ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶ್ರಿನಿಧಿ ಪಿಜಿಆರ್ ಎಂದೇ ಪ್ರಖ್ಯಾತರಾದ ನಮ್ಮ ಹಿರಿಯರಾದ ಪಿ.ಜಿ. ರಾಘವೇಂದ್ರ ರಾವ್ರವರು ಮಂಗಳವಾರ ಸಂಜೆಯ ವೇಳೆಗೆ ತೀವ್ರ ಅನಾರೋಗ್ಯದಿಂದ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಈ ಹಿಂದಿನ ತುಂಗ ಭದ್ರಾ ಸಕ್ಕರೆ ಕಾರ್ಖಾನೆಯ ಮಜ್ದೂರ್ ಸಂಘದ ಮುಖ್ಯಸ್ಥರಾಗಿ, ಕಾರ್ಮಿಕ ನಾಯಕರಾಗಿ ಸಮರ್ಥವಾಗಿ ಸಂಘಟನೆಯನ್ನು ಬಲಪಡಿಸಿದ್ದ ರಾಘವೇಂದ್ರ ರಾವ್, ಕಾರ್ಖಾನೆಯಲ್ಲಿ ಕಾರ್ಮಿಕರ ಫೆಡರೇಷನ್ ಹಾಗೂ ಸರ್ಕಾರದ ವತಿಯಿಂದ ರಚಿತವಾಗಿ ಸಕ್ಕರೆ ಕಾರ್ಖಾನೆ ಕಾರ್ಮಿಕರ ತ್ರಿಪಕ್ಷೀಯ ವೇತನ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದವರು. ಅಲ್ಲದೇ ಸಂದರ್ಭಾನುಸಾರವಾಗಿ, ಕಾರ್ಮಿಕರ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಪರಿಹರಿಸಲು ಅಪಾರವಾಗಿ ಶ್ರಮಿಸಿದವರು. ಕಾರ್ಮಿಕ ಸಮಸ್ಯೆಗಳ ಕುರಿತು ಇವರು ಬರೆದಿರುವ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡು ಗಮನ ಸೆಳೆದಿವೆ. ಜೊತೆಗೆ ಸಕ್ಕರೆ ಕಾರ್ಮಿಕರ ಹಿತ ರಕ್ಷಣೆ ಕುರಿತಂತೆ ತಾಂಜೇನಿಯಾದಲ್ಲಿಯೂ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟ ಹಿರಿಮೆ ಇವರದ್ದು.
ಶಿಕ್ಷಣ, ಸಹಕಾರ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದ ಇವರು, ನಗರದ ಫ್ರೆಂಡ್ಸ್ ಸೆಂಟರ್ನ ಅಧ್ಯಕ್ಷರಾಗಿ, ಸ್ವದೇಶೀ ಜಾಗೃತಿ ಸೇವಾ ಮಂಚ್ನ ಕಾರ್ಯದರ್ಶಿಯಾಗಿ, ಹೊಗರೇಹಳ್ಳಿ ಶ್ರೀಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯದ ಆಡಳಿತಾಧಿಕಾರಿಯಾಗಿ, ಅಲ್ಲಿಯ ಸಮುದಾಯ ಭವನ ನಿರ್ಮಾಣದಲ್ಲಿಯೂ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ.
ಸದಾ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು, ನಗರದ ಶ್ರೀನಿಧಿ ಸಮೂಹ ಸಂಸ್ಥೆಗಳ ಒಡನಾಡಿಯಾಗಿಯೂ ಮಾರ್ಗದರ್ಶನ ನೀಡಿದ್ದರು. ಅತ್ಯುತ್ತಮ ಮೇಧಾವಿ, ತಿಕ್ಷಣಮತಿಯೂ ಆಗಿದ್ದ ಇವರು, ಅತ್ಯಂತ ಸರಳ ಜೀವಿಯಾಗಿದ್ದರು.
ಪಿ.ಜಿ. ರಾಘವೇಂದ್ರ ರಾವ್ರವರ ನಿಧನಕ್ಕೆ ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪ, ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಶ್ರೀನಿಧಿ ಸಮೂಹ ಸಂಸ್ಥೆಯ ಹಿರಿಯರಾದ ಟಿ. ಆರ್. ಅಶ್ವತ್ಥನಾರಾಯಣ ಮೊದಲಾದವರು ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಸದ್ಗತಿ ಕೋರಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post