ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಸಚಿವಾಲಯದ ವತಿಯಿಂದ ಕರ್ನಾಟಕ ಸರ್ಕಾರದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಸಹಯೋಗದೊಂದಿಗೆ ಮಾ.24ರಿಂದ 26ರವರೆಗೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮೂರು ದಿನಗಳ ಕಾಲ ವ್ಯಾಪಾರ ಮೇಳ ಮತ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಎಂಎಸ್ಎಂಇನ ನಿರ್ದೇಶಕ ದೇವರಾಜ್ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ನೋಂದಾಯಿತ ಕುಶಲಕರ್ಮಿಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿ ಬಡಗಿ, ದೋಣಿ ತಯಾರಕ, ಕಮ್ಮಾರ, ಬೀಗ ತಯಾರಿಕಾ, ಚಿನ್ನ, ಕುಂಬಾರ, ಚಮ್ಮಾರ, ಪೊರಕೆ ತಯಾರಕ, ಗೊಂಬೆ ತಯಾರಕ, ಆಟಿಕೆ ತಯಾರಿಕಾ, ಢೊಭೀ, ಕ್ಷೌರಿಕ, ಹೂಮಾಲೆ ತಯಾರಿಕ, ಟೈಲರ್, ಮೀನುಗಾರಿಕೆ ತಯಾರಿಕ ಸೇರಿದಂತೆ ಸುಮಾರು 18 ವೃತ್ತಿಗಳನ್ನು ಇದು ಒಳಗೊಂಡಿದೆ.
ಈಗಾಗಲೇ ಈ ಯೋಜನೆಯಡಿಯಲ್ಲಿ ನೋಂದಾಯಿತ ಕುಶಲಕರ್ಮಿಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗಿದ್ದು, ದಿನಕ್ಕೆ 500 ರೂ.ಗಳ ಸ್ಟೈಫಂಡ್ನಂತೆ ತರಬೇತಿ ನೀಡಿ, 15 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಿ ಒಂದು ಲಕ್ಷ ರೂ.ವರೆಗೆ ಸಾಲ ನೀಡಿ ಅದನ್ನು ಮರುಪಾವತಿ ಮಾಡಿದವರಿಗೆ 2ನೇ ಕಂತಾಗಿ 2 ಲಕ್ಷ ರೂ. ಸಾಲಗಳನ್ನು ಶೇ.5ರ ಬಡ್ಡಿ ದರದಲ್ಲಿ ನೀಡಲಾಗಿದೆ ಎಂದರು.
ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಮಾರುಕಟ್ಟೆ ಬೆಂಬಲ ನೀಡುವ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಸಂಪರ್ಕವನ್ನು ಒದಗಿಸುವುದು ಈ ವ್ಯಾಪಾರ ಮೇಳದ ಪ್ರಮುಖ ಉದ್ದೇಶವಾಗಿದೆ. ಸುಮಾರು 50ಕ್ಕೂ ಹೆಚ್ಚು ಮಳಿಗೆಗಳನ್ನು ಇಲ್ಲಿ ನೀಡಲಾಗಿದ್ದು, ಕೈಯಿಂದ ನೇಯ್ದ, ಬುಟ್ಟಿಗಳು, ಕುಂಬಾರಿಕೆ ಕರಕುಶಲ ವಸ್ತುಗಳು, ಮರದ ಕೊಂಬೆಗಳು, ಟೈಲರಿಂಗ್ ಸರಕುಗಳು, ಮೃದು ಆಟಿಕೆಗಳು, ಕಲ್ಲಿನ ಕೆತ್ತನೆಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸುರೇಶ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















