ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯ ಆರು ವರ್ಷದ ಬಾಲಕನಿಗೆ ಬೋನ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಾಗಿ 8 ಲಕ್ಷ ರೂ ವೆಚ್ಚವನ್ನು ವೈದ್ಯರು ಸೂಚಿಸಿದ್ದು, ಸರ್ಕಾರದ ಆಯುಷ್ಮಾನ್ ಯೋಜನೆ ಫಲಾನುಭವಿಯಾಗಲು ರೇಷನ್ ಕಾರ್ಡ್ ನಲ್ಲಿ ಮಗುವಿನ ಹೆಸರಿಲ್ಲದ ಕಾರಣ ಹೆಸರು ನೊಂದಾಯಿಸುವ ಬಗ್ಗೆ ಯುವ ಮುಖಂಡರಾದ ಕೆ. ರಂಗನಾಥ್ ಅವರ ನೇತೃತ್ವದಲ್ಲಿ ಮಗುವಿನ ಪೋಷಕರಾದ ಇಂದುಮತಿ ಮತ್ತು ನವೀನ್ ಕುಮಾರ್ ದಂಪತಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಆಹಾರ ಇಲಾಖೆಯ ಆಯುಕ್ತರಿಗೆ ವಿಷಯವನ್ನು ತಿಳಿಸಿ, ಮಾನವಿತೆಯ ದೃಷ್ಟಿಯಿಂದ ಮಗುವಿನ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸಲು ಆದೇಶಿಸಿದ್ದರು. ಅದರಂತೆ ಮಗುವಿನ ಹೆಸರು ಪಡಿತರ ಚೀಟಿಯಲ್ಲಿ ನೊಂದಾವಣಿ ಆಗಿ ಈ ಮಗುವಿಗೆ ಆಯುಷ್ಮಾನ್ ಯೋಜನೆಯ 5 ಲಕ್ಷ ರೂ ಶಸ್ತ್ರ ಚಿಕಿತ್ಸೆಯ ವೆಚ್ಚ ಬಿಡುಗಡೆಗೊಳ್ಳಲಿದೆ.

ಜೊತೆಗೆ ಮಗುವಿನ ಪೋಷಕರ ಪರವಾಗಿ ಯುವ ಮುಖಂಡರಾದ ಕೆ. ರಂಗನಾಥ್ ಹಾಗೂ ಸ್ನೇಹಿತರು ಸಂಸದ ಬಿ. ವೈ. ರಾಘವೇಂದ್ರ ರವರನ್ನು ಭೇಟಿಯಾಗಿ ಮಗುವಿಗೆ ಶಸ್ತ್ರಚಿಕಿತ್ಸೆಗಾಗಿ 8 ಲಕ್ಷ ವೆಚ್ಚವಾಗಲಿದ್ದು, ಆಯುಷ್ಮಾನ್ ಯೋಜನೆ ಅಡಿಯಲ್ಲಿ ಪಡಿತರ ಚೀಟಿಯಲ್ಲಿ ಹೆಸರು ನೊಂದಾವಣೆ ಆದನಂತರ 5 ಲಕ್ಷ ರೂಪಾಯಿಗಳಷ್ಟು ಪರಿಹಾರ ಸಿಗುವುದು. ಇನ್ನು ಉಳಿದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಧನಸಹಾಯ ಮಾಡಬೇಕೆಂದು ಮನವಿ ಮಾಡಿದರು.

ಸಂಸದರು ಕೂಡ ಪಡಿತರ ಚೀಟಿಗೆ ಹೆಸರು ಸೇರಿಸಲು ಸಂಬಂಧಪಟ್ಟ ಆಯುಕ್ತರಿಗೆ ತಿಳಿಸಿ ಕೂಡಲೇ ಇವರಿಗೆ ಆಯುಷ್ಮಾನ್ ಯೋಜನೆಯ ಹಣದ ಜೊತೆಗೆ ಇನ್ನುಳಿದ ಬಾಕಿ ಶಸ್ತ್ರಚಿಕಿತ್ಸೆಯ ವೆಚ್ಚದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು. ಅದರಂತೆ ಇಂದು ಮುಖ್ಯಮಂತ್ರಿಗಳ ಕಚೇರಿಯಿಂದ ಸಂಬಂಧಪಟ್ಟ ಆಸ್ಪತ್ರೆಗೆ ಲಿಖಿತರೂಪದಲ್ಲಿ ಉಳಿದ ಶಸ್ತ್ರಚಿಕಿತ್ಸೆಯ ಹಣವನ್ನು ಮುಖ್ಯಮಂತ್ರಿಗಳ ನಿಧಿಯಿಂದ ಕೊಡಲಾಗುವುದೆಂದು ಸೂಚಿಸಿದ್ದಾರೆ.

ಇಂದಿನಿಂದ ಮಗುವಿನ ಶಸ್ತ್ರಚಿಕಿತ್ಸೆಯನ್ನು ಮಣಿಪಾಲ್ ಆಸ್ಪತ್ರೆಯ ವೈದ್ಯರು ನಡೆಸುತ್ತಿದ್ದು, ಮಾನವೀಯ ಮೌಲ್ಯಗಳೊಂದಿಗೆ ಬಾಲಕನ ಶಸ್ತ್ರಚಿಕಿತ್ಸೆಗೆ ನೆರವಾದ ಮುಖ್ಯಮಂತ್ರಿಗಳಿಗೂ, ಸಂಸದರಿಗೂ ಹಾಗೂ ಜಿಲ್ಲಾಡಳಿತಕ್ಕೆ ನಗರದ ನಾಗರಿಕರ ಪರವಾಗಿ ಹೃದಯಸ್ಪರ್ಶಿ ಕೃತಜ್ಞತೆಗಳು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















