ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಳಮೀಸಲಾತಿ ರೋಸ್ಟರ್ ಹಂಚಿಕೆ ಮತ್ತು ಹಳೆ ಮೀಸಲಾತಿ ವ್ಯವಸ್ಥೆಯ ಅನ್ವಯವೇ ನೇಮಕಾತಿ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಮಾ.24 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವೈ.ನಾನ್ಯನಾಯ್ಕ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಬಂಜಾರ ಸಮಾಜದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದರು.
ಒಳಮೀಸಲಾತಿ ಪರವಾದ ಯಾವುದೇ ಹೋರಾಟವನ್ನು ನಾವು ಟೀಕೆ ಮಾಡಲು ಸಿದ್ಧರಿಲ್ಲ, ಏಕೆಂದರೆ ಪರಿಶಿಷ್ಟ ಜಾತಿಯೊಳಗಿನ 101 ಜಾತಿಯ ಜನರು ಕೂಡಾ ನಾವು ಇದುವರೆಗೂ ಅಣ್ಣ ತಮ್ಮಂದಿರಂತೆ ಬದುಕಿದ್ದೇವೆ. ಆದರೆ ಒಳಮೀಸಲಾತಿ ಹಂಚಿಕೆಗೆ ನ್ಯಾ. ನಾಗಮೋಹನ್ದಾಸ್ ಆಯೋಗ ಸಂಗ್ರಹಿಸಿರುವ ದತ್ರಾಂಶ ಒಂದು ಸಮಾಜಕ್ಕೆ ಪೂರ್ವಾಗ್ರಹ ಪೀಡಿತವಾಗಿದೆ ಎನ್ನುವುದು ನಮ್ಮ ಅಭಿಪ್ರಾಯ. ಇದನ್ನು ಹಲವಾರು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಸಮುದಾಯದ ರಾಜಕೀಯದ ಒತ್ತಡಕ್ಕೆ ಮಣಿದು ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಈಗ ಮತ್ತೆ ಅದೇ ಅನ್ಯಾಯ ಮುಂದುವರಿಯುವ ಆತಂಕ ಎದುರಾಗಿದೆ. ಒಂದು ಹಂತದಲ್ಲಿ ಇದು ಬಂಜಾರ, ಭೋವಿ, ಕೊರಚ, ಕೊರಮ ಸೇರಿದಂತೆ ಅಲೆಮಾರಿ ಸಮಾಜಕ್ಕೆ ಮರಣ ಶಾಸನವಾಗಿದೆ ಎನ್ನುವುದು ನಮ್ಮ ಆತಂಕ. ಒಳಮೀಸಲಾತಿ ಈಗ ಗೊಂದಲದ ಗೂಡಾಗಿದೆ. ಸರ್ಕಾರಿ ಹುದ್ದೆಗಳ ನೇಮಕಾತಿ ವಿಚಾರಕ್ಕೆ ಈಗ ಕೋರ್ಟ್ ಶೇ.15ರ ಮೀಸಲಾತಿ ಪ್ರಕಾರ ನೇಮಕ ಮಾಡುವಂತೆ ಹೇಳಿದೆ. ಮತ್ತೊಂದೆಡೆ ಹಿಂದಿನ ಸರ್ಕಾರ ಮಾಡಿದ್ದ ಶೇ.17ರ ಮೀಸಲಾತಿ ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಲ್ಲ ಎಂದರು.
ರಾಜ್ಯಸರ್ಕಾರದ ಒಳಮೀಸಲಾತಿ ಹಂಚಿಕೆಯ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇನ್ನು ಭೋವಿ, ಲಂಬಾಣಿ, ಕೊರಮ, ಕೊರಚ ಜನಾಂಗ ಮುಂದುವರಿದಿದೆ ಎಂದು ನ್ಯಾ. ನಾಗಮೋಹನ್ದಾಸ್ ಆಯೋಗ ಹೇಳಿಲ್ಲ. ಸಂಗ್ರಹಿಸಿರುವ ದತ್ತಾಂಶಕ್ಕೂ ಸರ್ಕಾರಕ್ಕೆ ನೀಡಿರುವ ವರದಿಗೂ ವ್ಯತ್ಯಾಸವಿದೆ. ಇಷ್ಟು ಗೊಂದಲಗಳ ನಡುವೆಯೂ ಒಂದು ಸಮುದಾಯ ಮೀಸಲಾತಿ ಜಾರಿಗೆ ಪಟ್ಟು ಹಿಡಿದಿದೆ. ಇದಕ್ಕೆ ರಾಜಕೀಯ ಒತ್ತಡ ಹೇರುತ್ತಿದ್ದು, ಜೊತೆಗೆ ಸರ್ಕಾರದ ನಿರ್ಲಕ್ಷ್ಯದ ಧೋರಣೆ ಯಾರನ್ನು ಹೇಗೆ ಬಲಿಪಶು ಮಾಡಲಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಈ ಬೃಹತ್ ಪ್ರತಿಭಟನೆಗೆ ಜಿಲ್ಲೆಯ ಎಲ್ಲಾ ಬಂಜಾರ, ಭೋವಿ, ಕೊರಚ, ಕೊರಮ ಇತ್ಯಾದಿ 59 ಜಾತಿ ಸಮುದಾಯದ ತಾಂಡಾ, ಹಟ್ಟಿ, ಗ್ರಾಮದ ಪ್ರತಿಯೊಬ್ಬರೂ ಹಾಗೂ ಸಮಾಜಗಳ ಸಂಘಗಳ ಪದಾಧಿಕಾರಿಗಳು ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು
ಪತ್ರಿಕಾಗೋಷ್ಠಿಯಲ್ಲಿ ಭೋವಿ, ಲಂಬಾಣಿ, ಕೊರಚ, ಕೊರಮದ ಮುಖಂಡರುಗಳಾದ ವೀರಭದ್ರಪ್ಪ ಪೂಜಾರಿ, ಧೀರರಾಜ್ ಹೊನ್ನವಿಲೆ, ಬಿ.ಜಗದೀಶ್, ಎಸ್.ರವಿಕುಮಾರ್, ಆರ್.ಜಗದೀಶ್, ಸುರೇಶ್, ಬನ್ನೂರು, ಬೋಜ್ಯಾನಾಯ್ಕ, ಆಯನೂರು ಶಿವಾನಾಯ್ಕ, ಪ್ರೇಮ್ಕುಮಾರ್, ಹೊಂಗಿರಣ ಲೋಕೇಶ್, ದೇವಿಕುಮಾರ್, ಟಿ.ಕೃಷ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















