ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿನಿಮಾಗಳು ಮನಸ್ಸನ್ನು ಹಗುರ ಮಾಡಬೇಕು ಮತ್ತು ಮನರಂಜನೆಯ ಜೊತೆಗೆ ಮಾಹಿತಿಯನ್ನು ನೀಡುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ #Minister Madhu Bangarappa ಹೇಳಿದರು.
ಅವರು ಇಂದು ಮಹಾನಗರಪಾಲಿಕೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ `ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2025ರ ಚಲನಚಿತ್ರ ದಸರಾ’ #Dasara ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿನಿಮಾ ಕ್ಷೇತ್ರವು ಒಂದು ಪ್ರತ್ಯೇಕವಾದ ಲೋಕ. ಇಲ್ಲಿ ಸಾವಿರಾರು ಕಲಾವಿದರು, ನಟರು, ನಿರ್ಮಾಪಕರು, ತಂತ್ರಜ್ಞರು ಬದುಕು ಕಟ್ಟಿಕೊಳ್ಳುತ್ತಾರೆ. ನಮ್ಮ ಕಲಾವಿದರು ಹಲವರಿಗೆ ಬದುಕನ್ನು ಕಟ್ಟಿಕೊಡುತ್ತಾರೆ. ಕಲೆ ಎಂಬುದೇ ಶ್ರೇಷ್ಟ. ಈ ಕಲೆ ಉಳಿಯಬೇಕು. ಬೆಳೆಯಬೇಕು. ಕೇವಲ ಮನರಂಜನೆ ಒಂದಿದ್ದರೆ ಸಾಲದು, ಅದರ ಜತೆಗೆ ಉತ್ತಮವಾದ ಸಂದೇಶಗಳು ಕೂಡ ಸಮಾಜಕ್ಕೆ ಹೋಗಬೇಕು. ಇಂದು ಎಲ್ಲ ಕ್ಷೇತ್ರಗಳಲ್ಲೂ ರಾಜಕಾರಣ, ಜಾತೀಯತೆ ನುಗ್ಗಿವೆ. ಆದರೆ, ಸಿನಿಮಾ ಕ್ಷೇತ್ರ ಇದರಿಂದ ಹೊರಬರಬೇಕಾಗಿದೆ ಎಂದರು.
ಶಿಕ್ಷಣಕ್ಕೆ ಇಂದು ಆದ್ಯತೆ ನೀಡಲಾಗುತ್ತಿದೆ. ದೇವಸ್ಥಾನದ ಗಂಟೆಗಳ ಜತೆಗೆ ಶಾಲೆಯ ಗಂಟೆಗಳು ಬಾರಿಸಬೇಕಾಗಿದೆ. ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಸಿನಿಮಾಗಳು ಕೂಡ ಶಿಕ್ಷಣಕ್ಕೆ ಪೂರಕವಾಗಿದ್ದರೆ ಮತ್ತಷ್ಟು ಅನುಕೂಲವಾಗುತ್ತದೆ. ನಾನು ಕೂಡ ಸಿನಿಮಾ ಕ್ಷೇತ್ರದವನೇ. ನಿರ್ಮಾಪಕನಾಗಿ, ನಟನಾಗಿ, ಆಡಿಯೋ ಕಂಪನಿ ಮಾಲೀಕನಾಗಿ ಕೆಲಸ ಮಾಡಿದ ಅನುಭವವಿದೆ. ಉತ್ತಮ ಕತೆ ಸಿಕ್ಕರೆ, ಶರಣ್, ಕಾರುಣ್ಯಾ ರಾಮ್ ನಂತಹ ನಟ, ನಟಿಯರು ಡಿಸ್ಕೌಂಟ್ ನೀಡಿದರೆ ಈಗಲೂ ಸಿನಿಮಾ ನಿರ್ಮಾಣ ಮಾಡುವೆ. ಆ ಆಸೆ ಇನ್ನೂ ಇದೆ ಎಂದರು.
ಹಬ್ಬಗಳು ನಿತ್ಯನೂತನವಾಗಿರಬೇಕು. ಸಂಭ್ರಮ, ಸಡಗರಗಳು ತುಂಬಬೇಕು. ಚೈತನ್ಯ ತರಬೇಕು. ಭಕ್ತಿಯೂ ಇರಬೇಕು. ಸಾಮರಸ್ಯವೂ ಇರಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗ ದಸರಾ ನಾಡಿನಲ್ಲಿಯೇ ಪ್ರಖ್ಯಾತಿಯಾಗುತ್ತಿದೆ. ಇಂತಹ ಹಬ್ಬವನ್ನು ಮತ್ತಷ್ಟು ಚಂದಗಾಣಿಸೋಣ. ಎಲ್ಲರೂ ಒಟ್ಟಾಗಿ ಶಿವಮೊಗ್ಗ ದಸರಾವನ್ನು ವಿಜೃಂಭಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಸಿನಿಮಾ ಸಂತೋಷ ಕೊಡುವ ಕ್ಷೇತ್ರ. ದಸರಾದಲ್ಲಿ ಚಲನಚಿತ್ರ ದಸರಾವನ್ನು ಸೇರ್ಪಡೆಗೊಳಿಸಿರುವುದು ಅತ್ಯಂತ ಖುಷಿ ಕೊಟ್ಟಿದೆ. ಹಲವು ವರ್ಷಗಳಿಂದ ಶಿವಮೊಗ್ಗದಲ್ಲಿ ನಗರಸಭೆ ವತಿಯಿಂದ ದಸರಾ ಆಚರಿಸುತ್ತಾ ಬರಲಾಗುತ್ತಿದೆ. ಮೊದ ಮೊದಲು ಚಂದಾ ಎತ್ತಿ ದಸರಾ ಆಚರಣೆ ಮಾಡಲಾಗುತ್ತಿತ್ತು. ಆದರೆ ಈಗ ಪಾಲಿಕೆ ನಂತರ ಶಿವಮೊಗ್ಗ ದಸರಾಕ್ಕೆ ಒಂದು ವಿಶೇಷ ಅರ್ಥ ಬಂದಿದೆ. ಎಲ್ಲಾ ಸರ್ಕಾರಗಳು ಕೂಡ ಶಿವಮೊಗ್ಗ ದಸರಾಕ್ಕೆ ಅನುದಾನ ನೀಡುತ್ತಲೇ ಬಂದಿವೆ. ಈ ಬಾರಿಯೂ ಕೂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 50 ಲಕ್ಷ ರೂ. ಅನುದಾನ ಕೊಟ್ಟಿದ್ದಾರೆ. ಅದರ ಜತೆಗೆ ಪಾಲಿಕೆ ಹಣವೂ ಸೇರಿದಂತೆ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ದಸರಾವನ್ನು ಈ ಬಾರಿ ಅತ್ಯಂತ ವೈಭವದಿಂದ ಆಚರಿಸುತ್ತಿದ್ದೇವೆ. ನಮ್ಮ ಶಿವಮೊಗ್ಗ, ನಮ್ಮ ದಸರಾ ನಮ್ಮ ಹೆಮ್ಮೆ. ಈ ವರ್ಷ 11 ದಿನಗಳ ಕಾಲ ಹಬ್ಬ ಆಚರಿಸುತ್ತಿದ್ದೇವೆ. ಪಾಲಿಕೆಯ ಎಲ್ಲಾ ಸಿಬ್ಬಂದಿಗಳು, ಆಯುಕ್ತರು ನಮಗೆ ಸಹಕಾರ ನೀಡಿದ್ದಾರೆ ಎಂದರು.
ನಟ ಶರಣ್ #Sharan ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ನಾನು ಕಾರ್ಯಕ್ರಮದ ಅಧ್ಯಕ್ಷ ಮಾತ್ರ. ಆದರೆ ಶರಣ್ ಕಾಯಂ ಅಧ್ಯಕ್ಷರಾಗಿದ್ದಾರೆ. ಅವರ ಅಧ್ಯಕ್ಷ ಚಿತ್ರ ಶಾಶ್ವತವಾದ ಅಧ್ಯಕ್ಷ ಪಟ್ಟವನ್ನು ಕೊಟ್ಟಿದೆ. ಶಿವಮೊಗ್ಗಕ್ಕೆ ಇವರು ಮತ್ತು ನಟಿ ಕಾರುಣ್ಯಾ ರಾಮ್ ಅವರು ಬಂದು ದಸರಾವನ್ನು ಮತ್ತಷ್ಟು ಚಂದಗಾಣಿಸಿದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















