ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೇಡಿಯೋ ಶಿವಮೊಗ್ಗ 90.8 ಸಮುದಾಯ ಬಾನುಲಿಯಲ್ಲಿ ಇಂದು ಶಿವಮೊಗ್ಗ ನಗರದ ಮಹಾಪೌರ ಶಿವಕುಮಾರ್ ಅವರೊಂದಿಗೆ ನೇರಪ್ರಸಾರದ ಫೋನ್ ಇನ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಆರ್ ಜೆ ಅರ್ಪಿತಾ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿವಮೊಗ್ಗದ ಹಲವಾರು ಕಡೆಯ ಕೇಳುಗರು ಕರೆ ಮಾಡಿ ತಮ್ಮ ಅಹವಾಲು ಹೇಳಿಕೊಂಡರು. ನೀರು, ರಸ್ತೆ, ಚರಂಡಿ, ಬೀದಿ ದೀಪದ ಸಮಸ್ಯೆ ಹೀಗೆ ಹಲವಾರು ವಿಚಾರಗಳನ್ನು ಕೇಳುಗರು ಪ್ರಸ್ತಾಪಿಸಿದರು.
ಕೇಳುಗರ ಪ್ರಶ್ನೆಗಳಿಗೆ ಸಮರ್ಥವಾಗಿ, ಸಹನೆಯಿಂದ ಸ್ಪಂದಿಸಿದ ಮೇಯರ್ ಶಿವಕುಮಾರ್ ಸ್ಮಾರ್ಟ್ ಸಿಟಿ ಕಾಮಗಾರಿ, ಮಹಾನಗರಪಾಲಿಕೆ ಕೆಲಸಗಳು, ಕೇಂದ್ರ ಸರ್ಕಾರದ ಕಾಮಗಾರಿಗಳು ಇವುಗಳ ಬಗ್ಗೆ ವಿಷದವಾಗಿ ತಿಳಿಸಿಕೊಟ್ಟರು. ಇದರ ಜೊತೆಗೆ ಶಿವಮೊಗ್ಗ ನೀರು ಸರಬರಾಜು ವ್ಯವಸ್ಥೆಯು ಜಲ ಮಂಡಳಿಗೆ ಸೇರಿದ್ದು, ಪಾಲಿಕೆ ಸದಸ್ಯರು ಸ್ವಯಂ ಸ್ಫೂರ್ತಿಯಿಂದ ಇದರ ಬಗ್ಗೆಯೂ ಗಮನಿಸಿ ನೋಡಿಕೊಳ್ಳುತ್ತಿರುವುದಾಗಿ ತಿಳಿಸಿದರು.
Also read: ಭದ್ರಾವತಿ ನಗರಸಭೆ ಉಪಾಧ್ಯಕ್ಷರಾಗಿ ಸರ್ವಮಂಗಳ ಭೈರಪ್ಪ ಆಯ್ಕೆ
ಯಾವುದೇ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಉಂಟಾದರೆ, ಸಂಬಂಧಿಸಿದ ಇಂಜಿನಿಯರ್ ಗೆ ಕರೆ ಮಾಡಬಹುದು. ಅವರು ಟ್ಯಾಂಕರ್ ವ್ಯವಸ್ಥೆ ಮಾಡುತ್ತಾರೆ. ಏಪ್ರಿಲ್ ಅಥವಾ ಮೇ ಸುಮಾರಿಗೆ ಜಲ ಜೀವನ್ ಮಿಷನ್ ಎಲ್ಲೆಡೆ ಚಾಲ್ತಿಯಾಗಬಹುದು. ಪಾರ್ಕ್ ನ್ನು ಬಡಾವಣೆ ನಿರ್ಮಾರ್ತೃಗಳೇ ಸಂಪೂರ್ಣವಾಗಿ ನಿರ್ಮಿಸಿಕೊಡಬೇಕು. ಅದಾಗುತ್ತಿಲ್ಲ. ಆದರೂ ಪಾಲಿಕೆ, ಅಂತಹ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಿಕೊಡುತ್ತಿದೆ. ಗಾಂಧಿ ಪಾರ್ಕ್ ಮರು ಅಭಿವೃದ್ಧಿಗೆ ಹಣವನ್ನು ಪಾಲಿಕೆ ನೀಡಿದೆ. ನಿರ್ವಹಣೆಗೆ ಎನ್ ಜಿ ಒಗೆ ಅರ್ಜಿ ಕರೆಯಲಾಗಿದೆ. ಶೀಘ್ರವೇ ಇದು ಪರಿಹಾರವಾಗುತ್ತದೆ. ತುಂಗಾನದಿಯ ಒಕ್ಕೆಲದಲ್ಲಿ ನಿರ್ಮಿಸಲಾಗಿರುವ ಪಾದಚಾರಿ ಪಥವೀಗ ಅಭಿವೃದ್ಧಿ ಮಾಡಲಾಗುತ್ತಿದ್ದು, ಶೀಘ್ರವೇ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಯಾವುದಾದರೂ ಸಂಘ ಸಂಸ್ಥೆಯವರು ಮುಂದೆ ಬಂದು ಪ್ರಮುಖ ನಗರಗಳ ಮಾದರಿಯಂತೆ ಸ್ಮಾರ್ಟ್ ಸೈಕಲ್ ಬಾಡಿಗೆಗೆ ನೀಡುವ ಸೇವೆ ಆರಂಭಿಸಿದರೆ, ಸಹಕಾರ ನೀಡುವುದಾಗಿ ಭರವಸೆಯಿತ್ತರು.
ಸಾರ್ವಜನಿಕ ಶೌಚಾಲಯ ಬಳಕೆಗೆ ತಂತ್ರಜ್ಞಾನ ಬದಲಾಯಿಸುತ್ತಿದ್ದು, ಉಚಿತವಾಗಿ ಬಳಕೆಗೆ ಶೀಘ್ರವೇ ದೊರೆಯಲಿದೆ. ಕಸದ ಗಾಡಿಯವರು ಹಣಕ್ಕೆ ಒತ್ತಾಯಿಸಿದರೆ, ಸಂಬಂಧಿಸಿದ ವಾರ್ಡ್, ವಾಹನದ ನಂಬರ್ ನೀಡಿದರೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ರೇಡಿಯೋ ಶಿವಮೊಗ್ಗ ಅತ್ಯುತ್ತಮ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ. ಸಮಾಧಾನವಾಗಿ ಬಾನುಲಿ ಕೇಳುವದರಿಂದ ಮನಸ್ಸಿಗೆ ಮುದವಾಗುವುದರ ಜೊತೆಗೆ ಅನೇಕಾನೇಕ ಮಾಹಿತಿಗಳು ಇದರಲ್ಲಿ ದೊರೆಯುತ್ತಿದೆ ಎಂದು ಶ್ಲಾಘಿಸಿದ ಅವರು, ಜನರು ಪ್ಲಾಸ್ಟಿಕ್ ಸಂಪೂರ್ಣ ತೊರೆಯಬೇಕು. ಕಸವನ್ನು ಮೂಲದಲ್ಲೇ ವಿಂಗಡಿಸಿ ನೀಡಬೇಕು. ಪೈಪ್ ಕಾಂಪೋಸ್ಟ್ ಗೆ ಹೆಚ್ಚು ಆದ್ಯತೆ ನೀಡಬೇಕು. ಶಿವಮೊಗ್ಗ ನಗರ ಹಸಿರೀಕರಣವಾಗಬೇಕು ಎಂಬ ಕನಸನ್ನು ಹಂಚಿಕೊಂಡರು.
ವಿಜಯ ಕುಮಾರ್ ಕೃಷಿ ನಗರ, ಕಿರಣ್ ಕುವೆಂಪು ನಗರ, ವಾಣೀ ಶಾಂತಿ ನಗರ, ಶಂಕರನಾರಾಯಣ ಬಸವನಗಂಗೂರು, ಯೋಧ ಕುಪೇಂದ್ರಪ್ಪ, ಆಶಾ ಕೃಷಿ ನಗರ, ರವಿಕುಮಾರ್ ಬಸವನಗುಡಿ, ಮಣಿ ರಾಜೇಂದ್ರ ನಗರ, ಲಕ್ಷ್ಮೀ ಪ್ರಭಾಕರ್ ವಿವೇಕಾನಂದ ಬಡಾವಣೆ, ಕುಸುಮಾ ಕೃಷಿ ನಗರ, ಪ್ರೇಮ ಕುಮಾರ್ ಶಿವಮೊಗ್ಗ, ಶ್ರೀಧರ್ ಶಿವಮೊಗ್ಗ ಕರೆ ಮಾಡಿ ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post