ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಬಿಜೆಪಿಯಲ್ಲಿ #BJP ಒಂದು ತಿಂಗಳಿನಿಂದ ಸಂಘಟನಾಪರ್ವ ನಡೆಯುತ್ತಿದ್ದು, ಹಲವು ಕಾರ್ಯಕರ್ತರಿಗೆ ನೂತನ ಜವಾಬ್ದಾರಿಗಳನ್ನು ವಹಿಸಲಾಗಿದ್ದು, ನಿಗಧಿತ ಜವಾಬ್ದಾರಿಯನ್ನು ಹೊತ್ತ ಪದಾಧಿಕಾರಿಗಳು ಸಂಘಟನೆಯನ್ನು ಬಲಪಡಿಸಿ, ಸಂಘಟನಾ ವೇಗವನ್ನು ಹೆಚ್ಚಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಶಿವಮೊಗ್ಗ ನಗರ ಕಾರ್ಯಕಾರಿಣಿ ಮತ್ತು ಸೇವಾ ಪಾಕ್ಷಿಕ ಸಿದ್ಧತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೆ ಒಂದು ಕಾರ್ಯವಿರುತ್ತದೆ. ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡುವುದು ಬೇರೆ. ನಿಗಧಿತ ಜವಾಬ್ದಾರಿಯನ್ನು ಕೊಟ್ಟಮೇಲೆ ವಿಶೇಷ ಜವಾಬ್ದಾರಿಯನ್ನು ವಹಿಸಿ ಕೆಲಸ ಮಾಡುವುದು ವಿಭಿನ್ನವಾಗಿರುತ್ತದೆ. ನಮ್ಮ ಕೆಳಗಿನ ಸ್ಥರದ ಕಾರ್ಯಕರ್ತರನ್ನು ಒಗ್ಗೂಡಿಸಿ, ಜೊತೆಯಾಗಿ ಕೊಟ್ಟಿರುವ ಕಾರ್ಯವನ್ನು ಪೂರ್ಣಗೊಳಿಸುವುದು ಮತ್ತು ನಮಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ನಿಭಾಯಿಸುವ ದೊಡ್ಡ ಹೊಣೆಗಾರಿಕೆ ಇರುತ್ತದೆ ಎಂದರು.
ಹಿರಿಯರ ಹೆಜ್ಜೆ ಗುರುತು ಬಹಳ ದೊಡ್ಡದಿದೆ. ದೊಡ್ಡ ಪ್ರಮಾಣದ ಕಟ್ಟಡ ಕಟ್ಟಿದ್ದಾರೆ. ಅದನ್ನು ಸರಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಪಕ್ಷದ ಬುನಾದಿಗೆ ಹೆಚ್ಚಿನ ಶಕ್ತಿ ತುಂಬಲು ನಾವೇನು ಮಾಡಬೇಕು ನನ್ನ ಕಾರ್ಯವ್ಯಾಪ್ತಿ ಯಾವುದು ಎಂದು ತಿಳಿದುಕೊಂಡು, ಸಂಘಟನೆಗೆ ಹೆಚ್ಚಿನ ಸಮಯ ಕೊಟ್ಟಾಗ ಹೆಚ್ಚಿನ ಬಲ ಕೊಟ್ಟ ಹಾಗೆ ಆಗುತ್ತದೆ. ಆಗ ಮಾತ್ರ ಯಶಸ್ಸಿನ ಕಡೆ ಸಾಗಲು ಸಾಧ್ಯ. ವಿಶ್ವದಲ್ಲೇ 18 ಕೋಟಿ ಸದಸ್ಯರಿರುವ ಅತ್ಯಂತ ದೊಡ್ಡ ರಾಜಕೀಯ ಪಕ್ಷ ನಮ್ಮದಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಅಗತ್ಯವಿದೆ ಎಂದರು.
ಬಿಜೆಪಿ ನಗರಾಧ್ಯಕ್ಷ ಮೋಹನ್ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಖಂಡ ಭಾರತದ ನಿರ್ಮಾಣ ಬಿಜೆಪಿಯ ಉದ್ದೇಶವಾಗಿದೆ. ನಮ್ಮೆಲ್ಲಾ ಬೂತ್ಗಳು ತಾಯಿಬೇರು ಇದ್ದಹಾಗೆ. ನಮ್ಮ ಪಕ್ಷದಲ್ಲಿ ದೇವದುರ್ಲಭ ಕಾರ್ಯಕರ್ತರಿದ್ದಾರೆ. ಅನೇಕ ಬಾರಿ ನಮ್ಮ ಗೆಲುವಿಗೆ ಕಾರಣರಾಗಿದ್ದಾರೆ. ಹಿರಿಯರು ಕಂಡ ಕನಸ್ಸನ್ನು ನನಸು ಮಾಡಲು ಎಲ್ಲರ ಸಹಕಾರ ಅಗತ್ಯವಿದೆ ಮತ್ತು ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಶಾಸಕ ಆರ್.ಕೆ. ಸಿದ್ಧರಾಮಣ್ಣ, ಪ್ರಮುಖರಾದ ಎಸ್. ಜ್ಞಾನೇಶ್ವರ್, ನಾಗರಾಜ್, ಮಂಜುನಾಥ್, ದೀನ್ದಯಾಳ್ ಹಾಗೂ ಪಕ್ಷದ ಪ್ರಮುಖ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು. ಈ ಸಂದರ್ಭದಲ್ಲಿ ನೂತನವಾಗಿ ಹಲವರಿಗೆ ಜವಾಬ್ದಾರಿಗಳನ್ನು ವಹಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















