ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಡೀ ಜಗತ್ತಿನ ಹಿತವನ್ನು ಬಯಸಿದವರು ನಮ್ಮ ಪೂರ್ವಜರು. ನಮ್ಮವರು ಖಡ್ಗ ತೆಗೆದುಕೊಂಡು ವಿಶ್ವ ಪರ್ಯಟನೆ ಮಾಡಲಿಲ್ಲ. ಜ್ಞಾನ ತೆಗೆದುಕೊಂಡು ಹೋಗಿ ಜ್ಞಾನ ಪ್ರಸರಣ ಮಾಡಿದ್ದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾದ ಮಂಗೇಶ್ಬೆಂಡೆ ಹೇಳಿದರು.
ಹಿಂದೂ ಸಂಗಮ ಆಯೋಜನ ಸಮಿತಿಯು ಮಾಧವ ವಸತಿ ಸಹಯೋಗದಲ್ಲಿ ಭಾನುವಾರ ಶರಾವತಿ ನಗರದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮದಲ್ಲಿ #Hindu Sangama ದಿಕ್ಸೂಚಿ ಭಾಷಣ ಮಾಡಿದರು.
ಇಡೀ ಜಗತ್ತನ್ನೇ ಶ್ರೇಷ್ಠ ಮಾಡಬೇಕೆಂಬ ಮಹತ್ವಾಕಾಂಕ್ಷೆ ನಮ್ಮ ಹಿರಿಯರದ್ದಾಗಿತ್ತು. ಅಮೆರಿಕಾಕ್ಕೆ ಹೋಗಿದ್ದ ಸ್ವಾಮಿ ವಿವೇಕಾನಂದರು ಇಡೀ ಜಗತ್ತಿನ ಕಲ್ಯಾಣಕ್ಕಾಗಿ ಆಶಯ ಭಾಷಣ ಮಾಡಿದರು. ಅವರ ಮಾತಿಗೆ ಇಡೀ ಸಭೆ ಕರತಾಂಡನ ಮಾಡಿತ್ತು. ಇದು ನಮ್ಮಸಂಸ್ಕೃತಿ ಎಂದರು.
ಈ ದೇಶವನ್ನು 800 ವರ್ಷ ಮುಸಲ್ಮಾನರು ಆಳಿದ್ದರೂ ಕೂಡ ಈ ದೇಶ ಇಸ್ಲಾಂ ಆಗಿಲ್ಲ. ಸಂಪತ್ತು ಲೂಟಿ ಮಾಡಿದರೂ ಖಾಲಿಯಾಗಲಿಲ್ಲ. ಬ್ರಿಟೀಷರು ಬಂದು 300ವರ್ಷಗಳ ಆಳಿದರೂ ಬದಲಾಗಲಿಲ್ಲ. ಆದರೆ ಶಿಕ್ಷಣ ಹಾಗೂ ಬೌದ್ದಿಕವಾಗಿ ಭ್ರಷ್ಟರನ್ನಾಗಿ ಮಾಡಿದರು. ಅದನ್ನು ಈಗ ಸುಧಾರಣೆ ಮಾಡಬೇಕಿದೆ ಎಂದರು.
ಈ ದೇಶದವರು ಪ್ರಾಣ ಬಿಟ್ಟರೂ ಧರ್ಮ ಬಿಡುವುದಿಲ್ಲ ಎಂಬ ಸತ್ಯ ದಾಳಿಕೋರರಿಗೆ ಗೊತ್ತಾಗಿತ್ತು. ಹೀಗಾಗಿ ಪರಿವರ್ತನೆಗೆ ಬೇರೆ ಬೇರೆ ಕುತಂತ್ರ ಮಾಡಿದರೂ ಏನೂ ಮಾಡಲು ಆಗಲಿಲ್ಲ. ಸ್ವಾಭಿಮಾನದ ಶೂನ್ಯ, ಅಹಂಕಾರದಿಂದಾಗಿ, ಕುತಂತ್ರಿಗಳಿಂದಾಗಿ ಪರಕೀಯರ ದಾಸ್ಯಕ್ಕೆ ಒಳಗಾಗಬೇಕಾಗಿತ್ತು. ಅದಕ್ಕೆ ಇನ್ನು ಮುಂದೆ ಅವಕಾಶ ನೀಡಬಾರದೆಂದು ಹೇಳಿದರು.
ಭಾರತೀಯ ಶಿಕ್ಷಣ ಪದ್ದತಿಯನ್ನು ಬದಲಾಯಿಸಿದರೆ ಮಾತ್ರ ಭಾರತವನ್ನು ಬದಲಾಯಿಸಬಹುದೆಂಬ ಸತ್ಯವನ್ನು ಕಂಡುಕೊಂಡ ಮೆಕಾಲೆ ಹೊಸ ಶಿಕ್ಷಣ ಜಾರಿ ಮಾಡಿದ ಪರಿಣಾಮ ಸಂಕುಚಿತ ಮನೋಭಾವನೆ ಬರುವಂತಾಗಿತ್ತು. ನಮ್ಮತನವನ್ನು ಕಳೆದುಕೊಂಡೆವು. ಇನ್ನು ಮುಂದೆ ಅದಕ್ಕೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಾಗಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಘ ಚಾಲಕ್ ಬಿ.ಎ.ರಂಗನಾಥ್, ಸಾಮಾಜಿಕ, ರಾಜಕೀಯ, ರಕ್ಷಣಾ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಜಗತ್ತಿನ ಒಟ್ಟಾರೆ ಜಿಡಿಪಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಪುರಾತನ ಭಾರತದ ಲ್ಲಿಯೂ ಕೂಡ ಶಿಕ್ಷಣ,ರಾಜನೀತಿ, ಜ್ಯೋತಿಷ್ಯ ಶಾಸ್ತ್ರ ಮೊದಲಾದವುಗಳಲ್ಲಿಯೂ ಮುಂಚೂಣಿಯಲ್ಲಿದ್ದೆವು. ಆದರೆ ಅದನ್ನು ತಿಳಿಸುವಲ್ಲಿ ವಿಫಲರಾಗಿದ್ದೆವು. ಈಗ ಆ ಕಾರ್ಯ ಮಾಡಲಾಗುತ್ತಿದೆ ಎಂದರು.
ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜಾತಿಯ ವೈಮನಸ್ಯ ಎದುರಿಸುತ್ತಿದ್ದೇವೆ. ಜಾತಿಯ ಆಧಾರದ ಮೇಲೆ ಭಾವನೆಗಳನ್ನು ವ್ಯಕ್ತಪಡಿಸಬಾರದು. ಎಲ್ಲರಲ್ಲಿಯೂ ಇರುವ ರಕ್ತದ ಬಣ್ಣ ಒಂದೆ. ಹೀಗಾಗಿ ಜಾತೀಯತೆಯನ್ನು ದೂರ ಮಾಡಬೇಕೆಂಬ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿದೆ. ಸ್ವದೇಶಿ ವಸ್ತುಗಳನ್ನು ಬಳಸುವುದು,ಮಾತೆಯರಿಗೆ ಗೌರವ ನೀಡುವುದು, ಪರಿಸರ ರಕ್ಷಣೆಗೆ ಒತ್ತು ನೀಡಲಾಗುತ್ತಿದೆ ಎಂದರು.
ದೀಪಿಕಾ ರಾಘವೇಂದ್ರ ಮಾತನಾಡಿ, ನಮ್ಮ ಮಕ್ಕಳು ಕಲೆ, ಸಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಕ್ತವಾಗಿ ಬಿಡಬೇಕು. ದೇಶದ ಮೇಲೆ ಅಭಿಮಾನ ಬರುವಂತಹ ಆಸಕ್ತಿ ಬೆಳೆಸಬೇಕು. ದೇಶ ಮೊದಲು ಬಳಿಕ ಕುಟುಂಬ. ಮನೆಯ ಒಳಗೆ ಜಾತಿ ಇರಲಿ. ಹೊರಗೆ ಬಂದಾಗ ನಾನೊಬ್ಬ ಹಿಂದು ಎಂಬ ಭಾವನೆ ಬೆಳೆಸಬೇಕಿದೆ ಎಂದರು.
ಹಿಂದೂಗಳು ಕಡ್ಡಾಯವಾಗಿ ಇಬ್ಬರು ಮಕ್ಕಳನ್ನು ಪಡೆಯಲೇಬೇಕು. ಮಕ್ಕಳು ಮುಕ್ತವಾಗಿ ಬೆಳೆಯಲು ಅವಕಾಶ ನೀಡಬೇಕು. ಕಷ್ಟ, ಸುಖಗಳನ್ನು ಅನುಭವಿಸಲು ಹಾಗೂ ಸಮುದಾಯದಲ್ಲಿ ಭಾಗವಹಿಸಲು ಬಿಡಬೇಕಿದೆ ಎಂದರು.
ಉದ್ಯಮಿ ರಕ್ಷಿತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡ ಹಲವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















