ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸವಳಂಗ ಮುಖ್ಯರಸ್ತೆ ಹಾಗೂ ಮೇಲ್ಸೇತುವೆಯ ಸರ್ವೀಸ್ ರಸ್ತೆಗಳ ದುರವಸ್ತೆಯಿಂದ ಆ ಭಾಗದ ಜನರು ಸಂಕಷ್ಟಕ್ಕೊಳಗಾಗಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಮಹಾನಗರಪಾಲಿಕೆಯ ಮಾಜಿ ಕಾರ್ಪೋರೇಟರ್ ಈ. ವಿಶ್ವಾಸ್ ಮತ್ತು ರಾಷ್ಟ್ರಭಕ್ತ ಬಳಗದ ಸಂಚಾಲಕರಾದ ಕೆ.ಈ. ಕಾಂತೇಶ್ ಜಿಲ್ಲಾಧಿಕಾರಿಗಳಿಗೆ ಮತ್ತು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದರು.
ನಗರದ ಮುಖ್ಯರಸ್ತೆಯಾದ ಉಷಾನರ್ಸಿಂಗ್ ಹೋಮ್ ವೃತ್ತ (ಅಕ್ಕಮಹಾದೇವಿ ವೃತ್ತ)ದಿಂದ ಎಲ್ಬಿಎಸ್ ನಗರದವರೆಗೆ ಮೇಲ್ ಸೇತುವೆಯ ಸರ್ವೀಸ್ ರಸ್ತೆಗಳು ಸಂಪೂರ್ಣವಾಗಿ ಸಂಚಾರಕ್ಕೆ ಉಪಯೋಗಕ್ಕೆ ಬಾರದ ರೀತಿಯಲ್ಲಿ ದುಸ್ಥಿತಿಗೆ ತಲುಪಿದ್ದು, ಯಾವುದೇ ರೀತಿಯ ದುರಸ್ಥಿ ಕಾರ್ಯ ಆಗಿಲ್ಲ. ಸಾಲದೆಂಬಂತೆ ಅಲ್ಲಿನ ಸ್ಥಳೀಯರೊಬ್ಬರು ತಮ್ಮ ಖಾಸಗಿ ಜಾಗವನ್ನು ಅಭಿವೃದ್ಧಿಪಡಿಸಲು ಅತೀ ಭಾರವಾದ ವಾಹನಗಳನ್ನು ಬಳಸುತ್ತಿದ್ದು, ಸಾರ್ವಜನಿಕರು ನಡೆದಾಡಲು ಕೂಡ ಅಸಾಧ್ಯವಾಗಿದೆ. ಹಾಗೂ ಸೇತುವೆಯ ಕೆಳಭಾಗದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಪಡಿಸದ ಕಾರಣ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಅಲ್ಲಿ ಮಳೆಯ ನೀರು ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗಿ, ಮಾರಣಾಂತಿಕ ರೋಗಗಳಿಗೂ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ರೀತಿಯ ಸ್ಪಂಧನೆ ಸಿಕ್ಕಿಲ್ಲ. ಕೂಡಲೇ ಪಾಲಿಕೆ ವತಿಯಿಂದ ಮೇಲ್ ಸೇತುವೆಯ ಕೆಳಭಾಗದ ದುರಸ್ಥಿ ಹಾಗೂ ಅಭಿವೃದ್ಧಿಕಾರ್ಯ ಮಾಡಬೇಕು. ಅಕ್ಕಮಹಾದೇವಿ ವೃತ್ತದಲ್ಲಿ ಜಲ್ಲಿಕಲ್ಲುಗಳ ರಾಶಿ ಬಿದ್ದಿದ್ದು ಸಾಕಷ್ಟು ಅಪಘಾತಗಳಿಗೆ ಕಾರಣವಾಗಿದೆ. ಆದ್ದರಿಂದ ಅಕ್ಕಮಹಾದೇವಿ ವೃತ್ತ ಮತ್ತು ಅದರ ಸುತ್ತಮುತ್ತಲು ಹಾಗೂ ಮೇಲ್ ಸೇತುವೆಯ ಕೆಳಭಾಗದ ರಸ್ತೆಗಳು ಮತ್ತು ಸ್ಥಳೀಯವಾಗಿ ಅಲ್ಲಿನ ವಿದ್ಯುತ್ ಕಂಬಗಳಿದ್ದರೂ ಕೆಲವುಕಡೆ ವಿದ್ಯುತ್ ಇರುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಸುತ್ತಲಿನ ನಿವಾಸಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















