ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ರಕ್ಷಾ ವಿವಿ ಶಿವಮೊಗ್ಗದಲ್ಲಿ ಕಾರ್ಯಾರಂಭ ಮಾಡಲಿದೆ. ಕರ್ನಾಟಕದಲ್ಲಿಯೇ ಇದು ಪ್ರಥಮವಾಗಿದ್ದು, ಜಿಲ್ಲೆಯ ಹೆಮ್ಮೆಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ Home Minister Araga Gnanendra ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ರಕ್ಷಣಾ ಇಲಾಖೆಗೆ ಸೇರುವವರಿಗೆ ಬೋಧನೆಗಾಗಿ ಕೇಂದ್ರ ರಕ್ಷಣಾ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವು ಕರ್ನಾಟಕಕ್ಕೆ ಮಂಜೂರಾಗಿದ್ದು, ಅದರಲ್ಲೂ ಶಿವಮೊಗ್ಗಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಅಹಮದಾಬಾದ್ನ ರಕ್ಷಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕಕ್ಕೆ ರಕ್ಷಾ ವಿವಿಯೊಂದನ್ನು ತರುವ ಬಗ್ಗೆ ಚರ್ಚಿಸಲಾಗಿತ್ತು. ಅದರ ಪರಿಣಾಮ ರಾಜ್ಯಕ್ಕೆ ಈ ವಿಶ್ವವಿದ್ಯಾಲಯ ಮಂಜೂರಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಶಿವಮೊಗ್ಗದಲ್ಲಿ ಕಾರ್ಯಾರಂಭ ಮಾಡಲಿದೆ. ಅದಕ್ಕಾಗಿ ನವುಲೆ ಸರ್ವೇ ನಂ.12ರಲ್ಲಿ 8 ಎಕರೆ ಭೂಮಿಯನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ತಾತ್ಕಾಲಿಕವಾಗಿ ರಾಗಿಗುಡ್ಡದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ವಿವಿ ಆರಂಭವಾಗಲಿದೆ. ಜಿಲ್ಲೆಯ ಯುವಕರಿಗೆ ಹೊಸ ದಿಕ್ಕನ್ನು ತೋರಿಸುತ್ತದೆ. ಉದ್ಯೋಗ ನೀಡುವಲ್ಲಿ ಸಹಕರಿಸುತ್ತದೆ ಎಂದರು.
ಕಾಂಗ್ರೆಸ್ಸಿಗರು ಹತಾಶರಾಗಿ ಟೀಕೆ ಮಾಡುತ್ತಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ ಲೇವಡಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ 30 ಸಾವಿರ ಹಿಂದೂ ಕಾರ್ಯಕರ್ತರನ್ನು ರೌಡಿ ಪಟ್ಟಿಗೆ ಸೇರಿಸಿ ಹಿಂದೂ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ಕ್ರಿಮಿನಲ್ ಹಿನ್ನೆಲೆಯುಳ್ಳ ಯಾರನ್ನೂ ರೌಡಿಲಿಸ್ಟ್ನಿಂದ ಕೈಬಿಟ್ಟಿಲ್ಲ. ರಾಜಕೀಯ ಕಾರಣಗಳಿಗಾಗಿ ಅಮಾಯಕರನ್ನು, ನಿರಪರಾಧಿಗಳನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗಿದೆ. ಅವರನ್ನು ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳಲು ಇಂತಹ ತೀರ್ಮಾನ ಕೈಗೊಂಡಿದೆ ಎಂಬುದು ಸುಳ್ಳು, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕಲು ಅವರನ್ನು ರೌಡಿ ಲಿಸ್ಟ್ಗೆ ಸೇರಿಸಿತ್ತು ಎಂದು ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನಲ್ಲಿ ರಾಷ್ಟ್ರೀಯ ನಾಯಕರೇ ಇಲ್ಲ. ನರೇಂದ್ರ ಮೋದಿ, ಅಮಿತ್ ಷಾ ಅವರು ರಾಜ್ಯಕ್ಕೆ ಬಂದರೆ ಕಾಂಗ್ರೆಸ್ಸಿಗರು ಭಯಪಡುತ್ತಾರೆ. ಕಾಂಗ್ರೆಸ್ಸಿಗರ ಹತಾಶರಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇಡೀ ದೇಶದಲ್ಲೇ ಎರಡನೇ ರಕ್ಷಾ ವಿಶ್ವವಿದ್ಯಾಲಯ ಇದಾಗಿದ್ದು, ಭದ್ರತಾ ವಿಷಯಕ್ಕೆ ಸಂಬಂಧಿಸಿ ಕೋರ್ಸುಗಳ ಡಿಪ್ಲೊಮೋ, ಪದವಿ ತರಗತಿಗಳ ಶಿಕ್ಷಣ ನೀಡಲಾಗುವುದು. ಡಿಪ್ಲೊಮೋ ಇನ್ ಪೊಲೀಸ್ ಸೈನ್ಸ್, ಬೇಸಿಕ್ ಕೋರ್ಸ್ ಇನ್ ಕಾರ್ಪೋರೇಟ್ ಸೆಕ್ಯೂರಿಟಿ ಮ್ಯಾನೇಜ್ಮೆಂಟ್, ಡಿಪ್ಲೊಮೋ ಇನ ಕ್ರಿಮಿನಲ್ ಇನ್ವೆಸ್ಟಿಗೇಶನ್, ಪಿಜಿ ಡಿಪ್ಲೊಮೋ ಇನ್ ಸೈಬರ್ ಸೆಕ್ಯೂರಿಟಿ ಆಂಡ್ ಸೈಬರ್ ಲಾ. ರೋಡ್ ಟ್ರಾಫಿಕ್ ಸೇಪ್ಟಿ ಮ್ಯಾನೇಜ್ಮೆಂಟ್, ದೈಹಿಕ ಸಾಮರ್ಥ್ಯ ನಿರ್ವಹಣೆಯ ಎರಡು ವಾರಗಳ ಸರ್ಟಿಫಿಕೇಟ್ ಕೋರ್ಸ್ ಮತ್ತು ಪಿಜಿ ಡಿಪ್ಲೊಮೋ ಇನ್ ಕೋಸ್ಟಲ್ ಸೆಕ್ಯೂರಿಟಿ ಅಂಡ್ ಎಎಂಪಿ: ಲಾ ಎನ್ಫೋರ್ಸ್ಮೆಂಟ್ ಕೋರ್ಸ್ಗಳ ಬೋಧನೆ ಮಾಡಲಾಗುವುದು ಎಂದರು.
ಇದರಿಂದ ಪೊಲೀಸ್ ಮತ್ತು ರಕ್ಷಣಾ ವಿಭಾಗಗಳಿಗೆ ನೇರವಾಗಿ ಅಭ್ಯರ್ಥಿಗಳು ಆಯ್ಕೆಯಾಗಬಹುದಾಗಿದ್ದು, ಇದೊಂದು ವೃತ್ತಿ ಭದ್ರತೆಯ ಶಿಕ್ಷಣವಾಗಿದೆ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post