ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕುಂಚೇನಹಳ್ಳಿಗೆ ನಿಯೋಜನೆಗೊಂಡಿದ್ದ ಬಿ.ಬೀರನಹಳ್ಳಿ ಪಿಡಿಒ ಎಸ್. ಕಾಂತರಾಜ್ ಅವರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ.ಎಲ್. ವೈಶಾಲಿ ಅವರು ಸೇವೆಯಿಂದ ಅಮಾನತುಪಡಿಸಿ ಆದೇಶಿಸಿದ್ದಾರೆ.
ಕೊರೋನಾ ಎರಡನೆಯ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಕಠಿಣ ಕ್ರಮಗಳನ್ನು ರೂಪಿಸಿದ್ದು, ಮದುವೆ ಮನೆಯಲ್ಲಿ 50ಕ್ಕಿಂತ ಹೆಚ್ಚು ಜನ ಸೇರದಂತೆ ಏ.21ರಂದು ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಆದರೆ ಕೊರೋನಾ ನಿಯಮಾವಳಿಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಕಾಂತರಾಜು ಅವರನ್ನು ಕರ್ತವ್ಯದಿಂದ ಅಮಾತುಪಡಿಸಲಾಗಿದೆ.

ಏಪ್ರಿಲ್ 26ರಂದು ಜಿಪಂ ಸಿಇಒ ಎಂ.ಎಲ್. ವೈಶಾಲಿ ಅವರು ಕೊರೋನಾ ನಿಯಮಾವಳಿಗಳ ಅಡಿಯಲ್ಲಿ ಮದುವೆಗಳು ನಡೆಯುತ್ತಿರುವ ಕುರಿತು ತಪಾಸಣೆ ಕೈಗೊಂಡಿದ್ದ ಸಂದರ್ಭದಲ್ಲಿ ಕುಂಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಮದುವೆಗಳು ಕೊರೋನಾ ನಿಯಮಾವಳಿಗಳನ್ನು ಮೀರಿ ನಡೆದಿದ್ದವು ಎನ್ನಲಾಗಿದೆ.

ಪ್ರಸಕ್ತ ಪರಿಸ್ಥಿತಿಯಲ್ಲಿ ಮದುವೆಯಲ್ಲಿ 50 ಜನ ಮಾತ್ರ ಇರಬೇಕೆಂಬ ಕಾನೂನು ಇದ್ದರೂ, ಹೆಚ್ಚು ಜನ ಮದುವೆಯಲ್ಲಿ ಕಂಡುಬಂದ ಕಾರಣ ಎಸ್. ಕಾಂತರಾಜ್ ಅವರನ್ನು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಜಿಪಂ ಸಿಇಒ ಅಮಾನತ್ತಿನಲ್ಲಿರಿಸಿ ಆದೇಶಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















