ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಓದಿನಲ್ಲಿ ಶಿಸ್ತನ್ನು ಬೆಳೆಸಿಕೊಂಡಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ 425 ರ್ಯಾಂಕ್ ಪಡೆದ ಮೇಘನಾ ಹೇಳಿದರು.
ಅವರು ಇಂದು ಬೆಳಗ್ಗೆ ನಗರದ ಆರ್ಯ ವಿಜ್ಞಾನ ಪಿಯು ಕಾಲೇಜಿನ ಓರಿಯಂಟೇಷನ್ ಮತ್ತು ಫ್ರೆಷರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಸದಾ ಕುತೂಹಲಗಳಿಂದ ಕೂಡಿರುತ್ತದೆ. ಎಸ್ಎಸ್ಎಲ್ಸಿವರೆಗೂ ನಮ್ಮ ಜವಾಬ್ದಾರಿಗಳನ್ನು ಬೇರೆ ಬೇರೆಯವರು ಹೊತ್ತಿರುತ್ತಾರೆ. ಆದರೆ, ಪಿಯು ಕಾಲೇಜಿಗೆ ಬಂದ ಮೇಲೆ ನಮ್ಮ ಜವಾಬ್ದಾರಿಗಳನ್ನು ನಾವೇ ಅರಿತುಕೊಳ್ಳಬೇಕು. ಒಂದು ರೀತಿಯ ಸ್ವಾತಂತ್ರ್ಯ ನಮಗೆ ಸಿಕ್ಕುತ್ತಾದರೂ ಅದನ್ನು ಸ್ವೇಚ್ಛೆಯಾಗಿ ತೆಗೆದುಕೊಳ್ಳಬಾರದು. ಯಾವುದೇ ಕಾರಣಕ್ಕೂ ಶಿಕ್ಷಣವನ್ನು ನಿರ್ಲಕ್ಷ್ಯ ಮಾಡಬಾರದು ಎಂದರು.
ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರು ಓದಲೇಬೇಕಾದುದು ಅನಿವಾರ್ಯವಾಗುತ್ತದೆ. ಪಿಯುಸಿಯಿಂದಲೇ ಯುಪಿಎಸ್ಸಿ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ. ಸಾಧನೆ ಎನ್ನುವುದು ಅಷ್ಟು ಸುಲಭವಲ್ಲ. ಒಂದು ರೀತಿಯ ಎವರೆಸ್ಟ್ ಏರಿದಂತೆ ಆಗುತ್ತದೆ. ಸಾಕಷ್ಟು ನಿರೀಕ್ಷೆ ಜೊತೆಗೆ ನಿರಾಸೆಗಳು ಇರುತ್ತವೆ. ಮೊದಲ ದಿನದಿಂದಲೇ ಓದಲು ಆರಂಭಿಸಬೇಕು. ಇದಕ್ಕೆ ಮಾನಸಿಕ ಸಿದ್ಧತೆ ಅತ್ಯಗತ್ಯ. ಸಮಯ ಬಹಳ ಮುಖ್ಯ. ಏನೇ ಬಂದರೂ ಕುಗ್ಗಬಾರದು ಎಂದರು.
ತಾವು ಪಟ್ಟ ಶ್ರಮದ ಬಗ್ಗೆ ವಿವರಿಸುತ್ತಾ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ ಅವರು ಓದಿನ ಜೊತೆಗೆ ಪ್ರಾಣಾಯಾಮ, ಧ್ಯಾನ, ಭಗವದ್ಗೀತೆ ಓದು, ರಾಮಾಯಣ, ಮಹಾಭಾರತಗಳ ತಿಳಿವಳಿಕೆ, ಮನುಷ್ಯಪ್ರೇಮ, ಸಹನೆ, ಆತ್ಮವಿಶ್ವಾಸ ಇವುಗಳನ್ನು ಬೆಳೆಸಿಕೊಳ್ಳುತ್ತಾ ಓದಿನ ಶಿಸ್ತಿಗೆ ಒಗ್ಗಿಕೊಂಡರೆ ನಿಮ್ಮ ಬದುಕು ಖಂಡಿತಾ ಹಿಗ್ಗುತ್ತದೆ ಎಂದರು.
ಬಾರ್ಕೂರಿನ ಶ್ರೀನವಾಕ್ಷರೀ ಎನ್.ಆರ್. ದಾಮೋದರ ಶರ್ಮ ವಿದ್ಯಾರ್ಥಿಗಳ ಕುರಿತು ಸ್ಪೂರ್ತಿದಾಯಕ ಉಪನ್ಯಾಸ ನೀಡಿ, ಒಳ್ಳೆಯ ಆಚಾರ ವಿಚಾರದ ಕಡೆ ನಾವು ಹೆಜ್ಜೆ ಇಡÀಬೇಕು. ಶಿಕ್ಷಣವೇ ನಿಮ್ಮ ಬದುಕಿನ ಅಡಿಗಲ್ಲು ನಮ್ಮ ಭಾರತ ಭಾವಪೂರ್ಣ ನೆಲವಾಗಿದೆ. ದೈವತ್ವಕ್ಕೆ ನಮ್ಮದು ಕರ್ಮಭೂಮಿ. ಈ ಭೂಮಿಯ ಬಗ್ಗೆ ನಾವೆಲ್ಲರೂ ಗೌರವ ಇಟ್ಟುಕೊಳ್ಳಬೇಕು. ಇಂತಹ ಭರತ ಭೂಮಿಯಲ್ಲಿ ಶಿಕ್ಷಣ ಕಲಿಯುವುದೇ ಒಂದು ಪುಣ್ಯ ಎಂದರು.
ವಿದ್ಯಾರ್ಥಿಗಳು ಓದುವುದರ ಜೊತೆಗೆ ಭಾವನೆಗಳಲ್ಲಿ ಬದುಕಬೇಕು. ಆದರೆ, ಭಾವೋದ್ವೇಗಕ್ಕೆ ಒಳಗಾಗಬಾರದು. ಭಾವನೆಗಳ ಬೆಸೆಯುವಿಕೆ ಓದಿಗೆ ಸಹಕಾರವಾಗುತ್ತದೆ. ಶಿಕ್ಷಣ ಸಂಸ್ಥೆ ಎಂಬುದು ನಮ್ಮೆಲ್ಲರನ್ನು ಒಟ್ಟುಗೂಡಿಸುತ್ತದೆ. ಶಿಕ್ಷಕರು ಅಮ್ಮ ಆದಾಗ ನಮ್ಮಲ್ಲಿನ ಸಣ್ಣತನಗಳು ಹೋಗಿ ಸಹಿಷ್ಣುತೆ ಮನೋಭಾವ ಉಂಟಾಗುತ್ತದೆ. ಜ್ಞಾನದ ಬೆಳಕಿನತ್ತ ನಾವು ಸಾಗುತ್ತೇವೆ ಎಂದರು.
ಆರ್ಯ ಎಂದರೆ ಜ್ಞಾನ ಎಂದು ಅರ್ಥ. ಇಂತಹ ಜ್ಞಾನದ ಹೆಸರಿನಲ್ಲಿ ಎನ್. ರಮೇಶ್ ಅವರು ಶಿಕ್ಷಣ ಸಂಸ್ಥೆ ಸ್ಥಾಪಿಸಿರುವುದು ಅತ್ಯಂತ ಸೇವಾ ಮನೋಭಾವನೆಯಾಗಿದೆ. ಯಾವ ಮನುಷ್ಯನು ದೇವರಾಗುವುದಿಲ್ಲ. ಆದರೆ, ಸೇವೆಯ ಮೂಲಕ ಅವನು ದೇವಮಾನವನಾಗಬಹುದು. ಮನುಕುಲದ ಸೇವೆ ಮಾಡಿ ನಿಜವಾದ ಮಾನವರಾಗುತ್ತೇವೆ. ಇಂತಹ ಶಿಕ್ಷಣ ಸಂಸ್ಥೆಗಳು ನಿಮಗೆ ಸಂಸ್ಕಾರಗಳನ್ನು ಕಲಿಸುತ್ತವೆ. ಇಲ್ಲಿ ನೀವು ಓದುವುದು ಒಂದು ಹೆಮ್ಮೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್, ಕಾಲೇಜ್ ಎಂದರೆ ದೇವರಗುಡಿ. ಇಲ್ಲಿ ಕಲಿಯುತ್ತಿರುವವರೇ ದೇವರು. ಗುರುಗಳೇ ಅರ್ಚಕರು. ಒಂದು ಒಳ್ಳೆಯ ಉದ್ದೇಶದಿಂದ ಈ ಸಂಸ್ಥೆಯನ್ನು ಕಟ್ಟಿದ್ದೇನೆ. ಇಲ್ಲಿ ನುರಿತ ಉಪನ್ಯಾಸಕರಿದ್ದಾರೆ. ಉತ್ತಮ ಪೋಷಕರಿದ್ದಾರೆ. ಅವರ ಬೆಂಬಲವೇ ನಮ್ಮ ಬಲ. ಅವರ ನಂಬಿಕೆಗಳನ್ನು ಉಳಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತದೆ. ನಮ್ಮ ಇನ್ನೊಂದು ವಿಭಾಗವಾದ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಕಳೆದ 18 ವರ್ಷಗಳಿಂದ ಎಸ್ಎಸ್ಎಲ್ಸಿಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬರುವುದರ ಜೊತೆಗೆ ರ್ಯಾಂಕ್ ಗಳ ಪಡೆಯುವ ತಾಣವೂ ಇದಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಮುಕುಂದ್, ಪ್ರಾಂಶುಪಾಲ ನವೀನ್ ಕುಮಾರ್, ಸಂಸ್ಥೆಯ ಮುಖ್ಯಸ್ಥೆ ಮೋನಿಶಾ, ಪ್ರಾಂಶುಪಾಲೆ ಸುನಿತಾದೇವಿ, ಎಸ್ಎಸ್ಎಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ನಮನ ಕೆ. ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















