ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಉಡುಪಿ |
40% ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಅವರಿಗೆ ಬಿಗ್ ರಿಲೀಫ್ ದೊರೆತಿದೆ.
ಪ್ರಕರಣ ಸಂಬಂಧಿಸಿದಂತೆ ಉಡುಪಿ #Udupi ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟನ್ನು #BReport ಜನಪ್ರತಿನಿಧಿ ನ್ಯಾಯಾಲಯವು ಅಂಗೀಕರಿಸಿದ್ದು, ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರು, ಶಾಮೀಲಾಗಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಈ ಸ್ಪಷ್ಟನೆಯಿಂದಾಗಿ ಸಂತೋಷ್ ಕುಟುಂಬಸ್ಥರು ಮಾಡಿದ್ದ ಆರೋಪವನ್ನು ತಳ್ಳಿ ಹಾಕಿದಂತಾಗಿದೆ.

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಎನ್ನುವವರು 2020ರ ಏಪ್ರೀಲ್ 12ರಂದು ಇಬ್ಬರು ಸ್ನೇಹಿತರೊಂದಿಗೆ ಉಡುಪಿಗೆ ತೆರಳಿ ಅಲ್ಲಿನ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಆತ್ಮಹತ್ಯೆಗೂ ಮುನ್ನ ಸಂತೋಷ್ ಆತ್ಮೀಯರಿಗೆ ವಾಟ್ಸಪ್ ಸಂದೇಶ ಕಳುಹಿಸಿ ಕಾಮಗಾರಿಯ ಹಣ ಬಿಡುಗಡೆಯಲ್ಲಿ ಆಗುತ್ತಿರುವ ತೊಂದರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದೇನೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದರು.
ಅಲ್ಲದೆ ಈಶ್ವರಪ್ಪನವರ ಆಪ್ತಸಹಾಯಕರೊಬ್ಬರಿಗೆ ಹಣ ನೀಡಿದ್ದ ಮಾಹಿತಿಯೂ ಅದರಲ್ಲಿತ್ತು ಎನ್ನಲಾಗಿತ್ತು. ಇದರ ಆಧಾರದಲ್ಲಿ ಎಫ್ಐಆರ್ನಲ್ಲಿ ಈಶ್ವರಪ್ಪ ಅವರ ಹೆಸರನ್ನು ಸೇರಿಸಲಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆಯನ್ನೂ ಸಹ ನೀಡಿ ತನಿಖೆಗೆ ಸಹಕರಿಸಿದ್ದರು. ಆ ನಂತರ ತನಿಖೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ಈಶ್ವರಪ್ಪನವರ ಪಾತ್ರ ಇಲ್ಲ ಎಂದು ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಸಂತೋಷ್ ಕುಟುಂಬಸ್ಥರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೂಲಂಕುಷ ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸರು ಸಲ್ಲಿಸಿದ ಬಿ-ರಿಪೋರ್ಟನ್ನು ಅಂಗೀಕರಿಸಿ ಈಶ್ವರಪ್ಪನವರನ್ನು ಆರೋಪ ಮುಕ್ತಗೊಳಿಸಿದೆ.

ಸಂತೋಷ್ ಆತ್ಮಹತ್ಯೆ ವಿಚಾರದಲ್ಲಿ ಈಶ್ವರಪ್ಪ ದೋಷಮುಕ್ತರಾದ ಹಿನ್ನೆಲೆಯಲ್ಲಿ ಅವರ ಹಿತೈಷಿಗಳು ಹಆಗೂ ಅಭಿಮಾನಿಗಳು ಭೇಟಿ ನೀಡಿ ಅಭಿನಂದಿಸಿದರು. ಈಶ್ವರಪ್ಪ ಹಾಗೂ ಕುಟುಂಬಸ್ಥರಿಗೆ ಸಿಹಿ ವಿತರಿಸಿ ಸಂಭ್ರಮ ವ್ಯಕ್ತಪಡಿಸಿದರು.












Discussion about this post