ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಜಾರಿಗೆ ತಂದ ಐದು ಗ್ಯಾರಂಟಿಗಳು ಬರಗಾಲ ಮತ್ತು ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ಜನಸಾಮಾನ್ಯರ ಕೈಹಿಡಿದಿವೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ #Geetha Shivarajkumar ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸಿರಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಗೆರೆ ಮಾರಿಕಾಂಬಾ ದೇವಸ್ಥಾನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮಾಂತರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಮಹಿಳೆಯರಿಗೆ ವಾರ್ಷಿಕ ₹1 ಲಕ್ಷ ಕುಟುಂಬ ನಿರ್ವಹಣೆ ಭತ್ಯೆ ಸೇರಿದಂತೆ, ಅನೇಕ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದರು.
Also read: ತಳ್ಳುವ ಗಾಡಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು
ಗ್ಯಾರಂಟಿ ಯೋಜನೆಗಳು ಶೇ 100ರಷ್ಟು ನಮ್ಮ ಕೈಹಿಡಿಯಲಿವೆ. ಇವುಗಳಿಂದ ಬಿಜೆಪಿಯವರು ಸೇರಿದಂತೆ ಎಲ್ಲ ವರ್ಗದ ಜನರಿಗೂ ಅನುಕೂಲ ಆಗಿದ್ದು, ಆರ್ಥಿಕ ಶಕ್ತಿ ಸಿಕ್ಕಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 60ಸಾವಿರ ಕುಟುಂಬಗಳು ಒಂದಿಲ್ಲೊಂದು ಯೋಜನೆಯ ಫಲಾನುಭವಿಗಳಾಗಿವೆ. ಫಲಾನುಭವಿಗಳೆಲ್ಲರಿಗೂ ಕಾಂಗ್ರೆಸ್ ಬಗ್ಗೆ ಕೃತಜ್ಞತೆ ಇರುವುದು ನನಗೆ ಶ್ರೀರಕ್ಷೆಯಾಗಲಿದೆ ಎಂದರು.
ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಮಾತನಾಡಿ, ತಳಮಟ್ಟದಲ್ಲೆಲ್ಲೂ ನರೇಂದ್ರ ಮೋದಿ ಅಲೆ ಇಲ್ಲ. ಇರುವುದೆಲ್ಲವೂ ರಾಜ್ಯ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ಮತ್ತು ಕಾಂಗ್ರೆಸ್ ಅಲೆ ಎಂದ ಅವರು, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಬೆಂಬಲಿಸಬೇಕು ಎಂದು ಕೋರಿದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಈ ಭಾಗಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ #Bangarappa ಅವರು ಅತಿ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕೂಡ ಇಲ್ಲಿನ ರೈತರ ನೆರವಿಗೆ ನಿಂತಿದ್ದರು. ಅದೇ ಹಾದಿಯಲ್ಲಿ ಗೀತಾ ಅವರು ಕೂಡ ಸಾಗಲಿದ್ದಾರೆ. ಆದ್ದರಿಂದ, ಈ ಚುನಾವಣೆಯಲ್ಲಿ ಮತ ನೀಡಿ ಹರಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಶ್ರೀನಿವಾಸ ಕರಿಯಣ್ಣ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಎಲ್ಲಾ ಜಾತಿ- ಧರ್ಮಗಳಿಗೆ ಅನುಕೂಲವಾಗಿದೆ. ಕಡುಬಡವರು ಬದುಕು ರೂಪಿಸಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆ ಋಣ ತೀರಿಸಲು ಸಿಕ್ಕ ಅವಕಾಶವಿದು. ಆದ್ದರಿಂದ, ಇಲ್ಲಿ ಗೀತಕ್ಕ ಅವರಿಗೆ ಮತ ನೀಡಬೇಕು ಎಂದರು.
ನಟ ಶಿವರಾಜಕುಮಾರ್ #Shivarajkumar ಮಾತನಾಡಿದರು. ಭೋವಿ ನಿಗಮ ಅಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತವೀರ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಆರ್. ನಾಗರಾಜ, ಲೋಕೇಶಪ್ಪ, ನಿರಂಜನ್, ಧೀರರಾಜ ಹೊನ್ನವಿಲೆ, ಇಕ್ಕೇರಿ ರಮೇಶ್, ಗಿರೀಶ್, ಉಡ್ಡಪ್ಪ, ಮಸ್ಕರ್ ರಾಜಪ್ಪ, ಕೆ.ಪಿ.ಗಣಪತಿ, ಅಣ್ಣಪ್ಪ, ಕಲೀಂ, ಕೆ.ಆರ್.ಲೋಕೇಶ್, ಶ್ರೀನಿವಾಸ, ಕೆ.ಸಿ.ನಾಗರಾಜ, ನೂರುಲ್ಲಾ, ದೊಡಪ್ಪ, ಶಂಕರಪ್ಪ, ಕೃಷ್ಣ ಮೂರ್ತಿ ಇದ್ದರು.

ಸಿರಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೀತಾ ಶಿವರಾಜಕುಮಾರ ಪರ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಇಲ್ಲಿ ಹೆಚ್ಚು ಕೂಲಿ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ಇದರಿಂದ, ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಆಸರೆ ಆಗಿವೆ.
-ವಿನಾಯಕ, ಮಲೆಶಂಕರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















