ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮ ಮಟ್ಟದಿಂದ ಸಂಸ್ಕೃತ ಕಲಿಸುವ ಅಭಿಯಾನ ಆಗಬೇಕು ಆಗ ಸಂಸ್ಕೃತ ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ತಿಳಿಸಿದರು.
ಸಂಸ್ಕೃತ ಭಾರತೀ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಬಿಬಿ ರಸ್ತೆಯಲ್ಲಿರುವ ಸಂಸ್ಕೃತ ಭವನದಲ್ಲಿ 32 ನೆಯ ರಾಜ್ಯಸ್ತರ ಸಂಸ್ಕೃತ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶ ಹಳ್ಳಿಗಳಿಂದ ಕೂಡಿದ ದೇಶ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸಂಸ್ಕೃತಿಯ ವಾತಾವರಣ ನಿರ್ಮಾಣವಾಗಬೇಕು. ಇದಕ್ಕೆ ಸಂಸ್ಕೃತದ ಜ್ಞಾನ ಅವಶ್ಯವಾಗಿದೆ. ಹಾಗಾಗಿ ಸಂಸ್ಕೃತ ಕಲಿಕೆಯ ಅಭಿಯಾನಕ್ಕೆ ಚಾಲನೆ ನೀಡಿ ಎಂದು ಸಂಸ್ಕೃತ ಭಾರತೀಯ ಕಾರ್ಯಕರ್ತರಿಗೆ ಕರೆ ನೀಡಿದರು.
ಸಂಸ್ಕೃತ ಅತ್ಯಂತ ವೈಜ್ಞಾನಿಕವಾದ ಭಾಷೆ ಈ ಭಾಷೆಯನ್ನು ಕಲಿಯುವುದರ ಮೂಲಕ ನಮ್ಮ ದೇಶದ ಜ್ಞಾನ ಭಂಡಾರವನ್ನು ತಿಳಿಯುವಂತಾಗುತ್ತದೆ. ನಮ್ಮ ಋಷಿ ಮುನಿಗಳು ವಿಜ್ಞಾನ, ತಂತ್ರಜ್ಞಾನ, ಆಯುರ್ವೇದ, ಇತ್ಯಾದಿ ಪ್ರಮುಖ ವಿಷಯಗಳನ್ನು ಸಂಸ್ಕೃತ ಸಾಹಿತ್ಯ, ಶ್ಲೋಕ, ಗ್ರಂಥಗಳಲ್ಲಿ ಬರೆದಿಟ್ಟಿದ್ದಾರೆ. ನಮ್ಮ ದೇಶದಲ್ಲಿರುವ ಎಲ್ಲಾ ತಾಳೇಗರಿಯನ್ನು ಇನ್ನೂ ಪೂರ್ಣವಾಗಿ ಸಂಶೋಧನೆ ಮಾಡಲಾಗಿಲ್ಲ. ಹೆಚ್ಚು ಹೆಚ್ಚು ಜನರು ಸಂಸ್ಕೃತ ಕಲಿತು ಸಂಸ್ಕೃತ ಗ್ರಂಥಗಳಲ್ಲಿರುವ ಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವಂತಾಗಬೇಕು ಎಂದರು. ಸರ್ಕಾರವು ಕೂಡ ಸಂಸ್ಕೃತ ಭಾಷಾ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಂಸ್ಕೃತ ಕಲಿಕೆಯಿಂದ ನಮ್ಮ ಜೀವನದ ಪದ್ಧತಿಯನ್ನು ಉತ್ತಮವಾಗಿ ನಡೆಸಲು ಸಾಧ್ಯವಾಗುತ್ತದೆ ಇದಕ್ಕಾಗಿ ಹಲವಾರು ಸುಭಾಷಿತಗಳು, ಸಂಸ್ಕೃತ ಗ್ರಂಥಗಳು ನಮಗೆ ಸಹಕಾರಿಯಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷ ತೆಯನ್ನು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ. ನರಸಿಂಹಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಕೃತ ಭಾರತಿ ಜಿಲ್ಲಾಧ್ಯಕ್ಷ ಎನ್.ವಿ. ಶಂಕರನಾರಾಯಣ, ಸ್ಪರ್ಧೆಯ ನಿರ್ಣಾಯಕರಾಗಿ ಡಾ. ನವೀನ ಭಟ್, ಅರುಣ್ ಕುಮಾರ್ ಕಾಳಗಿ ಮತ್ತು ವಿದುಷಿ ಸರಯೂ, ಸಂಯೋಜಕ ಅನಂತ ಕೃಷ್ಣ, ಮತ್ತೂರು ಶ್ರೀನಿಧಿ ಉಪಸ್ತಿತರಿದ್ದರು.
ಸ್ಪರ್ಧೆಯ ನಿರ್ಣಾಯಕರ ಪರಿಚಯ ಸಂಸ್ಕೃತ ಭಾರತಿ ಶಿಕ್ಷ ಕಿ ಸುಪ್ರಿಯ ಮಾಡಿಕೊಟ್ಟರು. ಜೆ.ಆರ್. ಸ್ವಾಗತಿಸಿದರು. ಎಂ. ಪ್ರಜ್ಞಾ, ವಂದಿಸಿ, ಎ. ಅಂಜಲಿ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















