ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಧಾನಸಭಾ ಚುನಾವಣೆಯ ನಂತರ ಪಕ್ಷದ ಚಟುವಟಿಕೆಗಳೊಂದಿಗೆ ಅಂತರ ಕಾಯ್ದುಕೊಂಡಿರುವ ಮಾಜಿ ಶಾಸಕ ಕುಮಾರ್ ಬಂಗಾರಪ್ಪ #KumarBangarappa ಅವರ ನಡೆಯಿಂದ ಕ್ಷೇತ್ರದಲ್ಲಿ ಬಿಜೆಪಿಗೆ #BJP ಧಕ್ಕೆಯಾಗುತ್ತಿದೆ ಎಂದು ಪಕ್ಷದ ಮುಖಂಡ ಜ್ಞಾನೇಶ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಸೊರಬದಲ್ಲಿ #Soraba ಬಿಜೆಪಿ ಬಗ್ಗೆ ಜನರ ಮನಸ್ಸಿನಲ್ಲಿ ಇದ್ದ ಸ್ಥಾನಕ್ಕೆ ಧಕ್ಕೆಯಾಗುತ್ತಿದೆ. ಕುಮಾರ್ ಬಂಗಾರಪ್ಪ ಅವರ ನಡೆಯಿಂದ ಕಾರ್ಯಕರ್ತನ ಮನಸ್ಸಿನಲ್ಲಿ ನೋವು ಮಡುಗಟ್ಟಿದೆ. ಕ್ಷೇತ್ರದಲ್ಲಿ ಪಕ್ಷ ನಾವಿಕನಿಲ್ಲದ ದೋಣಿಯಂತಾಗಿದೆ ಎಂದರು.
ಕಳೆದ ಚುನವಣೆಯಲ್ಲಿ ನಮ್ಮ ಪಕ್ಷಕ್ಕೆ 54 ಸಾವಿರ ಮತ ಬಂದಿರುವುದು ವ್ಯಕ್ತಿಯಿಂದಲ್ಲ. ಬದಲಾಗಿ ಪಕ್ಷವನ್ನು ನೋಡಿ ಜನರು ಬೆಂಬಲಿಸಿದ್ದಾರೆ. ಹೀಗಾಗಿ, 54 ಸಾವಿರ ಮಂದಿ ಚಲಾಯಿಸಿದ್ದ ಮತದ ಋಣಕ್ಕಾಗಿ ನಾವು ಅವರ ಕಷ್ಟ, ನೋವುಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದೆ. ಇಂತಹ ಸಂದರ್ಭದಲ್ಲಿ ಕುಮಾರ್ ಬಂಗಾರಪ್ಪ ಎಷ್ಟು ಬಾರಿ ಜನರು ಹಾಗೂ ಕಾರ್ಯಕರ್ತರ ಕಷ್ಟ ಕೇಳಿದ್ದಾರೆ? ಎಷ್ಟು ಸ್ಪಂದಿಸಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಕಾರ್ಯಕರ್ತರು ಅವರ ನಾಯಕತ್ವದ ಮೇಲೆ ಇಟ್ಟುಕೊಂಡ ನಂಬಿಕೆ ಹುಸಿಯಾಗಿದೆ. ಅಧಿಕಾರವಿದ್ದಾಗ ಕಾರ್ಯಕರ್ತರನ್ನು ದೂರವಿಟ್ಟು ದುರಾಡಳಿತ ವರ್ತನೆ ತೋರಿ ಕ್ಷೇತ್ರದ ಕಡೆ ಮುಖ ಮಾಡುತ್ತಿಲ್ಲ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು, ಮುಖಂಡರು ಸಮಸ್ಯೆಯಲ್ಲಿದ್ದಾಗ ಸೌಜನ್ಯಕ್ಕೂ ಭೇಟಿ ಮಾಡಿ ಅವರ ಸುಖ, ಕಷ್ಟ ಆಲಿಸದೆ ಬೆಂಗಳೂರಿನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ದೇಶದಾದ್ಯಂತ ಕಾರ್ಯಕರ್ತರು ಸಂಭ್ರಮಾಚರಣೆ ಆಚರಿಸುತ್ತಿದ್ದರೆ ಕುಮಾರ್ ಬಂಗಾರಪ್ಪ ಯಾವುದೇ ಖುಷಿ ವ್ಯಕ್ತಪಡಿಸಿಲ್ಲ. ಬಿ.ವೈ. ವಿಜಯೇಂದ್ರ #BYVijayedndra ಅವರು ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರೂ ಸೌಜನ್ಯಕ್ಕೂ ಅಭಿನಂದನೆ ತಿಳಿಸದೆ ಇರುವುದು ಅವರ ಸಣ್ಣತನ ತೋರಿಸುತ್ತದೆ ಎಂದು ಟೀಕಿಸಿದರು.
ಕ್ಷೇತ್ರದ ಸಮಸ್ಯೆ ಬಗ್ಗೆ ಮುಖಂಡರು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಯಾವುದಕ್ಕೂ ಸ್ಪಂದಿಸದ ಕುಮಾರ್ ಬಂಗಾರಪ್ಪ ಅವರ ಭಾವಚಿತ್ರವನ್ನು ಪಕ್ಷದ ಬ್ಯಾನರ್’ಗಳಲ್ಲಿ ಹಾಕುವ ಅವಶ್ಯಕತೆ ಏನಿದೆ. ಕುಮಾರ್ ಬಂಗಾರಪ್ಪ ಅವರು ಪಕ್ಷಕ್ಕೆ ಅಷ್ಟು ಅನಿವಾರ್ಯವೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವ ಕುಮಾರ್ ಬಂಗಾರಪ್ಪ ಅವರು ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಇವರ ನಡೆಗಳು ಅವರ ಬಳಿ `ಪ್ಲಾನ್ ಬಿ’ #PlanB ಏನಾದರೂ ಸಿದ್ದವಾಗಿದೆಯೇ ಎಂಬ ಅನುಮಾನಗಳನ್ನು ಸಾಮಾನ್ಯ ಕಾರ್ಯಕರ್ತನಲ್ಲಿ ಹುಟ್ಟುಹಾಕಿದೆ ಎಂದು ಕಿಡಿ ಕಾರಿದ್ದಾರೆ.
ಇಂತಹ ವರ್ತನೆಗಳಿಂದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೊರಬದಲ್ಲಿ ಹಿನ್ನಡೆಯಾಗಿ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯಿತು. ಇದರ ಬೆನ್ನಲ್ಲೇ ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಇಂತಹ ಸಂದರ್ಭದಲ್ಲಿ ಪಕ್ಷದಲ್ಲಿನ ಇಂತಹ ಅಂತಃಕಲಹಗಳು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೊರಬದಲ್ಲಿ ದೊಡ್ಡ ಪೆಟ್ಟು ಕೊಡುವುದು ನಿಶ್ಚಿತ. ಹೀಗಾಗಿ, ಪಕ್ಷದ ಹಿರಿಯರು, ರಾಜ್ಯಾಧ್ಯಕ್ಷರು ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ಸರಿಪಡಿಸಿ, ಲೋಕಸಭಾ ಚುನಾವಣೆಯ ಹಾಗೂ ಜನರ ಕಷ್ಟಕ್ಕೆ ಸ್ಪಂದಿಸಲು ಪಕ್ಷ ಸಂಘಟನೆಗೆ ಹಾದಿ ಸುಗಮ ಮಾಡಿಕೊಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಸುರೇಂದ್ರ ಮಾವಲಿ, ಶಿವಾನಂದ ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post