ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ನರೇಂದ್ರಮೋದಿಯವರ #PM Narendra Modi ಪ್ರೀತಿಯ ಯೋಜನೆಯಾದ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಂದ 50ಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳಲ್ಲಿ ತಾವು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯಾಪಾರ ಮೇಳವನ್ನು ಎಂಎಸ್ಎಂಇ ಹಮ್ಮಿಕೊಂಡಿದ್ದು, ಕುಶಲಕರ್ಮಿಗಳನ್ನು ಮತ್ತು ಸಣ್ಣ ಉದ್ಯಮಿಗಳನ್ನು ಉತ್ತೇಜಿಸುವ ಈ ಮೇಳ ಇಂದಿನಿಂದ ಮೂರು ದಿನಗಳ ಕಾಲ ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು ಸಣ್ಣ ಉದ್ಯಮಿಗಳನ್ನು ಪ್ರೋತ್ಸಾಹಿಸಿ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಣ್ಣ ಉದ್ಯಮಿಗಳಿಗೆ ವಿಶ್ವಕರ್ಮ ಯೋಜನೆಯಡಿ #Vishwakarma Scheme ತರಬೇತಿ ನೀಡಿ, ಆರ್ಥಿಕ ನೆರವು ನೀಡಿ ಮಾರ್ಕೆಟಿಂಗ್ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗದ ಆರುವರೆ ಸಾವಿರ ಯುವಕರು ಮತ್ತು ಬಡವರಿಗೆ ಇದರ ಲಾಭ ದೊರೆತ್ತಿದ್ದು, ಸ್ವಾಭಿಮಾನದ ಬದುಕಿಗೆ ಶಕ್ತಿ ತುಂಬಿದೆ ಎಂದರು.
ರಾಷ್ಟ್ರದಲ್ಲಿ ಐದು ರಾಜ್ಯಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಜಯಭೇರಿ ಭಾರಿಸಲಿದೆ. ರಾಜ್ಯಸಭೆಯಲ್ಲಿ ಈಗಾಗಲೇ ಕಾಂಗ್ರೆಸ್ ಸದಸ್ಯರೇ ಕ್ರಾಸ್ ವೋಟ್ಮಾಡಿ ಕಾಂಗ್ರೆಸ್ ಸಾಕು ಎಂಬ ಮನಸ್ಥಿತಿಗೆ ಬಂದಿದ್ದಾರೆ. ದಾವಣಗೆರೆ ಮತ್ತು ಬಾಗಲಕೋಟೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗಲೇ ಸೇರಿದ ಜನಸ್ತೋಮವೇ ಶುಭಸೂಚನೆ ನೀಡಿದೆ. ನಿರಾಯಾಸವಾಗಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆ. ಒಂದು ಕಡೆ ಕುಬೇರ ಸ್ಪರ್ಧಿಸಿದ್ದರೆ ಅವರಿಗೆ ಎದುರಾಳಿಯಾಗಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ನಿಂತ್ತಿದ್ದಾನೆ. ಕಾಂಗ್ರೆಸ್ನ ಗ್ಯಾರೆಂಟಿ ಯೋಜನೆಯ ಬಗ್ಗೆ ಜನ ಈಗಾಗಲೇ ಭ್ರಮಾನಿರಸನಗೊಂಡಿದ್ದಾರೆ. ಅಭಿವೃದ್ಧಿ ಶೂನ್ಯ ಸರ್ಕಾರದ ವಿರುದ್ಧ ಜನ ಮತ ಚಲಾಯಿಸುತ್ತಾರೆ ಎಂದರು.
ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಎಲ್ಪಿಜಿ ಸರಬರಾಜಿಗೆ ಸೂಕ್ತಕ್ರಮ ಕೈಗೊಳ್ಳಲಾಗಿದೆ. ಯುದ್ಧ ಪ್ರಾರಂಭವಾಗಿದ್ದರೂ ಭಾರತ ದೇಶದ ಮುನ್ನೆಚ್ಚರಿಕೆಯಿಂದ ಮೈಲುಗಟ್ಟಲೆ ಕ್ಯೂನಿಂತು ಪಡೆಯುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿಲ್ಲ. ವಾಣಿಜ್ಯ ಬಳಕೆ ಸಿಲಿಂಡರ್ ಸರಬರಾಜು ಕೂಡ ಇಂದಿನಿಂದ 20% ಏರಿಕೆ ಮಾಡಿದ್ದಾರೆ. ಸುಳ್ಳು ಸೃಷ್ಟಿಸಿ ಗೊಂದಲ ಮೂಡಿಸುವ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವ ಪ್ರಕ್ರಿಯೆ ಯಥಾಪ್ರಕಾರವಾಗಿ ಮುಂದುವರೆದಿದೆ. ಆದರೆ ಜನರಿಗೆ ಎಲ್ಲವೂ ಅರಿವಿದೆ. ಪ್ರಧಾನ ಮಂತ್ರಿಗಳೇ ಸೂಕ್ತ ಎಚ್ಚರಿಕೆ ತೆಗೆದುಕೊಂಡು ದೇಶದ ಜನರಿಗೆ ಅಗತ್ಯಕ್ರಮ ಕೈಗೊಂಡಿದ್ದಾರೆ ಎಂದರು.
ಇವಿಎಂ ಬೇಡ ಮತಪತ್ರ ಬೇಕು ಎನ್ನುವ ಕಾಂಗ್ರೆಸ್ ದ್ವಂದ್ವ ನಿಲುವು ಜಗಜ್ಜಾಹಿರವಾಗಿದೆ. ಒಂದೆಡೆ ಗ್ರೇಟರ್ ಬೆಂಗಳೂರು ಅಂತ್ತಾರೆ. ಇನ್ನೊಂದೆಡೆ ಬ್ಯಾಲೇಟ್ ಪೇಪರ್ ಬೇಕು ಎನ್ನುತ್ತಾರೆ. ಗೆದ್ದಾಗ ಒಂದು, ಸೋತಾಗ ಒಂದು ಮನಸ್ಥಿತಿ ಕಾಂಗ್ರೆಸ್ನದ್ದು ಎಂದರು.
ಪಂಪ್ಡ್ ಸ್ಟೋರೇಜ್ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ ಎಂಬ ಪ್ರಶ್ನೆಗೆ ಕೇಂದ್ರ ಮತ್ತು ರಾಜ್ಯ 60-40ರ ಅನುಪಾತದಲ್ಲಿ ಈ ಯೋಜನೆಗೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೇಂದ್ರ ಇನ್ನೂ ಅಧಿಕೃತ ಒಪ್ಪಿಗೆ ನೀಡಿಲ್ಲ. ಯಾವುದೇ ಒತ್ತಡವನ್ನು ಹೇರಿಲ್ಲ. ಸಧ್ಯಕ್ಕೆ ಪರಿಸರದ ದೃಷ್ಟಿಯಿಂದ ತಡೆ ಹಿಡಿಯುವ ಕೆಲಸ ಆಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.
ಇಂಡಿಗೋ ಕಂಪನಿ ತನ್ನ ವಿಮಾನಯಾನವನ್ನು ಶಿವಮೊಗ್ಗದಲ್ಲಿ ಮೇ.1ರಿಂದ ನಿಲ್ಲಿಸಲಿದೆ ಎಂಬ ಪ್ರಶ್ನೆಗೆ ಈಗಾಗಲೇ ಕಂಪನಿಯ ಪ್ರಮುಖರೊಂದಿಗೆ ಮಾತುಕತೆ ನಡೆದಿದೆ. ಸಕಾರಾತ್ಮಕವಾಗಿ ಅವರು ಸ್ಪಂದಿಸಿದ್ದು ಮೇನಿಂದ ಇಂಡಿಗೋ ಯಾನ ನಿಲ್ಲಿಸದಂತೆ ನಾನು ಕೂಡ ಹಲವುಭಾರಿ ಮನವಿ ಮಾಡಿದ್ದೇನೆ. ಶಿವಮೊಗ್ಗ-ಬೆಂಗಳೂರು ವಿಮಾನ ಮಾರ್ಗ ಉಡಾನ್ ಯೋಜನೆಯಡಿ ಬರುವುದಿಲ್ಲ. ಬಿಎಸ್ವೈ ಮುಖ್ಯಮಂತ್ರಿಗಳಾಗಿದ್ದಾಗ ಈ ಮಾರ್ಗಕ್ಕೆ ಸಹಾಯಧನವಾಗಿ ವಾರ್ಷಿಕ ಎರಡು ಕೋಟಿ ರೂ. ಸರ್ಕಾರದಿಂದಲೇ ವಿಮಾನಯಾನ ಕಂಪನಿಗೆ ನೀಡುತ್ತಿದ್ದರು. ಅದನ್ನು ಈಗಲೂ ಮುಂದುವರಿಸಲಾಗಿದೆ. ಉಳಿದ ಐದೂ ಮಾರ್ಗಗಳು ಉಡಾನ್ ಯೋಜನೆಯಡಿ ಯಶಸ್ವಿಯಾಗಿ ಮುಂದುವರಿದೆ ಎಂದರು.
ವಿಮಾನ ನಿಲ್ದಾಣದಲ್ಲಿ ದುಬಾರಿ ಪಾರ್ಕಿಂಗ್ ಶುಲ್ಕದ ಬಗ್ಗೆಯೂ ಈಗಾಗಲೇ ಆಟೋ ಮತ್ತು ಟ್ಯಾಕ್ಸಿ ಚಾಲಕರ ಜೊತೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತಂದೂ ಸಭೆ ನಡೆಸಿದ್ದೇನೆ. ಅದು ಕೂಡ ಬಗೆಹರಿಯಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಹಾಗೂ ಎಸ್.ಜ್ಞಾನೇಶ್ವರ್, ರಾಜೇಶ್ ಕಾಮತ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















