ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೈಲ್ ರಸ್ತೆಯ ನಿವಾಸಿಗಳು ಹಾಗೂ ಸ್ಥಳೀಯ ಉದ್ದಿಮೆದಾರರಿಂದ ಜೈಲ್ ರಸ್ತೆಯ ವನಶ್ರೀ ದಂತ ಚಿಕಿತ್ಸಾಲಯದ ಆವರಣದಲ್ಲಿ ಇಂದು ನಟ ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ಶ್ರದ್ದಾಂಜಲಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾ ಎಸ್. ದತ್ತಾತ್ರಿ, ನಟ ಪುನೀತ್ ರಾಜಕುಮಾರ್ ರವರನ್ನು ನೆನೆದು ಭಾವುಕರಾದರು.
ಕನ್ನಡನಾಡಿನ ಜನತೆಗೆ, ಕನ್ನಡ ಪ್ರೇಮಿಗಳಿಗೆ, ಕನ್ನಡದ ಹಿತೈಷಿಗಳಿಗೆ ನಿನ್ನೆಯ ಸುದ್ದಿ ಒಂದು ದೊಡ್ಡ ಅಘಾತಕಾರಿಯಾದ ಸುದ್ದಿಯಾಗಿತ್ತು. ಪುನೀತ್ ರಾಜಕುಮಾರ್ ಕೇವಲ ನಟ ಅಷ್ಟೆ ಅಲ್ಲ. ಅವರು ಅತಿ ದೊಡ್ಡ ಮಾನವೀಯ ಗುಣಗಳನ್ನು ಹೊಂದಿದ್ದ ಸರಳ ವ್ಯಕ್ತಿತ್ವದ ಎಲ್ಲರೊಡನೆ ಯಾವ ಹಮ್ಮು ಬಿಮ್ಮುಗಳಿಲ್ಲದೆ ಬೆರೆಯುವ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಅವರು ಸಿನಿಮಾ ರಂಗವನ್ನು ಕೇವಲ ಮನೋರಂಜನೆಗೆ ಸೀಮಿತವಾಗಿಡದೆ ಪ್ರೇಕ್ಷಕರಿಗೆ ಒಂದು ಒಳ್ಳೆಯ ಸಂದೇಶವನ್ನು ಕೊಡುವಂತಹ ಸಿನಿಮಾಗಳನ್ನೇ ಅವರು ಅರಿಸಿಕೊಳ್ಳುತ್ತಿದ್ದುದು ಅವರು ಉತ್ತಮ ಸಮಾಜಕ್ಕೆ ಕೊಡುತ್ತಿದ್ದ ಕೊಡುಗೆ ಹಾಗೂ ಕಾಳಜಿಯಾಗಿತ್ತು ಎಂದು ತಿಳಿಸಿದರು.
ಯಾವ ವಿದೇಶಿ ಕಂಪನಿಗಳ ಜಾಹಿರಾತುಗಳಿಗೆ ಅವರು ಬರದೇ, ಕೇವಲ ಸ್ವದೇಶಿ ಉತ್ಪನ್ನಗಳ ಜಾಹಿರಾತಿಗೆ ಮಾತ್ರ ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳುತ್ತಿದ್ದುದು ಹಾಗೂ ಸರ್ಕಾರಿ ಜಾಹಿರಾತುಗಳಿಗೆ ಯಾವುದೇ ಶುಲ್ಕ ಪಡೆಯದೇ ಭಾಗವಹಿಸುತ್ತಿದ್ದುದು, ಅವರ ಸ್ವದೇಶ ಪ್ರೇಮಕ್ಕೆ ಹಿಡಿದ ಕೈಗನ್ನದಿಯಾಗಿತ್ತು ಎಂದರು.
ಭಾರತೀಯ ಚಿತ್ರನಟನಾಗಿ, ಹಿನ್ನೆಲೆ ಗಾಯಕನಾಗಿ, ಉತ್ತಮ ನೃತ್ಯಗಾರನಾಗಿ, ಉತ್ತಮ ಫೈಟರ್ ಆಗಿ ಮತ್ತು ದೂರದರ್ಶನ ನಿರೂಪಕನಾಗಿ ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದ್ದ ಅವರು 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯ ನಟನಾದಾಗಲೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದ ಇಂತ ಪ್ರತಿಭಾನ್ವಿತ ನಟನನ್ನು ಕರುನಾಡಿನ ಜನತೆಯ ಕಳೆದುಕೊಂಡಿರುವುದು ಅತ್ಯಂತ ವಿಷಾದನೀಯ ಎಂದರು.
ಪುನೀತ್ ರಾಜಕುಮಾರ್ ರವರ ಇಂತಹ ಒಳ್ಳೆಯ ವ್ಯಕ್ತಿತ್ವ ಹಾಗೂ ಅವರ ಸಾಧನೆಗಳು ನಮ್ಮ ಯುವಕರಿಗೆ ಮಾದರಿಯಾಗಲಿ ಹಾಗೂ ಅವರ ದಿವ್ಯಾತ್ಮಕ್ಕೆ ಚಿರಶಾಂತಿಸಿಗಲಿ ಎಂದು ಎಸ್ ದತ್ತಾತ್ರಿ ಭಾವುಕರಾದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್, ಮಹಾನಗರ ಪಾಲಿಕೆಯ ಸದಸ್ಯರಾದ ನಾಗರಾಜ್ ಕಂಕಾರಿ, ರೇಖಾ ರಂಗನಾಥ್, ಡಾ. ಬಿ.ಎಂ. ಗೌತಮ್, ಡಾ. ಎಸ್. ದಿನಕರ್, ವನಶ್ರೀ ಕ್ಲಿನಿಕ್ ನ ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post