ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ನಾವೀನ್ಯತೆ ಎಂಬ ಕನಸುಗಳ ಬೆನ್ನೇರಿ ಹೊರಡಬೇಕಿದೆ ಎಂದು ಐಇಇಇ ಬೆಂಗಳೂರು ವಿಭಾಗದ ಸಹ ಮುಖ್ಯಸ್ಥರಾದ ಡಾ.ಡಿ.ಎನ್. ಸುಜಾತ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐಇಇಇ ಮಂಗಳೂರು ಉಪವಿಭಾಗ ಹಾಗೂ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ನಾವೀನ್ಯ ಯೋಜನೆಗಳ ಪ್ರದರ್ಶನ – ‘ಐ ಸ್ಕ್ವೇರ್ ಕನೆಕ್ಟ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೊಡ್ಡ ಕನಸುಗಳನ್ನು ಕಾಣುವ ಸ್ವಭಾವ ನಿಮ್ಮದಾಗಲಿ. ನಾವೀನ್ಯತೆ ಎಂಬುದು ಪ್ರತಿ ಹಂತದಲ್ಲಿ ರೂಡಿಗತವಾಗಲಿ. ನಿದ್ದೆಯಲ್ಲಿಯು ಆ ಕನಸುಗಳು ನಮ್ಮನ್ನು ಜಾಗೃತಗೊಳಿಸುತ್ತಿರಬೇಕು.
Also read: ಸುಂದರ ಫೋಟೋಗಳನ್ನು ಹಂಚಿಕೊಂಡು ಪತಿ ಹುಟ್ಟುಹಬ್ಬದ ಶುಭಾಶಯ ಕೋರಿದ ಸುಮಲತಾ ಅಂಬರೀಶ್
ಜೀವನವೆಂಬುದು ಅನುಭವಾಧಾರಿತ ಹೂರಣ. ಸೋಲು ಗೆಲುವುಗಳ ನಿರಂತರತೆಯಲ್ಲಿ ಸೋಲು ನಿಮ್ಮನ್ನು ಕಾಡದಿರಲಿ. ಅನುಭವಗಳು ಹೊಸತನದ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ತನದೊಂದಿಗೆ ನೀವು ಹೋರಾಡಿ.ಇತರರ ಯಶಸ್ಸು ಪ್ರೇರಣೆಯಾಗಿ ಪಡೆಯಿರಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ, ತಂತ್ರಜ್ಞಾನದ ಕ್ಷೇತ್ರದಲ್ಲಿ ಕಲಿಕೆಯೊಂದಿಗೆ ಪ್ರಯೋಗಗಳ ಅವಶ್ಯಕತೆಯಿದೆ. ಯಾವುದೇ ನಾವೀನ್ಯ ಪ್ರಯೋಗಗಳು ನಮ್ಮಲ್ಲಿರುವ ಕಲಿಕೆಯ ಗುಣಮಟ್ಟದ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಪ್ರಾಯೋಗಿಕ ಕಲಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಿ. ನೀವು ರೂಪಿಸುವ ಪ್ರಯೋಗಗಳು ಕೇವಲ ಶೈಕ್ಷಣಿಕ ಸೀಮಿತತೆಗೆ ಒಳಗಾಗದೇ ಪೆಟೆಂಟ್ ಫೈಲಿಂಗ್, ಸ್ಟಾರ್ಟ್ ಅಪ್ ಗಳಿಗೆ ಬಡ್ತಿ ಪಡೆಯಲಿ ಎಂದು ಹೇಳಿದರು.
ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಪೂರ್ಣಿಮಾ.ಕೆ.ಎಂ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವಿ.ಸತ್ಯನಾರಾಯಣ, ಕಾರ್ಯಕ್ರಮ ಸಂಯೋಜಕರಾದ ಡಾ.ಜಲೇಶ್ ಕುಮಾರ್, ಡಾ.ಮಂಜುಳ.ಜಿ.ಆರ್, ಡಾ.ಬೆನಕಪ್ಪ ಎಸ್.ಎಂ, ಸುಷ್ಮಾ.ಆರ್ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 40 ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















