ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗುವ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಅಂತರಾಷ್ಟ್ರೀಯ ಉದ್ದಿಮೆಗಳನ್ನು ಕರೆತರುವ ಪ್ರಯತ್ನವನ್ನು ಸಂಸದರು ಹಾಗೂ ರಾಜ್ಯಸರ್ಕಾರ ಮಾಡಬೇಕು. ಈ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಬಂದಿರುವುದು ಸ್ವಾಗತದ ವಿಷಯ. ಆದರೆ ಇದರ ಜೊತೆಗೆ ಇಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಬಂಡವಾಳಗಾರರನ್ನು ಕರೆತರಬೇಕು. ಕೈಗಾರಿಕೆಗಳು ಕೇಂದ್ರೀಕರಣಗೊಳ್ಳದೆ ವಿಕೇಂದ್ರೀಕರಣವಾಗಬೇಕು. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಶಿವಮೊಗ್ಗ ನಗರದ ಅಭಿವೃದ್ಧಿಗಾಗಿ ಕನಿಷ್ಠ ಹತ್ತು ಸಾವಿರ ಕೋಟಿ ರೂ.ಗಳನ್ನಾದರೂ ಘೋಷಣೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ನಿರುದ್ಯೋಗಿಗಳು ಹೆಚ್ಚಾಗುತ್ತಿದ್ದಾರೆ. ಉದ್ಯೋಗಾವಕಾಶಗಳು ಕಡಿಮೆ ಇವೆ. ರಾಜ್ಯ, ರಾಷ್ಟ್ರ, ವಿದೇಶಗಳಿಗೆ ಉದ್ಯೋಗ ಅರಸಿ ಹೋದವರು ಮತ್ತೆ ಹಳ್ಳಿ ಕಡೆ ವಾಪಾಸಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಉದ್ಯೋಗಗಳು ಲಭಿಸಿದರೆ ಅನುಕೂಲವಾಗುತ್ತದೆ. ಹೇಗಿದ್ದರೂ ವಿಮಾನ ಹಾರಾಟ ನಿರಂತರವಾಗಿರುತ್ತದೆ. ಹಾಗಾಗಿ ಶಿವಮೊಗ್ಗದಲ್ಲಿ ಅಂತರಾಷ್ಟ್ರೀಯ ಬಂಡವಾಳಗಾರರ ಸಮಾವೇಶವನ್ನು ಏರ್ಪಡಿಸಬೇಕು ಎಂದರು.
Also read: ಫೆ.24ರ ಭದ್ರಾವತಿ ಬಂದ್ಗೆ ಪ್ರತಿಯೊಬ್ಬರು ಬೆಂಬಲಿಸಿ: ಶಾರದ ಅಪ್ಪಾಜಿ ಮನವಿ
ಉದ್ಯಮಿಗಳು ಶಿವಮೊಗ್ಗಕ್ಕೆ ಬರಲು ಭಯಪಡುವಂತಾಗಬಾರದು. ಇಲ್ಲಿ ಅಶಾಂತಿ ತೊಲಗಬೇಕು. ಸರ್ಕಾರ ಕೈಗಾರಿಕೆಗಳ ಉತ್ತೇಜನಕ್ಕೆ ಸಹಕಾರ ನೀಡಬೇಕು. ಸಕ್ಕರೆ ಕಾರ್ಖಾನೆ, ಕಾಗದ ಕಾರ್ಖಾನೆ ಮತ್ತು ಕಬ್ಬಿಣ ಕಾರ್ಖಾನೆಗಳು ಮತ್ತೆ ಸ್ಥಾಪನೆಯಾಗಬೇಕು. ಕೇಂದ್ರ ಸರ್ಕಾರ ಇವುಗಳಿಗೆ ಪುನರುಜ್ವೀವನ ನೀಡಬೇಕು. ಆ ಮೂಲಕ ಕೆಲಸ ಕಳೆದುಕೊಂಡಿರುವ ಕಾರ್ಮಿಕರಿಗೆ ಭರವಸೆಯ ವಾತಾವರಣವನ್ನು ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿವೆ. ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಅಡಿಕೆ ಸಂಶೋಧನಾಕೇಂದ್ರ ಸ್ಥಾಪನೆಯಾಗಬೇಕು. ಶರಾವತಿ ಸಂತ್ರಸ್ತರ ಸಮಸ್ಯೆ ಕೇಂದ್ರದ ಅಂಗಳದಲ್ಲಿದೆ. ಇದಕ್ಕೆ ಪರಿಹಾರ ಒದಗಿಸಬೇಕು. ಬಗರ್ಹುಕುಂ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಕಾಯಿದೆಯನ್ನು ತಿದ್ದುಪಡಿ ಮಾಡಿ ಸಾಗುವಳಿಪತ್ರ ನೀಡಬೇಕು ಎಂದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಇಎಎಸ್ಐ ಆಸ್ಪತ್ರೆ ಶೀಘ್ರವೇ ಸ್ಥಾಪನೆಯಾಗಬೇಕು. ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ತಾಲೂಕು ಮಟ್ಟದ ಸರ್ಕಾರ ಆಸ್ಪತ್ರೆಗಳನ್ನು ಹೈಟೆಕ್ ಮಾಡಬೇಕು. ಸುಮಾರು 2.50 ಲಕ್ಷ ಉದ್ಯೋಗ ಖಾಲಿ ಇದ್ದು, ಅವನ್ನು ತುಂಬಬೇಕು. ಹಳೆ ಪಿಂಚಣಿ ವ್ಯವಸ್ಥೆ ಜಾರಿ ಆಗಬೇಕು. ಏಳನೇ ವೇತನದ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದರು
ಪತ್ರಿಕಾಗೋಷ್ಠಿಯಲ್ಲಿ ದಿವಾಕರ ಎಂ.ಪಿ. ರುದ್ರೇಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post