ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶಿವಮೊಗ್ಗಕ್ಕೆ ಕಾಲಿಡುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಕೊಟ್ಟಿರುವ ಸುದ್ದಿ ಸಿಕ್ಕಿದೆ. ಮುಂದಿನ ದಿನದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.
ಈಗಾಗಲೇ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಪ್ರಣಾಳಿಕೆಯಲ್ಲಿರುವ ಗ್ಯಾರಂಟಿ ಕೊಡಬೇಕು. ಆ ನಿಟ್ಟಿನಲ್ಲಿ ಆಡಳಿತ ಮಾಡಿಕೊಂಡು ಹೋಗುವ ಜವಾಬ್ದಾರಿ ಇದೆ. ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ಸರ್ಕಾರದ ಮೇಲೆ ಜನರು ವಿಶ್ವಾಸವಿಡಬೇಕು ಎಂದರು.
ಹಂತಹಂತವಾಗಿ ಎಲ್ಲವೂ ಆಗುತ್ತದೆ. ನೀಡಿರುವ ಆಶ್ವಾಸನೆಯನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ವಿರೋಧ ಪಕ್ಷದವರು ಅವರ ಕೆಲಸ ಮಾಡಲಿ. ಗ್ಯಾರಂಟಿ ಆದ ಮೇಲೆ ಅವರು ಬೇರೆ ರೂಟ್ ಹಿಡಿದಿದ್ದಾರೆ. ವಿರೋಧ ಪಕ್ಷದವರಿಗೆ ಮಾಡುವುದಕ್ಕೆ ಯಾವುದೇ ಕೆಲಸವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಾಗರ ಕ್ಷೇತ್ರದಲ್ಲಿ ಶಿಕ್ಷಕರಿಲ್ಲದೆ ಶಾಲೆ ತೆರೆಯದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಆ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ, ಅತಿಥಿ ಶಿಕ್ಷಕರಿದ್ದಾರೆ. ಖಾಯಂ ಶಿಕ್ಷಕರು ಬೇಕೆಂಬ ಬೇಡಿಕೆಯಿದೆ. ಹಂತಹಂತವಾಗಿ ಎಲ್ಲವನ್ನೂ ಸರಿ ಮಾಡುತ್ತೇವೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.
ನೇಮಕಾತಿಯನ್ನು ಕಾನೂನು ಬದ್ಧವಾಗಿ ಮಾಡಬೇಕಾಗುತ್ತೆ. ಹೈದರಬಾದ್ – ಕರ್ನಾಟಕ ಮತ್ತಿತರ ವಿಭಾಗಗಳಿವೆ, ಅದನ್ನು ಗಮನಿಸಬೇಕು. ಕೆಲವೊಂದು ಪ್ರಕರಣ ನ್ಯಾಯಾಲಯದಲ್ಲಿವೆ. ಈಗ ನಾನು ಏನು ಹೇಳಿದರು ತಪ್ಪಾಗುತ್ತದೆ. ಅಧಿಕಾರಿಗಳ ಜೊತೆ ಮಾತಾಡುತ್ತೇನೆ. ಮಕ್ಕಳ ವಿದ್ಯಾಭಾಸಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಪೋಷಕರಿಗೆ, ಮಕ್ಕಳಿಗೆ ವಿಶ್ವಾಸ ಕೊಡುತ್ತೇನೆ ಎಂದು ಹೇಳಿದರು.
ಅಧಿಕಾರ ಬದಲಾವಣೆ ಆಗಿದೆ. ಯಾರಿಂದ ತಪ್ಪುಗಳು ಆಗಿವೆ ನಿಮಗೆ ಗೊತ್ತು. ನಾನು ಸಚಿವನಾಗಿ ಐದು ದಿನ ಆಗಿಲ್ಲ. ಆದರೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದೇನೆ. ವರ್ಗಾವಣೆಗೆ 87 ಸಾವಿರ ಜನ ಅರ್ಜಿ ಹಾಕಿದ್ದಾರೆ. ಎಲ್ಲಾ ಪ್ರಕ್ರಿಯೆ ಮುಗಿದು ನೋಟಿಫಿಕೇಶನ್ ಆಗಿದೆ. ಸದ್ಯದಲ್ಲಿಯೇ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಸಚಿವರು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















