ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ವಿರೋಧಿಸಿ ಇಂದು ಎನ್ಎಸ್ಯುಐ ವತಿಯಿಂದ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ಹೊರಬಿದ್ದೊಡನೆ, ತೀರ್ಪಿನಲ್ಲಿ ಮೇಲ್ಮನವಿಗೆ ಅವಕಾಶವಿದ್ದರೂ ಆದೇಶದ ಪ್ರತಿ ಕೈಗೆ ಸಿಗುವ ಮೊದಲೇ ಕಾಂಗ್ರೆಸ್ನ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿದರು.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಾ ದ್ವೇಷದ ರಾಜಕಾರಣ ಮಾಡುತ್ತಿದೆ. ಆ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆತಂಕ ತಂದೊಡ್ಡುತ್ತಿದೆ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮುಂದಿನ ಪ್ರಧಾನಿ ಅಭ್ಯರ್ಥಿ. ಅವರನ್ನು ರಾಜಕೀಯವಾಗಿ ಮುಗಿಸುವ ಸಂಚಿನಿಂದಾಗಿ ಬಿಜೆಪಿ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದಾಗಲೂ ತರಾತುರಿಯಲ್ಲಿ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದೆ. ಇದು ಖಂಡನೀಯ ಎಂದರು.
ಮೋದಿಗಳ ವಿರುದ್ಧ ರಾಹುಲ್ ಮಾತನಾಡಿದ್ದು ಒಬಿಸಿಗಳಿಗೆ ಅವಮಾನ ಎಂದು ಬಿಜೆಪಿಯವರು ಹೇಳುತ್ತಾರೆ. ನೀರವ್ ಮೋದಿ ಒಬಿಸಿಗೆ ಸೇರಿದವನೇ? ಲಲಿತ್ ಮೋದಿ, ಮೆಹುಲ್ ಚೋಕ್ಸಿ ಒಬಿಸಿಯೇ? ಅವರು ದೇಶದ ಜನರ ಹಣದೊಂದಿಗೆ ಪರಾರಿಯಾಗಿದ್ದಾರೆ. ಅಂತಹ ದೇಶಭ್ರಷ್ಟರನ್ನು ಟೀಕಿಸಿದರೆ ಬಿಜೆಪಿಗೆ ನೋವಾಗುತ್ತದೆ. ದೇಶ ಉಳಿಸಲು ಕೆಲಸ ಮಾಡಿದವರನ್ನು ಬಿಜೆಪಿ ಶಿಕ್ಷಿಸುತ್ತದೆ. ದೇಶದ ಹಣ ಲೂಟಿ ಮಾಡಿದವರನ್ನು ವಿದೇಶಕ್ಕೆ ಕಳಿಸುತ್ತಾರೆ. ಗಾಂಧಿ ಕುಟುಂಬದ ರಕ್ತ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪೋಷಿಸಿದೆ. ನಾವು ದೇಶದ ಪ್ರಜಾಪ್ರಭುತ್ವಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ. ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದವರು ಕಾಂಗ್ರೆಸ್ನ ಮಹಾನ್ ನಾಯಕರು. ದೇಶದ ಏಕತೆಗಾಗಿ ಸಾವಿರಾರು ಕಿಲೋಮೀಟರ್ ನಡೆದ ಹಾಗೂ ಹುತಾತ್ಮ ಪ್ರಧಾನಿಯ ಮಗ ಯಾವತ್ತೂ ಈ ದೇಶಕ್ಕೆ ಅವಮಾನ ಮಾಡುವುದಿಲ್ಲ ಎಂದರು.
ಕೂಡಲೇ ಅನರ್ಹಗೊಳಿಸಿರುವುದನ್ನು ವಾಪಾಸು ಪಡೆಯಬೇಕು. ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ರಾಹುಲ್ ಗಾಂಧಿ ಅವರ ಅನರ್ಹತೆ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎನ್ಎಸ್ಯುಐ ಪ್ರಮುಖರಾದ ರವಿ ಕಾಟಿಕೆರೆ, ಚರಣ, ಹರ್ಷಿತ್, ವಿಜಯಕುಮಾರ್ ಎಸ್.ಎನ್., ರವಿಕುಮಾರ್, ಚಂದ್ರೋಜಿರಾವ್, ತೌಫಿಕ್, ಬಸವರಾಜ್ ಪ್ರಮೋದ್, ಸಮರ್ಥಗೌಡ, ಅಭಿಷೇಕ್, ವರುಣ್, ಕುಮಾರ್, ಉಲ್ಲಾಸ್, ಪ್ರದೀಪ್, ಸಾಗರ್, ದೀಪು, ಅನಂತ, ಅಶೋಕ್, ಯೋಗೇಶ್, ಕಾರ್ತಿಕ್, ಮಧು ನಿಖಿಲ್ ಮತ್ತಿತರರು ಪಾಲ್ಗೊಂಡಿದ್ದರು. (ಫೋಟೋ ಇದೆ)
ಸದಾಶಿವ ಆಯೋಗ ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸು ಹಿನ್ನೆಲೆ: ಮಾದಿಗ ದಂಡೋರ ಸಮಿತಿ ಅಭಿನಂದನೆ
ಮಾದಿಗ ಸಮುದಾಯದ ಹಲವು ವರ್ಷಗಳ ಬೇಡಿಕೆಯಾದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿಮಾಡಲು ಕೇಂದ್ರಸರ್ಕಾರಕ್ಕೆ ಶಿಫಾರಸು ಮಾಡಿರವುದಕ್ಕೆ ಕರ್ನಾಟಕ ಮಾದಿಗ ದಂಡೋರ ಸಮಿತಿಯ ಜಿಲ್ಲಾ ಶಾಖೆ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಮಿತಿಯ ಸಂಘಟನಾ ಕಾರ್ಯದರ್ಶಿ ಮತ್ತು ಜಿಲ್ಲಾಧ್ಯಕ್ಷ ಶಿವಾಜಿ, ಡಾ.ಬಿ.ಆರ್, ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆಯ ಕನಸು ಸಾಕಾರಗೊಂಡಂತಾಗಿದೆ. ಹಲವು ಶತಮಾನಗಳಿಂದ ಶೋಷಣೆಗೆ, ತುಳಿತಕ್ಕೆ ಒಳಗಾಗಿ ಸಮಾಜದ ಕೊನೆಯ ಸ್ಥರದಲ್ಲಿದ್ದ ಮಾದಿಗ iತ್ತು ಅದರ ಉಪಜಾತಿಗಳಿಗೆ ಒಳಮೀಸಲಾತಿಯಲ್ಲಿ ಮಾನ್ಯತೆ ನೀಡಬೇಕು ಎಂದು ಕಳೆದ 30 ವರ್ಷಗಳಿಂದ ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಎ.ಜೆ. ಸದಾಶಿವ ಆಯೊಗದ ವರದಿ ಜಾರಿ ಮಾಡುವಂತೆ ಕಾಂಗ್ರೆಸ್ ಸೇರಿದಂತೆ ಹಲವು ಸರ್ಕಾರಗಳು ಹಿಂದೆಮುಂದೆ ನೋಡಿದ್ದವರು. ಇದರ ವಿರುದ್ಧ ಅಸ್ಪೃಶ್ಯ ಜಾತಿಯ ನಾವು ಹೋರಾಟ ಮಾಡುತ್ತಲೇ ಬಂದಿದ್ದೆವು. ನಮ್ಮ ಹೋರಾಟ ಈಗ ಫಲಪ್ರದವಾಗಿದೆ ಎಂದರು.
ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಈಗ ಈ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದಿದೆ. ನಮ್ಮ ಹೋರಾಟಕ್ಕೆ ಸಮಿತಿಯಲ್ಲದೆ ಹಲವು ಅಸ್ಪೃಶ್ಯ ಜಾತಿಗಳು ಬೆಂಬಲ ನೀಡಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೋವಿಂದ ಕಾರಜೋಳ, ಎ. ನಾರಾಯಣಸ್ವಾಮಿ, ಪ್ರಭು ಚವ್ಹಾಣ್ ಮತ್ತು ಮಂತ್ರಿಮಂಡಲಕ್ಕೆ ನಮ್ಮೊಂದಿಗೆ ಸಹಕರಿಸಿದ ದಲಿತ ಸಮಿತಿಗಳಿಗೆ ಹೋರಾಟಗಾರರಿಗೆ ಅಭಿನಂದನೆಗಳು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ಕೆ. ಅಣ್ಣಪ್ಪ, ರಂಗಪ್ಪ, ಹೆಚ್.ಎನ್. ಮಂಜುನಾಥ್, ಸಿ,ಮೂರ್ತಿ, ಶಿವಪ್ಪ, ಪ್ರಭು, ಬೀರನಕೆರೆ ಮಂಜಣ್ಣ, ರಮೇಶ್ ಮುಂತಾದವರಿದ್ದರು.
ಸದಾಶಿವ ಆಯೋಗ ವರದಿ ಜಾರಿ ವಿರೋಧಿಸಿ ಮಾ.30ರಂದು ಬೃಹತ್ ಕಾಲ್ನಡಿಗೆ ಜಾಥಾ
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಆಗ್ರಹಿಸಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ವಿರೋಧಿಸಿ ಬಂಜಾರ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಬಂಜಾರ ಸಮಾಜ, ಮಾ.30ರಂದು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಿದೆ ಎಂದು ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ಗಿರೀಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮತನಾಡಿ, ರಾಜ್ಯ ಸರ್ಕಾರ ಒಳಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಿರುವುದು ರಾಜಕೀಯ ಪ್ರೇರಿತವಾಗಿದೆ. ವೋಟಿಗಾಗಿ ಮೀಸಲಾತಿಯ ವರ್ಗೀಕರಣ ಶಿಫಾರುಸ ಮಾಡಿದೆ. ಇದನ್ನು ವಿರೋಧಿಸಿ ಈಗಾಲೇ ಬಂಜಾರ ಸಮುದಾಯ ಮತ್ತು ಇತರ ಸಮುದಾಯಗಳು ಬಹುದೊಡ್ಡ ಹೋರಾಟವನ್ನೇ ಹಮ್ಮಿಕೊಂಡಿವೆ. ರಾಜ್ಯ ಸರ್ಕಾರದ ಈ ಚುನಾವಣೆಯ ಸಂದರ್ಭದ ಗಿಮಿಕ್ ವಿರೋಧಿಸಿ ನಾವು ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದೇವೆ ಎಂದರು.
ಶಿಕಾರಿಪುರದಲ್ಲಿ ನಡೆದ ಘಟನೆಗೆ ಸಂಬಧಿಸಿದಂತೆ ಮಾತನಾಡಿದ ಅವರು, ಇದೊಂದು ದುರದೃಷ್ಟಕರ. ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ನಿಜ. ಆದರೆ ನಮ್ಮ ಪ್ರತಿಭಟನೆ ತಹಸೀಲ್ದಾರ್ ಕಚೇರಿ ಎದುರು ನಡೆಯುತ್ತಿತ್ತು. ಪ್ರತಿಭಟನೆಯನ್ನು ಹತಿಕ್ಕುವ ಉದ್ದೇಶದಿಂದ ಅಲ್ಲಿ ನಮಗೆ ಅವಕಾಶ ನೀಡದೆ, ಮನವಿ ಸ್ವೀಕರಿಸದೆ ಗೇಟ್ ಹಾಕಿದರು. ಇದನ್ನು ಪ್ರಶ್ನಿಸಲು ನಾವು ನಮ್ಮ ಕ್ಷೇತ್ರದ ಶಾಸಕರು ಹಾಗೂ ಸಂಸದರ ಮನೆಗೆ ಹೋದೆವು ಎಂದರು.
ಆದರೆ ಅಲ್ಲಿನಮ್ಮನ್ನು ಪೊಲೀಸರು ತಡೆದುದಲ್ಲದೆ ಪ್ರತಿಭಟನಕಾರರ ಮೇಲೆ ಲಾಠಿ ಪ್ರಹಾರ ನಡೆಸಿದರು. ಹವರನ್ನು ಬಂಧಿಸಿದರು. ಇದನ್ನು ನಾವು ಖಂಡಿಸುತ್ತೇವೆ ಮತ್ತು ಘಟನೆಗೆ ಸಂಬಂಧಿಸಿದಂತೆ ಕೆಲವರು ಯಡಿಯೂರಪ್ಪ ಮನೆ ಮೇಲೆ ಕಲ್ಲು ಬೀಸಿರಬಹುದು. ಇದು ದುರದೃಷ್ಟಕರ ಘಟನೆ. ಪೊಲೀಸರು ನಿಜವಾಗಿ ಯಾರು ತಪ್ಪು ಮಾಡಿದ್ದಾರೋ ಅವರನ್ನು ಬಂಧಿಸಲಿ ಬೇಡ ಎನ್ನುವುದಿಲ್ಲ. ಆದರೆ ಅಮಾಯಕರನ್ನು, ಪ್ರತಿಭಟನೆಯಲ್ಲಿ ಭಾಗವಹಿಸದಿರುವವರನ್ನು ಕೂಡ ಬಂಧಿಸಿದ್ದಾರೆ. ಮತ್ತು ಕಾಂಗ್ರೆಸ್ ಕಾರ್ಯಕರ್ತರು ಎಂಬ ಕಾರಣಕ್ಕೆ ಬಂಧಿಸಿದ್ದಾರೆ ಇದು ಸರಿಯಲ್ಲ ಎಂದರು.
ಈ ಇಡೀ ಘಟನೆ ಈಗ ರಾಜಕೀಯ ಬಣ್ಣಕ್ಕೆ ತಿರುಗಿದೆ. ಪ್ರತಿಭಟನೆಗೆ ಕಾಂಗ್ರೆಸ್ ಕಾರಣ ಎಂದ ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಸ್ವತಃ ಬಿ.ಎಸ್. ಯಡಿಯೂರಪ್ಪನವರು ನಾನು ಯಾರ ಮೇಲೂ ತಪ್ಪು ಹೊರಿಸುವುದಿಲ್ಲ ಎಂದು ಹೇಳುತ್ತಾರೆ. ನಿಜವಾಗಿಯೂ ಈ ಪ್ರತಿಭಟನೆಯಲ್ಲಿ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಹೀಗೆ ಎಲ್ಲಾ ಪಕ್ಷದವರೂ ಇದ್ದಾರೆ. ಇದು ಪಕ್ಷಾತೀತ ಹೋರಾಟವಾಗಿದೆ. ಆದರೆ ಬಿಜೆಪಿ ಇದನ್ನು ರಾಜಕಾರಣಗೊಳಿಸುತ್ತಿರುವುದು ಸರಿಯಲ್ಲ ಎಂದರು.
ನಮ್ಮ ಪ್ರಮುಖ ಬೇಡಿಕೆಗಳೆಂದರೆ, ಶಿಕಾರಿಪುರದಲ್ಲಿ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ. ಸುಮಾರು 25ಕ್ಕೂ ಹೆಚ್ಚು ಅಮಾಯಕರ ವಿರುದ್ದ ಕೇಸು ದಾಖಲಿಸಲಾಗಿದೆ. ಕೂಡಲೇ ಬಂಧಿತರ ಬಿಡುಗಡೆಯಾಗಬೇಕು. ಕೇಸು ವಾಪಾಸು ತೆಗದುಕೊಳ್ಳಬೇಕು. ಮತ್ತು ಕೇಂದ್ರಕ್ಕೆ ನೀಡಿದ ಶಿಫಾರಸನ್ನು ವಾಪಾಸು ಪಡೆಯಬೇಕು ಹಾಗೂ ನಮ್ಮ ಸಮಾಜದ ಪ್ರಮುಖರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ವರದಿ ವಾಪಾಸು ತರಿಸಿಕೊಳ್ಳದಿದ್ದರೆ ಅವರು ರಾಜೀನಾಮೆ ಕೊಡಬೇಕು ಮತ್ತು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದರು.
ಮಾ.30ರಂದು ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾಲ್ನಡಿಗೆ ಜಾಥಾದ ಮೂಲಕ ನಾವು ತಲುಪುತ್ತೇವೆ. ನ ಮಗೆ ಪ್ರತಿಭಟನೆಗೆ ಅವಕಾಶ ನೀಡದೆ ಹೋದರೆ ನಮ್ಮೆಲ್ಲರನ್ನು ಸಾಮೂಹಿಕವಾಗಿ ಬಂಧಿಸಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿನಯ್ ರಾಜಾವತ್, ಉಮಾಮಹೆಶ್ವರ ನಾಯ್ಕ, ಬಸವರಾಜ ನಾಯ್ಕ, ಶಶಿ ನಾಯ್ಕ, ಚಿತ್ರಪ್ಪ, ಅಭಿಷೇಕ್ ಸೇರಿದಂತೆ ಹಲವರಿದ್ದರು.
ಮುಸ್ಲಿಂ ಮೀಸಲಾತಿ ಪುನರ್ ಸ್ಥಾಪಿಸುವಂತೆ ಎಸ್ಡಿಪಿಐ ಆಗ್ರಹ
ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಮಾ.24ರ ಸಂಪುಟ ಸಭೆಯಲ್ಲಿ 2(ಬಿ) ಅಡಿಯಲ್ಲಿ ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿಯನ್ನು ರದ್ದುಪಡಿಸಿದ್ದು, ಇದು ಅಸಾಂವಿಧಾನಿಕವಾಗಿದ್ದು, ಒಂದು ನಿರ್ದಿಷ್ಟ ಸಮುದಾಯವನ್ನು ಗುರುಪಡಿಸಲಾಗಿದೆ ಎಂದು ಆರೋಪಿಸಿ ಕೂಡಲೇ ಮೀಸಲಾತಿಯನ್ನು ಪುನರ್ ಸ್ಥಾಪಿಸುವಂತೆ ಆಗ್ರಹಿಸಿ ಎಸ್ಡಿಪಿಐ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಲರಿಗೆ ಮನವಿ ಸಲ್ಲಿಸಲಾಯಿತು.
ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದಿರುವುದರಿಂದ ೨(ಬಿ) ಪ್ರವರ್ಗದಡಿಯಲ್ಲಿ ಇತರ ಹಿಂದುಳಿದ ವರ್ಗಗಳಂತೆ ಸಾಮಾಜಿಕ, ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವೆಂದು ಕರ್ನಾಟಕದ ಮುಸ್ಲಿಂ ಸಮುದಾಯವನ್ನು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಲಾಗಿದ್ದು, 2(ಬಿ) ಮೀಸಲಾತಿ ನೀಡಲಾಗಿತ್ತು. ಸ್ವಾತಂತ್ರ್ಯಾನಂತರ ನಾಗನಗೌಡ ಸಮಿತಿ , ವೆಂಕಟಸ್ವಾಮಿ ಆಯೋಗ ಮತ್ತು 1990ರ ಚನ್ನಪ್ಪ ರೆಡ್ಡಿ ಆಯೋಗ ಕೂಡ ಮುಸ್ಲಿಂರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿತ್ತು. ಹೀಗಿದ್ದರೂ ಸಹ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಹಾಗೂ ಮುಖ್ಯವಾಹಿನಿಗೆ ಬರದಂತೆ ನೋಡಿಕೊಳ್ಳುವ ಷಡ್ಯಂತ್ರದ ಮುಂದುವರಿದ ಭಾಗವಾಗಿ ಬಿಜೆಪಿ ಸರ್ಕಾರ ೨(ಬಿ) ಮೀಸಲಾತಿಯನ್ನು ರದ್ದುಪಡಿಸಿರುವುದು ದೃಢವಾಗುತ್ತದೆ. ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯಕ್ಕೆ ನಿಗದಿಯಾಗಿದ್ದ 2(ಬಿ) ಮೀಸಲಾತಿಯನ್ನು ಮರುಸ್ಥಾಪಿಸಬೇಕೆಂದು ಎಸ್ಡಿ.ಪಿಐ ಆಗ್ರಹಿಸಿದೆ.
ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಮುಸ್ಲಿಂರ ಹಿತದೃಷ್ಟಿಯಿಂದ ಸರ್ಕಾರ ಕರ್ತವ್ಯನಿರ್ವಹಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post