ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತ ಜಿ- 20 ರಾಷ್ಟ್ರಗಳ ಶೃಂಗಸಭೆಯ G20 Summit ಅಧ್ಯಕ್ಷತೆ ವಹಿಸಿ ತನ್ನ ಪ್ರಾಚೀನತೆ ಪ್ರದರ್ಶನ ಮಾಡಿದೆ. ಅಷ್ಟೇ ಅಲ್ಲ, ವರ್ತಮಾನದ ನಾಯಕತ್ವವನ್ನು ಜಗತ್ತಿಗೆ ಪರಿಚಯಿಸಿದೆ. ಚರಿತ್ರೆ ತಿಳಿಸುವುದಷ್ಟೇ ಅಲ್ಲ. ವಿಶ್ವದ ಭವಿಷ್ಯದ ಭೂಮಿಕೆ ಏನಿರಬೇಕೆಂದು ಪ್ರಸ್ತಾವನೆ ಹಾಕಿಕೊಟ್ಟಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ CTRavi ಹೇಳಿದರು.
ನೈರುತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಜಗತ್ತಿನ ಅತ್ಯಂತ ಬಲಾಢ್ಯ ರಾಷ್ಟ್ರಗಳು ಅಂತ ಪರಿಭಾವಿಸುವ ರಾಷ್ಟ್ರಗಳ ನಾಯಕರು ಕೂಡ ಇದೀಗ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರ ನಾಯಕತ್ವವನ್ನು ಮುಕ್ತ ಕಂಠದಿಂದ ಹೊಗಳಿವೆ. ತನ್ಮೂಲಕ ಪ್ರಭಾವಿ ನಾಯಕತ್ವವನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ. ದೇಶವೇ ಹೆಮ್ಮೆಪಡುವ ರೀತಿಯಲ್ಲಿ ನಮ್ಮ ಪ್ರಧಾನಿ ಭಾರತವನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಯಾರು ಭಾರತವನ್ನು ನಮ್ಮದು ಅಂತ ಭಾವಿಸುತ್ತಾರೆ. ನಾವು ಭಾರತೀಯರು ಅಂತ ತಿಳಿದುಕೊಳ್ಳುತ್ತಾರೆ. ಭಾರತದ ಉನ್ನತಿಯನ್ನು ನೋಡಿ ಸಂಭ್ರಮಿಸುತ್ತಾರೋ ಅವರೆಲ್ಲರಿಗೂ ಸಂಭ್ರಮ ಆಗಿದೆ ಎಂದು ಭಾವಿಸುತ್ತೇನೆ. ಕೆಲವರಿಗೆ ಭಾರತೀಯತೆಯ ಬಗ್ಗೆ ಅನುಮಾನ ಇದ್ದಾಗ ಸಂಕಟ ಆಗಿರಬಹುದು. ಯಾರಿಗೆ ಭಾರತೀಯತೆಯ ಬಗ್ಗೆ ಅನುಮಾನ ಇರುವುದಿಲ್ಲವೋ ಅಂತವರು ಆಸ್ಟ್ರೇಲಿಯ ಪ್ರಧಾನಿ ನಮ್ಮ ಪ್ರಧಾನಿಗೆ ಬಾಸ್ ಅಂದಾಗ ಸಂಭ್ರಮಿಸುತ್ತಾರೆ. ಸಣ್ಣ ಮನಸ್ಸು ಹೊಂದಿದ್ದವರಿಗೆ ಸಂಕಟವೂ ಆಗಿರಬಹುದು ಎಂದು ಲೇವಡಿ ಮಾಡಿದರು.
ಮೋದಿ ಪ್ರಧಾನಿ ಆಗುವ ಮೊದಲು ಜಗತ್ತನಲ್ಲಿ ಹತ್ತನೇ ಆರ್ಥಿಕ ಶಕ್ತಿಯಾಗಿತ್ತು ಭಾರತ. ಆದರೆ ಈಗ ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಯಾರು ತಮ್ಮನ್ನು ತಾವು ಸೂರ್ಯ ಮುಳುಗಿದರೆ ಸಾಮ್ರಾಜ್ಯ ಅಂತ ಭಾವಿಸಿದ್ದಾರೋ, ಎರಡು ಶತಮಾನಕ್ಕೂ ಹೆಚ್ಚು ಕಾಲ ಇಲ್ಲಿ ಆಡಳಿತ ನಡೆಸಿದ್ದರೋ ಅವರನ್ನು ಹಿಂದಿಕ್ಕಿ ನಾವು ಐದನೇ ಸ್ಥಾನಕ್ಕೆ ಬಂದಿದ್ದೇವೆ. ಭಾರತ ತನ್ನ ಜಾಗತಿಕ ಶಕ್ತಿಯನ್ನು ಗುಲಾಮಿ ಮಾನಸಿಕತೆಯಿಂದ ಹೊರಬಂದು ತೋರಿಸಿಕೊಟ್ಟಿದೆ ಎಂದರು.
ಇದನ್ನು ನೋಡಿ ಸಹಿಸದ ಕೆಲವರು ಹಿಂದಕ್ಕೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆ ಜನರಿಗೆ ಮೆಕಾಲೆಯೇ ಅತ್ಯಂತ ದೊಡ್ಡ ಶಿಕ್ಷಣ ತಜ್ಞ ಅಂತ ಕಾಣುತ್ತಾನೆ. ಭಾರತದ ಹೆಸರಿನ ಬಗ್ಗೆ ಅನುಮಾನ ಅಪನಂಬಿಕೆ ವ್ಯಕ್ತಪಡಿಸುತ್ತಾರೆ. ಇದನ್ನು ನೋಡಿದಾಗ ಅವರಿನ್ನೂ ಗುಲಾಮಿ ಮಾನಸಿಕತೆಯಿಂದ ಹೊರ ಬಂದಿಲ್ಲವಲ್ಲ ಎಂದು ದುಃಖ ಆಗುತ್ತದೆ. ಅವರನ್ನು ಅಂತಹ ಮಾನಸಿಕತೆಯಿಂದ ಹೊರ ತರುವ ಜವಾಬ್ದಾರಿಯೂ ನಮಗೆ ಇದೆ. ಅಂತಹ ಗುಲಾಮಿ ಮಾನಸಿಕತೆ ಇದ್ದರೆ ಅವರಿಗೂ ಒಳ್ಳೆಯದಲ್ಲ, ದೇಶಕ್ಕೂ ಒಳ್ಳೆಯದಲ್ಲ ಎಂದು ಹೇಳಿದರು.
ಅದರಿಂದ ಹೊರ ತರುವುದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಎಪಿ) ಜಾರಿ ಮಾಡಲಾಗಿತ್ತು. ಆದರೆ ಅದೇ ಗುಲಾಮಿ ಮಾನಸಿಕತೆ ಇರಬೇಕು ಎಂಬ ಇಚ್ಛೆ ಕೆಲವರಿಗೆ ಇದೆ. ಅಂಥವರಿಗೆ ಭಾರತ ಅಂದಾಕ್ಷಣ ದಿಗಿಲು ಶುರುವಾಗಿದೆ ಎಂದು ಹೆಸರು ಪ್ರಸ್ತಾಪಿಸದೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ವ್ಯಕ್ತಿಗೆ ಒಂದು ಆತ್ಮವಿದೆ. ದೇಶಕ್ಕೂ ಅಸ್ಮಿತೆ ಎಂಬ ಒಂದು ಆತ್ಮವಿದೆ. ಭಾರತೀಯತೆ ಈ ದೇಶದ ಆತ್ಮ. ನಿನ್ನೆ ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಅವರು ಒಂದು ಸಭೆ ಮಾಡಿದ್ದಾರೆ. ಸಮಾಜವಾದ, ಪಂಚೆ, ಕಾರು ಅಂತೆಲ್ಲ ಹೇಳಿದ್ದಾರೆ. ಹಿಂದುತ್ವವಾದಿ, ದಡ್ಡ ಅಂದ್ರೆ ಸಿಟಿ ರವಿ ಅಂತಾರೆ. ಆದರೆ ಹರಿಪ್ರಸಾದ್ ಪಂಚೆ ಅಂತ ಹೇಳಿದ್ದು ಯಾರಿಗೆ ಅಂತ ಗೊತ್ತಾಗಿಲ್ಲ. ವಾಚು ಯಾರಿಗೆ ಸೇರಿದ್ದು ? ಸಮಾಜವಾದ ಹಿನ್ನೆಲೆಯಿಂದ ಬಂದವರು ಯಾರು? ಅಂಥವರ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಭೂಕಂಪನದ ಮುನ್ಸೂಚನೆ ಅಂತ ಕಾಣಿಸುತ್ತಿದೆ. ಸರ್ಕಾರದ ಒಳಗೆಯೇ ಭೂಕಂಪನದ ಕೇಂದ್ರಗಳಿವೆ ಅನ್ನುವ ಮುನ್ಸೂಚನೆಯನ್ನು ಅವರು ತೋರಿಸಿದ್ದಾರೆ. ಐದು ವರ್ಷ ಒಳ್ಳೆಯ ಆಡಳಿತ ನೀಡುವ ಜವಾಬ್ದಾರಿ ಅವರಿಗೆ ಇದೆ. ವಿದ್ಯುತ್ ಬಿಲ್ ಏರಿಸಿದರು, ಮುದ್ರಾಂಕ ಶುಲ್ಕ, ಬಸ್ ದರ ಪ್ರಯಾಣ, ಎಣ್ಣೆ ದರ, ಅಬಕಾರಿ ಶುಲ್ಕ ಏರಿಸಿದ್ದಾರೆ. ಇದೀಗ ಸಿಂಗಲ್ ಫೇಸ್ ಕರೆಂಟೂ ಬರ್ತಿಲ್ಲ. ಇನ್ನು ಸ್ವಲ್ಪ ದಿನ ಹೋದರೆ, ಕರೆಂಟ್ ಇಲ್ಲ, ಕರೆಂಟ್ ಫ್ರೀನೂ ಇಲ್ಲ ಎಂದು ವ್ಯಂಗ್ಯವಾಡಿದರು.
ನಾನು ಪಕ್ಷದ ಕಾರ್ಯಕರ್ತರ ಕ್ಷಮೆಯಾಚನೆ ಮಾಡಲು ಬಯಸುತ್ತೇನೆ. ನನಗೆ ಪಕ್ಷದ ಜವಾಬ್ದಾರಿ ಕೊಟ್ಟಿದ್ದರು. ಪಕ್ಷವನ್ನು ಗೆಲ್ಲಿಸಿ ತರಬೇಕಾದ ಹೊಣೆಗಾರಿಕೆಯಲ್ಲಿ ನಂದು ಹೆಚ್ಚಿನ ಪಾಲಿತ್ತು. ಆದರೆ ನಿಮ್ಮೆಲ್ಲ ಪ್ರಯತ್ನಗಳ ನಡುವೆ ಬಿಜೆಪಿ ಕಾರ್ಯಕರ್ತರಿಗೆ ನಿರಾಸೆ ಉಂಟು ಮಾಡಿದ್ದೇವೆ. ಪಕ್ಷವನ್ನು ಗೆಲ್ಲಿಸುವುದಕ್ಕೆ ಆಗಲಿಗಲ್ಲ. ನಾನು ಕೂಡ ಗೆಲ್ಲಲು ಸಾಧ್ಯ ಆಗಿಲ್ಲ. ಕಾರಣ ಏನೇ ಇರಬಹುದು, ಆ್ರೆ ಹೊಣೆ ನಮ್ಮದೆ. ಆ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಲು ಆಗದೇ ಇರುವ ಕಾರಣ ನಿಮ್ಮಲ್ಲಿ ಕ್ಷೇಮೆ ಕೇಳುತ್ತೇನೆ ಎಂದರು.
ಚುನಾವಣೆಯಲ್ಲಿ ಸೋಲು ಗೆಲುವು ಇದ್ದಿದ್ದೆ. ಬಿಜೆಪಿಗೆ ಸೋಲು ಹೊಸತೇನಲ್ಲ. ಕಳೆದ ಚುನಾವಣೆಯಲ್ಲಿ ಉಂಟಾದ ಸೋಲಿನಿಂದ ಯಾರು ಧೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ಪಕ್ಷದ ಸಂಘಟನೆ ಬೇರು ಮಟ್ಟದಿಂದ ಸದೃಢವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಿಂದ ಹಿಡಿದು ಎಲ್ಲ ಚುನಾವಣೆಗಳಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ನಿಟ್ಟಿನಲ್ಲಿ ನಾವುಗಳೆಲ್ಲ ಪರಿಶ್ರಮ ಹಾಕಬೇಕಿದೆ ಎಂದರು.
ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ, ಜೂನ್ನಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಚುನಾವಣಾ ಸಂದರ್ಭದಲ್ಲಿ ಕಾರ್ಯಕರ್ತರು ಮೈಮರೆತರೆ ಅಧಿಕಾರವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ, ಬದಲಾಗಿ ದೇಶದ ಅಖಂಡತೆಯನ್ನೂ ಕಳೆದುಕೊಳ್ಳುತ್ತೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಚುನಾವಣಾ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ನಾವೇ ಅಭ್ಯರ್ಥಿಗಳೆಂದು ಭಾವಿಸಿ ಕೆಲಸ ಮಾಡಿದಾಗ ಯಾರೇ ಆದರೂ ಗೆಲ್ಲುವುದಕ್ಕೆ ಸಾಧ್ಯವಿದೆ. ಹೆಚ್ಚಿನ ಸಂಖ್ಯೆಯನ್ನು ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ದೇಶವನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಈ ಬಾರಿ ಹಿಂದಿನ ದಾಖಲೆಗಳನ್ನೂ ಬದಿಗೆ ಸರಿಸುವುದರ ಮೂಲಕ ಭರ್ಜರಿ ಗೆಲುವು ಸಾಧಿಸಬೇಕಿದೆ ಎಂದು ಹೇಳಿದರು.
ಸಂಘಟನೆಯ ಧ್ವನಿ ಮತ್ತು ಸಿದ್ಧಾಂತ ಶಿಕ್ಷಕರ ಪರವಾಗಿದೆ. ವಿದ್ಯಾವಂತರನ್ನು ಸುಲಭವಾಗಿ ಒಲಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಆರು ಜಿಲ್ಲೆಗಳ ವ್ಯಾಪ್ತಿಗೆ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಬರಲಿದ್ದು ಸಾಕಷ್ಟು ಶ್ರಮವನ್ನು ಈಗಿನಿಂದಲೇ ಹಾಕಬೇಕಿದೆ. ಡಿ.ಎಚ್. ಶಂಕರಮೂರ್ತಿ ಅವರು ಪದವೀಧರ ಕ್ಷೇತ್ರವನ್ನು 30 ವರ್ಷ ಪ್ರತಿನಿಧಿಸಿದ್ದರು. ಹಿಂದಿನ ದಾಖಲೆಗಳನ್ನು ಹಿಂದಿಕ್ಕಿ ಭರ್ಜರಿ ಗೆಲುವು ಸಾಧಿಸಬೇಕಿದೆ ಎಂದರು.
ಮೇ ತಿಂಗಳಲ್ಲಿ ಲೋಕಸಭೆ, ತದನಂತರ ಕ್ಷೇತ್ರ ಮತ್ತು ಕ್ಷೇತ್ರಗಳಿಗೆ ಚುನಾವಣೆ ನಿಗದಿ ಆಗುವ ಸಾಧ್ಯತೆ ಇದೆ. ಆನ್ಲೈನ್ ನೋಂದಣಿಗೆ ಅವಕಾಶ ನೀಡಿದೆ. ಜತೆಗೆ ಆಫ್ಲೈನ್ ನೋಂದಣಿಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಬಿ.ವೈ. ವಿಜಯೇಂದ್ರ, ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯರಾದ ಎಸ್ ರುದ್ರೇಗೌಡ, ಡಿ.ಎಸ್. ಅರುಣ್, ಭಾರತಿ ಶೆಟ್ಟಿ, ಮಾಜಿ ಸಚಿವ ಹರತಾಳು ಹಾಲಪ್ಪ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಎ.ಎನ್. ನಟರಾಜ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ.ಕೆ. ಶ್ರೀನಾಥ್, ಶಿವರಾಜ್, ನವೀನ್ ಹೆದ್ದೂರು ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post