ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಪದೇ ಪದೇ ಬಂದ್ ಮಾಡುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಕರೆ ನೀಡಲಾಗಿರುವ ಬಂದ್ ಕೈಬಿಡಿ ಎಂದು ರೈತರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಸಾಗರದಲ್ಲಿ ಮಾತನಾಡಿದ ಅವರು, ಈಗಾಗಲೇ, ಬಂದ್ ಕೈಬಿಡಲು ರೈತರ ಬಳಿ ಪ್ರಧಾನಿಗಳು ಮನವಿ ಮಾಡಿದ್ದಾರೆ. ಆದರೆ, ಅವರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಪದೇ, ಪದೇ ಬಂದ್ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ರೈತರು ಈ ರೀತಿಯ ಕಟು ನಿರ್ಧಾರ ತೆಗೆದುಕೊಳ್ಳುವ ಅಗತ್ಯ ಇಲ್ಲ. ಇದರಿಂದ ಜನರಿಗೆ ತೊಂದರೆಯಾಗಲಿದೆ. ಭಾರತ್ ಬಂದ್ ಹೋರಾಟ ಕೈ ಬಿಡಲು ನಾನು ಕೂಡ ರೈತರಲ್ಲಿ ಮನವಿ ಮಾಡುತ್ತೇನೆ ಎಂದರು.

ಇನ್ನು, ಇಂದಿನಿಂದ ಅಧಿವೇಶನ ಆರಂಭಗೊಂಡಿದೆ. ಎರಡೂ ಕಡೆಯವರಿಗೂ ನ್ಯಾಯ ಒದಗಿಸುವಂತಹ ಅಧಿವೇಶನ ಇದಾಗಬೇಕೆಂಬುದು ನಮ್ಮ ಆಶಯ. ಲವ್ ಜಿಹಾದ್ ವಿಚಾರದ ಬಗ್ಗೆ ಈ ಬಾರಿಯ ಅಧಿವೇಶನದಲ್ಲಿ ಮಂಡನೆ ಮಾಡುವುದಿಲ್ಲ. ಮುಂದಿನ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದರು.

ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಚರ್ಚೆ ವಿಚಾರ ಪ್ರಸ್ತಾಪವಾಗಲಿದೆ. ಈ ಹಿಂದೆ ಕಾಯ್ದೆ ಮಂಡನೆ ಬಗ್ಗೆ ರಾಜ್ಯಪಾಲರು, ತಿರಸ್ಕರಿಸಿದ್ದರು. ನಾಳೆ ನಮ್ಮ ಸಚಿವರಿಗೆ ಈ ವಿಷಯ ಮಂಡನೆ ಮಾಡಲು ತಿಳಿಸಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















