ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳೆದ ಎರಡು ವರ್ಷಗಳಿಂದ ಗೋಸಂಕ್ಷಣೆಗೆ ಕಟಿಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಗೋವರ್ಧನ ಟ್ರಸ್ಟ್ ವತಿಯಿಂದ ಜ.17ರಂದು ಮಧ್ಯಾಹ್ನ 3ಗಂಟೆಯಿಂದ ನಗರದ ಅಲ್ಲಮಪ್ರಭು ಮೈದಾನದಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಹಾಗೂ ಪೊಂಗಲ್ ಉತ್ಸವವನ್ನು #Makara Sankranthi celebration – Pongal festival ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಟ್ರಸ್ಟಿನ ಸಂಚಾಲಕಿ ಶೇಷಾಚಲ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋಪೂಜೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಗುವುದು. ಆಗಮಿಸಿದ ಎಲ್ಲರಿಗೂ ಗೋಪೂಜೆಗೆ ಅವಕಾಶ ಕಲ್ಪಿಸಲಾಗುವುದು. ದೇಶದ ವಿವಿಧ ಭಾಗಗಳಲ್ಲಿ ಸಂಕ್ರಾಂತಿ ಸಂಭ್ರಮವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಅದರ ಒಂದು ವಿಧ ಪೊಂಗಲ್ ತಯಾರಿಯನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ.
ಪೊಂಗಲ್ ತಯಾರಿಕೆಗೆ 240 ಅಡಿ ಉದ್ಧ, 10 ಅಡಿ ಅಗಲದ ವೇದಿಕೆಯನ್ನು ಸಿದ್ಧಪಡಿಸಲಾಗುವುದು. ಈ ಪೊಂಗಲ್ ತಯಾರಿಸಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು. ಇದಕ್ಕಾಗಿ 25ಕ್ಕೂ ಹೆಚ್ಚು ತಮಿಳು ಸಮುದಾಯದ ಸಹೋದರಿಯರು ಸಿದ್ಧರಾಗಿದ್ದಾರೆ ಎಂದರು.
ಕೃಷಿ ಪದಾರ್ಥಗಳನ್ನು ಸ್ಥಳದಲ್ಲೇ ಜೋಡಿಸಿ, ಅದನ್ನು ಪೂಜಿಸಿ, ಕೃಷಿ ಪೂಜೆ, ಮಾಡಲಾಗುವುದು ಅಲ್ಲದೆ ನಶಿಸುತ್ತಿರುವ ಎತ್ತಿನಗಾಡಿಗಳನ್ನು ಸ್ಥಳದಲ್ಲೇ ತರಿಸಿ ಅವುಗಳಲ್ಲೇ ಸಾರ್ವಜನಿಕರು ಪ್ರಯಾಣಿಸಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅವಕಾಶವನ್ನು ಕಲ್ಪಿಸಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ 300 ಜನರಿಗೆ ಚಕ್ಕಡಿಯಲ್ಲಿ ಪ್ರಯಾಣಿಸುವ ಅವಕಾಶ ನೀಡಲಾಗುವುದು. ಇದಕ್ಕೆ ತಲಾ 20 ರೂಪಾಯಿ ಸೇವಾಶುಲ್ಕ ನಿಗಧಿಪಡಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯನ್ನೂ ಏರ್ಪಡಸಲಾಗಿದ್ದು, 100 ಜನರಿಗೆ ಇದರಲ್ಲಿ ಅವಕಾಶ್ ಕಲ್ಪಿಸಲಾಗುವುದು. ಅತ್ಯುತ್ತಮವಾಗಿ ರಂಗೋಲಿ ಬಿಡಿಸಿದವರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಅಲ್ಲದೆ ಈ ಭಾಗದ ಜಾನಪದ ಹಾಡು ಮತ್ತು ನೃತ್ಯಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಅತ್ಯಂತ ಅಪರೂಪದ `ಮಲೆನಾಡು ಉತ್ಸವ’ ಜರುಗುವುದು. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕೋರಿದರು.
ರಂಗೋಲಿ, ಜಾನಪದ ಹಾಡು ಮತ್ತು ನೃತ್ಯಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಸುವರ್ಣಾಶಂಕರ್-9480150571, ಶುಭಾ ರಾಘವೇಂದ್ರ-9480504737, ಮತ್ತು ದೀಪಾ ಎ.ವಿ.-9880618945 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೋವರ್ಧನಾ ಟ್ರಸ್ಟಿನ ಪ್ರವರ್ತಕ ಕೆ.ಎಸ್. ಈಶ್ವರಪ್ಪ, ಉಮೇಶ್ ಆರಾಧ್ಯ, ಉಮಾಮೂರ್ತಿ, ಶುಭಾ ರಾಘವೇಂದ್ರ, ಸುವರ್ಣಾಶಂಕರ್, ಮಂಜುಳಾ ಮಂಜುನಾಥ್, ದೀಪಾ ಎ.ವಿ., ಕವಿತಾ ಜೋಯ್ಸ್, ಶ್ರೀಕಾಂತ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















