ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಬಿಜೆಪಿ ವತಿಯಿಂದ ಅ.30 ರಂದು ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಅ.9 ರಂದು ಹುಬ್ಬಳ್ಳಿಯಲ್ಲಿ ಸಮಾವೇಶದ ಪೂರ್ವಭಾವಿ ಸಭೆ ನಡೆಯಲಿದೆ ಎಂದು ಶಾಸಕ ಈಶ್ವರಪ್ಪ MLA Eshwarappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದ ಹಿನ್ನಲೆಯಲ್ಲಿ ಪೂರ್ವಭಾವಿ ಪ್ರವಾಸವನ್ನು ಪಕ್ಷದ ಮುಖಂಡರು ಹಮ್ಮಿಕೊಂಡಿದ್ದು, 5 ತಂಡ ರಚಿಸಲಾಗಿದೆ. ಪೂರ್ವಭಾವಿ ಸಭೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳಿಂದಲೂ ಸುಮಾರು 3 ಸಾವಿರ ಹಿಂದುಳಿದ ವರ್ಗದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಅ.30ರ ಕಲಬುರಗಿ ಸಮಾವೇಶದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ತಂಡ 1 ರಲ್ಲಿ ಕೆ.ಎಸ್. ಈಶ್ವರಪ್ಪ ನೇತೃತ್ವ ವಹಿಸಲಿದ್ದು, ಸೆ. 27 ರಂದು ಶಿವಮೊಗ್ಗ, ಚಿಕ್ಕಮಗಳೂರು, 30 ರಂದು ಚಾಮರಾಜನಗರ, ಅ. 1ರಂದು ಮಂಡ್ಯ, ಹಾಸನ, 3 ರಂದು ಬೀದರ್ ನಲ್ಲಿ ಪ್ರವಾಸ ಕೈಗೊಳ್ಳುವರು ಎಂದರು.
2 ನೇ ತಂಡದಲ್ಲಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಸೆ. 27 ರಂದು ಮಂಗಳೂರು, ಉಡುಪಿ, ಅ. 3 ರಂದು ರಾಯಚೂರು, ಯಾದಗಿರಿಯಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. 3 ನೇ ತಂಡದ ನೇತೃತ್ವವನ್ನು ಸಚವಿ ಕೋಟ ಶ್ರೀನಿವಾಸ ಪೂಜಾರಿ ವಹಿಸಲಿದ್ದು, ಸೆ. 28 ರಂದು ಕೋಲಾರ, ಚಿಕ್ಕಬಳ್ಳಾಪುರ, 29 ರಂದು ಬೆಂಗಳೂರು ಗ್ರಾಮಾಂತರ, ಉತ್ತರ, ದಕ್ಷಿಣ ಹಾಗೂ ರಾಮನಗರ ಪ್ರವಾಸ ಕೈಗೊಂಡಿದ್ದಾರೆ ಎಂದರು.
ತಂಡ 4 ರ ನೇತೃತ್ವವನ್ನು ಸಚಿವ ಬೈರತಿ ಬಸವರಾಜ್ ವಹಿಸಲಿದ್ದು, ಅ. 1 ರಂದು ಚಿತ್ರದುರ್ಗ, ದಾವಣಗೆರೆ, ಅ. 2 ರಂದು ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ, 3 ರಂದು ತುಮಕೂರು, ಮಧುಗಿರಿಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. 5 ನೇ ತಂಡದಲ್ಲಿ ಸಚಿವ ಆನಂದ್ ಸಿಂಗ್ ನೇತೃತ್ವ ವಹಿಸಲಿದ್ದು, ಅ. 1 ರಂದು ವಿಜಯನಗರ, ಬಳ್ಳಾರಿ, 3 ರಂದು ಬೆಳಗಾವಿ, ಚಿಕ್ಕೋಡಿಯಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಂದರು.
ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ನವರು ಏನೂ ಮಾಡಿಲ್ಲ. ಖಾಲಿ ಡಬ್ಬ ಅಲುಗಾಡಿಸಿ ಶಬ್ಧ ಜಾಸ್ತಿ ಮಾಡಿದ್ದು ಬಿಟ್ಟರೆ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ. ಹಿಂದುಳಿದ ವರ್ಗದ ಸಮಾವೇಶ ಮಾಡದೇ ಸಿದ್ಧರಾಮೋತ್ಸವ ಮಾಡಿದ್ದಾರೆ. ಈಗಾಗಲೇ ಡಿಕೆಶಿ ಸರ್ವಾಧಿಕಾರಿ ಧೋರಣೆ ವಿರುದ್ಧ ದಿನೇಶ್ ಗುಂಡೂರಾವ್, ಆರ್.ವಿ. ದೇಶಪಾಂಡೆ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ವಿಭಜನೆಯತ್ತ ಸಾಗಿದೆ. ಹಿಂದುಳಿದ ವರ್ಗದ ಬಗ್ಗೆ ಕಾಂತರಾಜ್ ವರದಿಯನ್ನು 140 ಕೋಟಿ ರೂ. ವೆಚ್ಚದಲ್ಲಿ ತಯಾರಿಸಿ ಅದನ್ನು ವಿಧಾನಸಭೆಯಲ್ಲಿ ಮಂಡಿಸಲಿಲ್ಲ. ಆ ವರದಿಗೆ ಮುಖ್ಯ ಕಾರ್ಯದರ್ಸಿ ಸಹಿಯನ್ನೇ ಹಾಕಿಲ್ಲ. ಮೂಗಿಗೆ ತುಪ್ಪ ಸವರಿ ಕಾಂಗ್ರೆಸ್ ನವರು ಹಿಂದುಳಿದ ವರ್ಗಕ್ಕೆ ಮೋಸ ಮಾಡಿದ್ದಾರೆ. ಹಿಂದುಳಿದವರ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದು 4 ವರ್ಷವಾದರೂ ಕಾಂತರಾಜ್ ವರದಿ ಏಕೆ ಮಂಡಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕರ್ನಾಟದಲ್ಲಿ ಅನೇಕ ಜಾತಿ ಸಮುದಾಯಗಳು ಮೀಸಲಾತಿ ಕೇಳುತ್ತಿದ್ದಾರೆ. ಅದಕ್ಕಾಗಿ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರ್ಕಾರ ಆದೇಶ ನೀಡಿದ್ದು, ಜಯಪ್ರಕಾಶ್ ಹೆಗ್ಗಡೆ ನೇತೃತ್ವದ ಸಮಿತಿ ಸಂಪೂರ್ಣ ವರದಿ ಕೊಟ್ಟ ನಂತರ ಜಾರಿ ಮಾಡಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದರು.
Also read: ಸೆ.26ರಿಂದ ಅ.4ರವರೆಗೆ ಅದ್ಧೂರಿ ಸಾಂಸ್ಕೃತಿಕ ದಸರಾ ಆಚರಣೆ: ಎಸ್.ಜಿ. ರಾಜು
‘ಪೇ ಸಿಎಂ’ ಪೋಸ್ಟರ್ ಬಗ್ಗೆ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ಇಷ್ಟು ನೀಚಮಟ್ಟಕ್ಕೆ ಇಳಿಬಾರದಿತ್ತು. ಕಂಟ್ರ್ಯಾಕ್ಟ್ ಅಸೋಸಿಯೇಷನ್ ಅಧ್ಯಕ್ಷ ಕಾಂಗ್ರೆಸಿಗರ ಚೇಲಾ ಕೆಂಪಣ್ಣ ಪ್ರಧಾನಿ ಮೋದಿಗೂ ಪತ್ರ ಬರೆದು ಆರೋಪ ಮಾಡಿದರು. ಆದರೆ, 40 ಪರ್ಸೆಂಟ್ ಕಮಿಷನ್ ಬಗ್ಗೆ ಒಂದೇ ಒಂದು ದಾಖಲೆ ಬಿಡುಗಡೆಯಾಗಿಲ್ಲ. ಚುನಾವಣೆ ನಡೆದರೆ ಕಾಂಗ್ರೆಸ್ ಮತ ಬ್ಯಾಂಕ್ ನಲ್ಲಿ ಶೇ. 40 ರಷ್ಟು ಮತಗಳು ಕಡಿಮೆಯಾಗಲಿವೆ ಎಂದರು.
ದಾರಿ ತಪ್ಪುತ್ತಿರುವ ಮುಸ್ಲಿಂ ಯುವಕರನ್ನು ಅವರ ಸಮುದಾಯದ ಹಿರಿಯರು ಹದ್ದುಬಸ್ತಿನಲ್ಲಿ ಇಡದಿದ್ದರೆ ಅವರು ರಾಷ್ಟ್ರದ್ರೋಹಿಗಳಾಗಿ ಹೊರ ಹೊಮ್ಮುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮುಸ್ಲಿಂ ಹಿರಿಯರಿಗೆ ಕಿವಿಮಾತು ಹೇಳಿದ್ದಾರೆ.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್.ಡಿ.ಪಿ.ಐ., ಪಿಎಫ್ಐ ಮುಂತಾದ ಸಂಘಟನೆಗಳು ರಾಷ್ಟ್ರದ್ರೋಹದ ಸಂಘಟನೆಗಳಾಗಿ ಹೊರ ಹೊಮ್ಮುತ್ತಿವೆ. ಬಿಜೆಪಿ ಇಂತಹ ಸಂಘಟನೆಗಳ ಬಗ್ಗೆ ಹುಷಾರಾಗಿರಬೇಕೆಂದು ಆಗಾಗ ಎಚ್ಚರಿಸುತ್ತಾ ಬಂದಿದೆ. ಆದರೂ, ಮುಸ್ಲಿಂ ಯುವಕರು ಪ್ರಚೋದನೆಗೆ ಒಳಗಾಗಿ ಐಎಸ್ಐ ಉಗ್ರ ಸಂಘಟನೆಗೆ ಸೇರುತ್ತಿದ್ದಾರೆ. ಇದು ತುಂಬಾ ಅಪಾಯಕಾರಿ ಎಂದರು.
ಮುಸ್ಲಿಂ ಸಮಾಜದ ಹಿರಿಯರು ಇವರನ್ನು ಹದ್ದುಬಸ್ತಿನಲ್ಲಿಡಬೇಕಾಗಿದೆ. ಇಲ್ಲದಿದ್ದರೆ ಇವರು ಬಾಂಬ್ ತಯಾರಿಸಿಯೋ ಅಥವಾ ತರಬೇತಿ ಪಡೆದೋ, ಚಾಕು ಚೂರಿ ಸಂಸ್ಕೃತಿ ಹೊಂದಿ ರಾಷ್ಟ್ರದ್ರೋಹಿಗಳಾಗಿ, ಭಯೋತ್ಪಾದಕರಾಗಿ ಜೈಲು ಸೇರುವುದು ಖಚಿತ. ಇಂತಹ ಸಂಘಟನೆಗಳಿಗೆ ವಿದೇಶಗಳಿಂದ ಕೋಟ್ಯಂತರ ರೂ. ಹರಿದು ಬರುತ್ತಿದೆ ಎಂದರು.
ಈಗಾಗಲೇ ಎನ್ಐಎ ವಿಶೇಷ ನ್ಯಾಯಾಲಯ ಸೆ. 21 ರಂದು ತನಿಖೆಗೆ ಆದೇಶ ನೀಡಿ ವಾರೆಂಟ್ ಜಾರಿಗೊಳಿಸಿತ್ತು. ಈ ಹಿನ್ನಲೆಯಲ್ಲಿ ಏಕಕಾಲದಲ್ಲಿ ದೇಶಾದ್ಯಂತ ದಾಳಿ ನಡೆದಿದ್ದು, ದುಷ್ಕೃತ್ಯಗಳು ಹೊರ ಬಂದಿವೆ. ಇಂತಹ ದುಷ್ಕೃತ್ಯಗಳು ನಡೆಯುತ್ತಿದ್ದರೂ ಒಬ್ಬನೇ ಒಬ್ಬ ಕಾಂಗ್ರೆಸ್ ಮುಖಂಡ ಇದು ತಪ್ಪು ಎಂದು ಹೇಳಿಲ್ಲ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್, ಯುವಕರಿಗೆ ಉದ್ಯೋಗವಿಲ್ಲ. ಹಾಗಾಗಿ ಬಾಂಬ್ ತಯಾರು ಮಾಡುತ್ತಾರೆ ಎಂದು ಹೇಳುವ ಮೂಲಕ ಇಂತಹ ಸಂಘಟನೆಗಳಿಗೆ ಬೆಂಬಲ ನೀಡಿದರೆ ಇದು ತಪ್ಪು ಎಂದು ಕಾಂಗ್ರೆಸ್ ಮುಖಂಡರು ಹೇಳಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post