ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾಡ ಹಬ್ಬ ಶಿವಮೊಗ್ಗ ದಸರಾದ #Shivamogga Dasara ಆರನೇ ದಿನವಾದ ಇಂದು ನಗರದ ಶಿವಪ್ಪ ನಾಯಕ ಆರಮನೆಯಲ್ಲಿ ಆಯೋಜಿಸಿದ್ದ ಕಲಾ ದಸರಾ ನೋಡುಗರ ಕಣ್ಮನ ಸೆಳೆಯಿತು.
ಕಲಾದಸರಾ #KalaDasara ಭಾಗವಾಗಿ ಚಿತ್ರ ಕಲಾ ಪ್ರದರ್ಶನ ಮತ್ತು ಛಾಯಾ ಚಿತ್ರ ಪ್ರದರ್ಶನ ಆಯೋಜಿಸಲಾಗಿದ್ದು, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ 25 ಕ್ಕೂ ಹೆಚ್ಚು ಕಲಾವಿದರು, ಸ್ಥಳದಲ್ಲಿಯೇ ವಿವಿಧ ಕಲಾ ಕೃತಿಗಳನ್ನು ರಚಿಸಿ, ನೋಡುಗರಲ್ಲಿ ಅಚ್ವರಿ ಮೂಡಿಸಿದರು.
ವಿಶೇಷವಾಗಿ ಕಲಾ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಕಲಾವಿದರೊಬ್ಬರು, ಕಲಾ ದಸರಾ ಉದ್ಘಾಟನೆಗೆ ಬಂದಿದ್ದ ಜಿಲ್ಲಾಧಿಕಾರಿ ಗುರುದತ್ ಹೆಗಡೆ #Gurudatta Hegde ಅವರ ಭಾವಚಿತ್ರವನ್ನು ಸ್ಥಳದಲ್ಲಿಯೇ ರಚಿಸಿ, ಜಿಲ್ಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರವಾದರು.
Also read: ಟೀ ಕುಡಿತಾ ಸಿಗರೇಟ್ ಸೇದುತ್ತೀರಾ? ಹಾಗಾದರೆ ಈ ಎಲ್ಲಾ ಅಪಾಯ ನಿಮಗೆ ಫಿಕ್ಸ್
ಬೆಳಗ್ಗೆ ಕಲಾದಸರಾ ಉದ್ಘಾಟಿಸಿದ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಮಾತನಾಡಿ, ರಾಜ್ಯದಲ್ಲಿಯೇ ಎರಡನೇ ಅತೀ ಸಂಭ್ರಮ ಮತ್ತು ಸಡಗರದಿಂದ ಅರ್ಥಪೂರ್ಣ ಆಚರಣೆಗೆ ಶಿವಮೊಗ್ಗ ದಸರಾ ಹೆಸರಾಗಿದೆ. ಕಲಾ ದಸರಾದ ಮೂಲಕ ಚಿತ್ರಕಲೆ ಮತ್ತು ಛಾಯಾ ಚಿತ್ರ. ಪ್ರದರ್ಶನವನ್ನು ಕಂಡಾಗ ಮನಸ್ಸಿಗೆ ಮುದ ನೀಡುತ್ತದೆ. ನಾನು ಕೂಡ ಕಲಾವಿದನಾಗಬೇಕೆಂಬ ಹಂಬಲ ಮೂಡಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಮೂಲ್ಯವಾದ ವನ್ಯ ಜೀವಿಗಳಿವೆ. ಪ್ರಕೃತಿ ಸೌಂದರ್ಯವಿದೆ. ಅದರ ಚಿತ್ರಣವನ್ನು ಇಲ್ಲಿ ಕಾಣಬಹುದು. ಇದನ್ನು ಕಂಡಾಗ ಪ್ರಕೃತಿಯ ಜೊತೆಗೆಯೇ ಇರಬೇಕೆಂದು ಮನಸು ಹೇಳುತ್ತದೆ. ಪರಿಸರದ ಬಗ್ಗೆ ಜಾಗೃತಿ ಕೂಡ ಮೂಡತ್ತದೆ. ನೈಸರ್ಗಿಕ ಪ್ರಾಮುಖ್ಯತೆಯ ಅನಾವರಣವಾಗಿದೆ. ಒತ್ತಡದಿಂದ ಹೊರ ಬರಲು, ಇಂತಹ ಕಾರ್ಯಕ್ರಮಗಳು ಸಹಕಾರಿ. ಮಕ್ಕಳ ಪ್ರತಿಭೆಯ ಅನಾವರಣ ಇಲ್ಲಿ ಆಗಿದೆ. ಶಾಲಾಮಕ್ಕಳಿಗೆ ಇದು ಪ್ರೇರಣೆಯಾಗುತ್ತದೆ ಎಂದರು.
ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಮಾತನಾಡಿ, ಛಾಯಾ ಚಿತ್ರಗಳು ಮನುಷ್ಯನ ಮನಸ್ಸಿಗೆ ಹತ್ತಿರವಾದ ವಿಷಯ. ನಾನು ಕೂಡ ಒಬ್ಬ ಛಾಯಾಗ್ರಹಕನೆ. ಛಾಯಾಗ್ರಹಣಕ್ಕೆ ತಾಳ್ಮೆ, ಆಸಕ್ತಿ ಅತೀ ಅಗತ್ಯ ಎಂದರು.
ಸಮಾರಂಭದಲ್ಲಿ 20 ಕ್ಕೂ ಹೆಚ್ಚು ಕಲಾವಿದರಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸಲು ಕ್ಯಾನ್ವಾಸ್ ಮತ್ತು ಪೇಂಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಯೋಜನಾ ನಿರ್ದೇಶಕರಾದ ರಂಗಸ್ವಾಮಿ, ಆಯುಕ್ತರಾದ ಕವಿತಾ ಯೋಗಪ್ಪನವರ್, ಕಲಾವಿದರ ಹಾಗೂ ಛಾಯಾ ಚಿತ್ರ ಗ್ರಾಹಕರ ಪರವಾಗಿ ಡಾ. ಪ್ರಶಾಂತ್ ಪೈ, ಉಪ ಆಯುಕ್ತ ತುಷಾರ್ ಹೊಸೂರು ಇದ್ದರು.ಇಂದು ಸಂಜೆ ವಿವಿಧ ಕಲಾ ತಂಡಗಳಿಂದ ಶಿವಪ್ಪ ನಾಯಕ ವೃತ್ತದಿಂದ ಗಾಂಧಿ ಬಜಾರ್ ಮೂಲಕ ಶಿವಪ್ಪ ನಾಯಕ ಆರಮನೆವರೆಗೆ ಕಲಾ ಜಾಥಾ ಹಮ್ಮಿಕೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post