ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹಿಂದೂ ಸಂಸ್ಕೃತಿಯಲ್ಲಿನ ನವರಾತ್ರಿ ವೈಭವಕ್ಕೆ ಮೆರಗು ನೀಡುವುದೇ ಬೊಂಬೆ ಅಲಂಕಾರ. ಕೋವಿಡ್ ಕಾರಣದಿಂದ ಈ ಬಾರಿ ನವರಾತ್ರಿ ಸಂಭ್ರಮಕ್ಕೆ ಕೊಂಚ ಮಂಕು ಕವಿದಿದ್ದರೂ, ಬೊಂಬೆ ಅಲಂಕಾರಕ್ಕೆ ಇದು ಪೂರ್ಣ ಆವರಿಸಿಲ್ಲ.
ದಶಕಗಳಿಂದ ಬೊಂಬೆ ಅಲಂಕಾರ ನಡೆಸಿಕೊಂಡು ಬರುತ್ತಿರುವವರ ನಿವಾಸಗಳಲ್ಲಿ ಈ ಸಂಪ್ರದಾಯ ಮುಂದವರೆದಿದೆ.
ನಗರದ ಎನ್’ಎಂಸಿ 2ನೆಯ ಅಡ್ಡರಸ್ತೆಯಲ್ಲಿರುವ ಆಡಿಟರ್ ಶ್ರೀಪಾದ ಅವರ ನಿವಾಸದಲ್ಲಿ ಮಾಡಲಾಗಿರುವ ಬೊಂಬೆ ಅಲಂಕಾರ ಹಿಂದೂ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರವನ್ನು ಸಾರುತ್ತಿದೆ.
ಶ್ರೀಪಾದ ಅವರ ಪತ್ನಿ ಚಂದ್ರಿಕಾ ಅವರು ದಶಕಗಳ ಕಾಲದಿಂದಲೂ ಪ್ರತಿವರ್ಷವೂ ವಿಭಿನ್ನ ರೀತಿಯಲ್ಲಿ, ವೈಭವಯುತವಾಗಿ ಬೊಂಬೆ ಅಲಂಕಾರ ಮಾಡುತ್ತಿದ್ದಾರೆ.
ಪಟ್ಟದ ಬೊಂಬೆ, ಮೈಸೂರು ದಸರಾ ಮೆರವಣಿಗೆಯನ್ನು ಸಾರುವ ಬೊಂಬೆಗಳು, ನಾಡದೇವತೆ ಚಾಮುಂಡೇಶ್ವರಿ, ಮಹಿಷಾಸುರ, ಶ್ರೀನಿವಾಸ ಕಲ್ಯಾಣೋತ್ಸವ, ಸಾಂಪ್ರದಾಯಿಕ ಆಚರಣೆ, ವಾದ್ಯಗಳು, ತಿರುಪತಿ ದೇವರ ಅಲಂಕಾರ, ಕೃಷ್ಣಾವತಾರ ಹಾಗೂ ಲೀಲೆಗಳು ಸೇರಿದಂತೆ ಸುಮಾರು 500ಕ್ಕೂ ಅಧಿಕ ಬೊಂಬೆಗಳನ್ನು ಅಲಂಕಾರ ಮಾಡಲಾಗಿದೆ.
ಚಂದ್ರಿಕಾ ಅವರು ಪ್ರತಿ ವರ್ಷ ಸುಮಾರು 1000 ಸಾವಿರಕ್ಕೂ ಅಧಿಕ ಬೊಂಬೆಗಳನ್ನು ಅಲಂಕಾರ ಮಾಡುತ್ತಾರೆ. ಆದರೆ, ಈ ಬಾರಿ ಕೋವಿಡ್19 ಸೋಂಕಿನ ಹಾವಳಿ ಎಲ್ಲೆಡೆ ಹಬ್ಬದ ಸಂಭ್ರಮಕ್ಕೆ ಮಂಕು ಕವಿದಿದೆ. ಹೀಗಾಗಿ, ಹೆಚ್ಚಿನ ಅಲಂಕಾರ ಮಾಡದೇ ಪ್ರತಿವರ್ಷದ ಅರ್ಧದಷ್ಟು ಅಲಂಕಾರ ಮಾಡಿದ್ದರೂ, ವಿದ್ಯುತ್ ದೀಪಗಳ ಹಾಗೂ ಸಾಂಪ್ರದಾಯಿಕ ದೀಪಗಳ ಅಲಂಕಾರ ಮಾಡಿರುವ ಕಾರಣ ಆಕರ್ಷಕವಾಗಿ ಮೂಡಿಬಂದಿದೆ.
ನವರಾತ್ರಿ ಆರಂಭದಿಂದ ಅಲಂಕಾರ ಮಾಡಲಾಗಿದ್ದು, ವಿಜಯದಶಮಿಗೆ ಮುಕ್ತಾಯವಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post