದಿದೆ. ಅದೊಂದು ನಂಟಿನೊಂದಿಗೆ ಶಿವಮೊಗ್ಗಕ್ಕೆ ಬಂದಿದ್ದೇವೆ ಎಂದರು.
ಇಂಟರ್ವಲ್ ಔಟ್ ಅಂಡ್ ಔಟ್ ಕಾಮಿಡಿ ಚಿತ್ರವಾಗಿದ್ದು, ಗಣೇಶ್ ಎಸ್, ಗಣೇಶ್ ಟಿ ಹಾಗೂ ಗಣೇಶ್ ಯು ಎಂಬ ಮೂವರ ಬಾಲ್ಯ, ಪ್ರೌಢವ್ಯವಸ್ಥೆ ಮತ್ತು ಕೆಲಸದ ಹುಡುಗಾಟದ ಚಲನಚಿತ್ರ ಇದಾಗಿದೆ. ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಚಲನ ಚಿತ್ರವಾಗಿದೆ. ಹಾಸ್ಯದ ಜತೆಗೆಯೇ ಒಂದೊಳ್ಳೆಯ ಸಂದೇಶ ಹೇಳುವ ಪ್ರಯತ್ನ ಚಿತ್ರದಲ್ಲಿದೆ ಎಂದರು.
Also read: ದೇವರ ಸೇವೆಯಿಂದ ಕಷ್ಟಗಳು ದೂರ | ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿ
ಚಿತ್ರದ ನಾಯಕ ನಟ ಶಶಿರಾಜ್ ಮಾತನಾಡಿ, ಇಂಟರ್ವಲ್ ಅಂದಾಕ್ಷಣ ಸಹಜವಾದ ಒಂದು ಕುತೂಹಲ ಇದ್ದೇ ಇರುತ್ತದೆ. ಆದರೆ ನಾವು ಇಲ್ಲಿ ಬದುಕಿನ ಇಂಟರ್ವಲ್ ಕಥೆ ಹೇಳಲು ಬರುತ್ತಿದ್ದೇವೆ. ಪ್ರತಿ ಯೊಬ್ಬರ ಜೀವನದಲ್ಲೂ ಮಧ್ಯಂತರ ಎನ್ನುವುದು ಇದ್ದೇ ಇರುತ್ತದೆ. ಅದು ಬಂದಾಗ ಪಾಸಿಟಿವ್ ಕಡೆ ಹೋದರೆ ಅದು ಸಕ್ಸಸ್ ಆಗಲಿದೆ. ಅದೇ ನೆಗೆಟಿವ್ ಕಡೆ ತಿರುಗಿದರೆ ಇನ್ನೊಂದು ತಿರುವು ಪಡೆಯಲಿದೆ. ಅಂತಹ ಕಥೆಯೇ ಈ ಚಿತ್ರ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಾಯಕ ನಟ ಪ್ರಜ್ವಲ್ ಕುಮಾರ್, ಕಲಾವಿದರಾದ ರಂಗನಾಥ್ ಶಿವಮೊಗ್ಗ, ದಾನಂ ಶಿವಮೊಗ್ಗ ಇದ್ದರು.
ಭರತ್ ವರ್ಷ ಪಿಕ್ಚರ್ಸ್ ನಲ್ಲಿ ಭರತ್ ನಿರ್ದೇಶಿಸಿ, ಸುಕಿ ಮತ್ತು ಭರತ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರರಾವ್, ಸಹನ ಆರಾಧ್ಯ, ಸಮಿಕ್ಷ ದಾನಂ ಶಿವಮೊಗ್ಗ, ರಂಗನಾಥ್ ಶಿವಮೊಗ್ಗ ಅವರ ತಾರಾಗಣವಿದೆ. ಹಾಗೆಯೇ ಸಾಹಸದಲ್ಲಿ ರಘುಬಂಡೆ, ಸಂಕಲನ ಶಶಿಧರ್ ಪುಟ್ಟೇಗೌಡ, ಸಂಗೀತ ವಿಕಾಸ ವಸಿಷ್ಠ, ಛಾಯಾಗ್ರಹಣ ರಾಜ್ ಕಾಂತ್ ಎಸ್.ಕೆ. ತಾಂತ್ರಿಕ ವರ್ಗದಲ್ಲಿದ್ದು, ಈಗಾಗಲೇ ಈ ಚಿತ್ರದ ಟ್ರೈಲರ್ ಅನ್ನು ನಟ ಶ್ರೀಮುರುಳಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಮಾ. 7ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post