ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕ್ಷಯ ಮುಕ್ತ ಭಾರತ ಹಾಗೂ ಕ್ಷಯಮುಕ್ತ ಶಿವಮೊಗ್ಗಕ್ಕಾಗಿ ಸಾರ್ವಜನಿಕರು ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಕರೆ ನೀಡಿದರು.
ಇಂದು ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕ, ಐಎಂಎ ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸೈಕಲ್ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಚಾಲನೆ ನೀಡಿ ಮಾತನಾಡುತ್ತಾ ತಿಳಿಸಿದರು.
ಕೇಂದ್ರ ಸರ್ಕಾರವು 2025ಕ್ಕೆ ಭಾರತವನ್ನು ಟಿಬಿ ಮುಕ್ತ ಮಾಡಬೇಕು ಎಂದು ಅಧಿಸೂಚನೆ ಹೊರಡಿಸಿದೆ ಪ್ರಥಮ ಹಂತದಲ್ಲಿ ಶಿವಮೊಗ್ಗ, ಕೊಡಗು, ಕಾರವಾರ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಇದರಡಿಯಲ್ಲಿ ಈಗಿನಿಂದಲೇ ಸಾವಿನ ಪ್ರಮಾಣ ಕಡಿಮೆಯಾಗಬೇಕು, ಟಿಬಿ ಪ್ರಕರಣಗಳನ್ನು ಕಡಿಮೆ ಮಾಡಬೇಕು ಹಾಗೂ ಪ್ರತಿ ರೋಗಿಯ ಚಿಕಿತ್ಸಾ ವೆಚ್ಚವನ್ನು ಶೂನ್ಯಕ್ಕೆ ತಲುಪಿಸಬೇಕು ಎಂಬುದು ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
ಭಾರತದಲ್ಲಿ ಪ್ರತಿದಿನ ಸುಮಾರು 6000 ರೋಗಿಗಳಿಗೆ ಕ್ಷಯರೋಗ ಕಂಡುಬರುತ್ತಿದ್ದು ಸುಮಾರು 600 ಜನ ಸಾವನಪ್ಪುತ್ತಿದ್ದಾರೆ, ಸತತ ಎರಡು ವಾರಗಳ ಕೆಮ್ಮು ಮತ್ತು ಕಫ, ಸಂಜೆ ಸಮಯದಲ್ಲಿ ಜ್ವರ ಬರುವುದು ಎದೆನೋವು ರಾತ್ರಿ ವೇಳೆ ಬೆವರುವುದು ತೂಕ ಕಡಿಮೆಯಾಗುವುದು ಮುಂತಾದ ಲಕ್ಷಣಗಳಿದ್ದರೆ ಕ್ಷಯರೋಗ ವಿರಬಹುದು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರು ಮಾತನಾಡಿ, 1882ರ ಮಾರ್ಚ್ 24ರಂದು ರಾಬರ್ಟ್ ಕಾಚ್ ಎಂಬ ಪ್ರಸಿದ್ಧ ವಿಜ್ಞಾನಿ ಕ್ಷಯರೋಗವು ಮೈಕ್ರೋ ಬ್ಯಾಕ್ಟಿರಿಯಂ ಟುಬರ್ಕುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ ಎಂದು ಕಂಡುಹಿಡಿದ ದಿನವಾಗಿದ್ದು ಅದರ ನೆನಪಿಗಾಗಿ ಪ್ರತಿವರ್ಷ ಮಾರ್ಚ್ 24 ವಿಶ್ವ ಕ್ಷಯರೋಗ ದಿನಾಚರಣೆ ಎಂದು ಆಚರಣೆ ಮಾಡಲಾಗುತ್ತದೆ ಈ ವರ್ಷದ ಘೋಷಣೆ ಕ್ಷಯರೋಗ ನಿರ್ಮೂಲನೆಗೆ ಕಾಲ ಘಟಿಸುತ್ತಿದೆ ಎಂಬುದಾಗಿದೆ ಈ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಜಿ.ಸಿ. ದಿನೇಶ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ 13273 ಶಂಕಿತರ ಕಫ ಪರೀಕ್ಷೆ ಮಾಡಿಸಿ 1251 ಜನರನ್ನು ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ಪ್ರಾರಂಭಿಸಲಾಯಿತು. ಹಾಗೆಯೇ 38 ಎಂಡಿಆರ್ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಪ್ರಾರಂಭಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಎಂಡಿಆರ್ ರೋಗಿಗಳ ಶೀಘ್ರ ಪತ್ತೆಗಾಗಿ ಸಿಬಿನ್ಯಾಟ್ ಪ್ರಯೋಗಾಲಯವನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಮತ್ತು ಶಿಕಾರಿಪುರದಲ್ಲಿ ಟ್ರೂನ್ಯಾಟ್ ಪರೀಕ್ಷೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಟಿಬಿ ನೋಟಿಫಿಕೇಶನ್ ಅಡಿಯಲ್ಲಿ ಈಗಾಗಲೇ ಖಾಸಗಿ ಸಂಸ್ಥೆಗಳಿಂದ ಪ್ರತಿ ಮಾಹೆ ವರದಿಗಳನ್ನು ತರಿಸಿಕೊಳ್ಳುತ್ತಿದ್ದು ಶಿವಮೊಗ್ಗ ಜಿಲ್ಲೆಯ ಖಾಸಗಿ ವೈದ್ಯರುಗಳು ಸಹ ಟಿಬಿ ಮುಕ್ತ ಭಾರತ ಮಾಡುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಕಳೆದ ವರ್ಷ 473 ರೋಗಿಗಳ ವಿವರಗಳನ್ನು ಖಾಸಗಿ ಸಂಸ್ಥೆಗಳಿಂದ ಕಳಿಸಿರುತ್ತಾರೆ ಎಂದು ತಿಳಿಸಿದರು.
ಕ್ಷಯ ರೋಗ ನಿರ್ಮೂಲನೆಗೆ ಜಿಲ್ಲೆಯು ಆಯ್ಕೆಯಾಗಿರುವುದರಿಂದ ಟಿಬಿ ಪ್ರಕರಣಗಳು ಇರುವ ಮನೆಗಳಲ್ಲಿ ಸಂಪರ್ಕದಲ್ಲಿರುವ ಅವರಿಗೆ ಐಜಿಆರ್ಎ ರಕ್ತಪರೀಕ್ಷೆ ಮುಖಾಂತರ ಟಿಬಿ ಸೋಂಕನ್ನು ಕಂಡುಹಿಡಿಯುವ ಪರೀಕ್ಷೆಯನ್ನು ಶೀಘ್ರದಲ್ಲೇ ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ಡಾ. ದಿನೇಶ್ ಮಾಹಿತಿ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಮತ್ತು ಶಿವಮೊಗ್ಗ ಸೈಕಲ್ ಕ್ಲಬ್ನ ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ.ಪರಮೇಶ್ವರ ಶಿಗ್ಗಾಂವ್ ಕಾರ್ಯದರ್ಶಿ ಡಾ.ಶಂಭುಲಿಂಗ ಬಂಕೊಳ್ಳಿ, ಶಿವಮೊಗ್ಗ ಸೈಕಲ್ ಕ್ಲಬ್ನ ಅಧ್ಯಕ್ಷರಾದ ಶ್ರೀಕಾಂತ್ ಪಾಟೀಲ್ ಕಾರ್ಯದರ್ಶಿ ಗಿರೀಶ್ ಕಾಮತ್ ಹಾಗೂ ರೋಟರಿ ವಿಜಯ ಕುಮಾರ್, ಡಾ. ರಘುನಂದನ್, ಡಾ.ಗುಡದಪ್ಪ ಕಸಬಿ, ಡಾ.ಮಂಜುನಾಥ್ ನಾಗಲೀಕರ್, ಡಾ. ಶಮಾಬೇಗಂ, ದಿಲೀಪ್ ನಾಡಿಗ್, ನರಸಿಂಹ ಮೂರ್ತಿ, ಸರೇಶ್ ಕುಮಾರ್, ನಾಗೇಂದ್ರ, ರವಿ, ಜಗದೀಶ್ ಆರಾಧ್ಯ , ಸಿದ್ದೇಶ್ ಹಿರೇಮಠ, ವಸಂತ ಹೋಬಳಿದಾರ್, ಹರೀಶ್ ಪಾಟೀಲ್, ವಸಂತಕುಮಾರ್, ಡಾ.ಅರುಣ್ ಕುಮಾರ್, ಧನಲಕ್ಷ್ಮಿ ಗಿರೀಶ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕದ ಎಲ್ಲಾ ಸಿಬ್ಬಂದಿಯವರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post