ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್, ಅವರ ಮಾತಿಗೆಲ್ಲ ಉತ್ತರ ಕೊಡುತ್ತಾ ಸಮಯ ವ್ಯರ್ಥ ಮಾಡಲು ನಾನು ಸಿದ್ಧನಿಲ್ಲ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಕಟೀಲ್ ವಿರುದ್ಧ ಕಿಡಿಕಾರಿದರು. ಪರೇಶ್ ಮೇಸ್ತಾ ಸಾವು ಸಂಭವಿಸಿದಾಗ ಬಿಜೆಪಿಯವರು ಸದನದಲ್ಲಿ ಗಲಾಟೆ ಮಾಡಿದರು, ಉತ್ತರ ಕನ್ನಡದಲ್ಲೂ ಗಲಭೆ ಮಾಡಿಸಿದರು. ಈ ಪ್ರಕರಣವನ್ನು ನಾನು ಸಿಬಿಐ ಗೆ ವಹಿಸಿದ್ದೆ. ಆಗ ಪ್ರಧಾನಿಯಾಗಿದ್ದವರು ನರೇಂದ್ರ ಮೋದಿ ಅವರು. ಗೃಹ ಸಚಿವರಾಗಿದ್ದವರು ಅಮಿತ್ ಶಾ ಅವರು. ಈಗ ಸಿಬಿಐ ವರದಿಯಲ್ಲಿ ಇದು ಆಕಸ್ಮಿಕ ಸಾವು ಎಂದು ಬಂದಿದೆ. ಅದಕ್ಕೆ ಬಿಜೆಪಿಯವರು ಸಿದ್ದರಾಮಯ್ಯನವರು ಸಾಕ್ಷ್ಯ ನಾಶ ಮಾಡಿದ್ರು ಎನ್ನುತ್ತಿದ್ದಾರೆ, ಇವರ ಯೋಗ್ಯತೆಗೆ 2008 ರಿಂದ 2013ರ ವರಗೆ ಅಥವಾ ಈಗ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಪ್ರಕರಣವನ್ನು ಸಿಬಿಐ ಗೆ ವಹಿಸಿದ್ದಾರಾ? ಇದೇ ಬಿಜೆಪಿಯವರು ಹಿಂದೆ ಸಿಬಿಐ ಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಎನ್ನುತ್ತಿದ್ದರು, ಜೆಡಿಎಸ್ ನವರು ಚೋರ್ ಬಚಾವೋ ಇನ್ಸ್ಟಿಟ್ಯೂಟ್ ಎನ್ನುತ್ತಿದ್ದರು. ಈಗ ಸಿಬಿಐ ಗೆ ಏನಂತ ಕರೀಬೇಕು ನೀವೇ ಹೇಳಿ ನೋಡೋಣ? ಬಿಜೆಪಿ ಅವರ ಕೆಲಸ ಅಪಪ್ರಚಾರ ಮತ್ತು ಸುಳ್ಳು ಹೇಳುವುದು ಎಂದು ಟೀಕಿಸಿದರು.
ಭಾರತ ಐಕ್ಯತಾ ಯಾತ್ರೆಯ ಉದ್ದೇಶ ದ್ವೇಷ ರಾಜಕಾರಣದಿಂದ ಒಡೆದು ಹೋಗಿರುವ ಮನಸುಗಳನ್ನು ಒಂದುಗೂಡಿಸುವುದು, ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರ ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ. ಆದರೆ ಬಿಜೆಪಿಯವರು ರಾಹುಲ್ ಗಾಂಧಿ ಅವರ ಬಗ್ಗೆ ಅಪಪ್ರಚಾರ ಮಾಡಿ ನಮ್ಮ ಯಾತ್ರೆಯ ಬಗ್ಗೆ ತಪ್ಪು ಮಾಹಿತಿ ನೀಡಲು ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Also read: ಅಪ್ಪು ಪುನರ್ ಜನ್ಮೋತ್ಸವ: ಪುನೀತ್ ಹಾಡಿಗೆ ಕುಣಿದು ಕುಪ್ಪಳಿಸಿದ ಮಕ್ಕಳು
ಶಿವಮೊಗ್ಗದಲ್ಲಿ ಗಲಾಟೆ ಮಾಡಿಸುವುದು ಈಶ್ವರಪ್ಪನವರು. ಜನರನ್ನು ಎತ್ತಿಕಟ್ಟಿ ಜಗಳ ಮಾಡುವಂತೆ ಮಾಡುವುದು ಅವರೆ. ಹರ್ಷ ಕೊಲೆಯಾದಾಗ ಆತನ ಹೆಣ ಇಟ್ಟುಕೊಂಡು ಮೆರವಣಿಗೆ ಮಾಡಿದರು, ಆಗ 144 ಸೆಕ್ಷನ್ ಇತ್ತು. ಸರ್ಕಾರವೂ ಇವರದೇ ಇದೆ ಆದರೂ ಒಬ್ಬ ಮಂತ್ರಿಯಾಗಿ ಈ ರೀತಿ ಮೆರವಣಿಗೆ ಮಾಡಿದರು. ಇತಿಹಾಸದಲ್ಲಿ ಎಲ್ಲೂ ಹೀಗೆ ನಡೆದಿಲ್ಲ. ಈಶ್ವರಪ್ಪ ಅವರಂತವರಿಂದಲೇ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಆಗುವುದಿಲ್ಲ ಎಂದರು.
ಶ್ರೀರಾಮುಲು ಅವರು ನಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನ್ಯಾ. ನಾಗಮೋಹನ್ ದಾಸ್ ಅವರ ವರದಿ ಜಾರಿ ಮಾಡುತ್ತೇವೆ, ಇದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದು ಹೇಳಿದ್ದರು. ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ವರದಿ ಜಾರಿ ಮಾಡಿದರಾ? ಶ್ರೀರಾಮುಲು ಸಚಿವರಾಗಿರಲಿಲ್ವಾ? ನಾನು ರಾಮುಲು ಅವರನ್ನು ಪೆದ್ದ ಎನ್ನಲು ಕಾರಣ ಅವರೇ ಒಮ್ಮೆ ತಮ್ಮನ್ನು ತಾವು ಪೆದ್ದ ಎಂದು ಕರೆದುಕೊಂಡಿದ್ದರು. ಕೆಲವು ದಿನಗಳ ಹಿಂದೆ ಅವರು ಮಾತನಾಡುವಾಗ “ನಾನು ಉದ್ದವಿದ್ದೇನೆ ಆದರೂ ಪೆದ್ದ, ಆದರೆ ಬಸವರಾಜ ಬೊಮ್ಮಾಯಿ ಕುಳ್ಳ ಇದ್ದರೂ ಬುದ್ದಿವಂತ’ ಎಂದು ಹೇಳಿದ್ದರು. ಅವರ ಮಾತನ್ನೇ ನಾನು ನೆನಪು ಮಾಡಿದ್ದು ಅಷ್ಟೆ. ಸಮ್ಮಿಶ್ರ ಸರ್ಕಾರ ಇದ್ದಾಗ, ನಮ್ಮ ಪಕ್ಷದ ಪ್ರಿಯಾಂಕ್ ಖರ್ಗೆ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು ಆಗ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಆಗಿದ್ದು.ಈ ಸಮಿತಿ ವರದಿ ನೀಡಿದ್ದು ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post