ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರವನ್ನು ಸುಂದರೊಳಿಸಲು ಹಾಗೂ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಡಾ ವತಿಯಿಂದ ಪಾರ್ಕ್ಗಳ ಅಭಿವೃದ್ದಿ, ಕೆರೆಗಳ ಅಭಿವೃದ್ದಿ, ಆಟೋ ನಿಲ್ದಾಣಗಳ ನಿರ್ಮಾಣ ಮತ್ತು ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ಬುಧವಾರ ನಗರದ ವಿವಿಧೆಡೆ ಪಾರ್ಕ್ ಅಭಿವೃದ್ದಿ, ರಸ್ತೆ ಕಾಮಗಾರಿ ಮತ್ತು ಆಟೋ ನಿಲ್ದಾಣ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಜೆ ಹೆಚ್ ಪಟೇಲ್ ಬಡಾವಣೆಯ ಎಫ್ ಬ್ಲಾಕ್ನಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ಪಾರ್ಕ್ ಅಭಿವೃದ್ದಿ ಹಾಗೂ ಸಹಕಾರ ನಗರದ ಚಂದ್ರಶೇಖರ್ ಅವರ ಮನೆಯಿಂದ ರೂ. 25 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ಸೋಮಿನಕೊಪ್ಪದ ಆದರ್ಶನಗರ, ಹುಚ್ಚರಾಯ ಕಾಲೋನಿ ಪಿ & ಟಿ ಕಾಲೋನಿ ಕ್ರಾಸ್, ಎಲ್ ಬಿ ಎಸ್ ನಗರ, ಕುವೆಂಪು ನಗರ ಡಬಲ್ ರಸ್ತೆ ಮತ್ತು ಜೆಎನ್ಎನ್ಸಿಇ ಐದು ಕಡೆ ಸೇರಿ ಒಟ್ಟು ರೂ.20 ಲಕ್ಷ ವೆಚ್ಚದಲ್ಲಿ ಸಾರ್ವಜನಿಕರು ಮತ್ತು ಆಟೋ ಚಾಲಕರ ಅನುಕೂಲಕ್ಕಾಗಿ ಆಟೋ ನಿಲ್ದಾಣಗಳನ್ನು ನಿರ್ಮಿಸಲು ಗುದ್ದಲಿ ಪೂಜೆ ಹಾಗೂ ರೂ.25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕುವೆಂಪು ನಗರ ಹತ್ತಿರದ ಎನ್ಇಎಸ್ ಬಡಾವಣೆಯ ಉದ್ಯಾನವನ ಅಭಿವೃದ್ದಿ ಮತ್ತು ಓಪನ್ ಜಿಮ್ ಉದ್ಘಾಟಿಸಿದರು.
ಶಿವಮೊಗ್ಗ-ಭದ್ರಾವತಿ ವ್ಯಾಪ್ತಿಯಲ್ಲಿ 22 ಕೆರೆಗಳನ್ನು ಹೈಟೆಕ್ ಆಗಿ ಅಭಿವೃದ್ದಿಪಡಿಸಲಾಗುವುದು. ಈಗಾಗಲೇ 7 ಕೆರೆಗಳ ಟೆಂಡರ್ ಪ್ರಕ್ರಿಯೆ ಆಗಿದೆ, 4 ಕೆರೆಗಳ ಅಭಿವೃದ್ದಿಗೆ ಕಾರ್ಯಾದೇಶವಾಗಿದೆ ವಾಕಿಂಗ್ ಪಾಥ್, ಮಕ್ಕಳ ಆಟಿಕೆಗಳು, ಫೆನ್ಸ್, ಲೈಟ್, ಐಲ್ಯಾಂಡ್ ನಿರ್ಮಾಣ ಸೇರಿದಂತೆ ಅತ್ಯಂತ ಸುಂದರವಾಗಿ ಕೆರೆಗಳನ್ನು ಅಭಿವೃದ್ದಿಸಲು ಯೋಜನೆ ರೂಪಿಸಲಾಗಿದೆ.
ನಗರದಲ್ಲಿ ನಿವೇಶನ ಸಿಗುವುದು ಕಷ್ಟವಾಗಿರುವ ಹಿನ್ನೆಲೆ ಸಾರ್ವಜನಿಕರಿಗೆ ಹಂಚಲು ಜೆ ಹೆಚ್ ಪಟೇಲ್ ಬಳಿ 1.5 ಎಕರೆಯಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಇಲ್ಲಿಯ 100 ಅಡಿ ರಸ್ತೆಯಲ್ಲಿ ಮಾಲ್ ನಿರ್ಮಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ಇತ್ತೀಚೆಗೆ ನಗರ ಪ್ರದೇಶದಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ಆದ್ದರಿಂದ ಗಿಡಗಳನ್ನು ನೆಡುವುದು, ಪಾರ್ಕ್ ಅಭಿವೃದ್ದಿ ಪಡಿಸುವುದು ಅತ್ಯವಶ್ಯಕವಾಗಿದೆ. ನಾವು ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ನಗರವನ್ನು ಸುಂದರವಾಗಿ ಮತ್ತು ಹಸಿರಾಗಿ ಇಟ್ಟುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸೂಡಾ ಎಇಇ ಬಸವರಾಪ್ಪ, ಎಇಇ ಗಂಗಾಧರಸ್ವಾಮಿ, ಮುಖಂಡರು, ಬಡಾವಣೆಗಳ ನಿವಾಸಿಗಳು, ಆಟೋ ಚಾಲಕರು, ಸಾರ್ವಜನಿಕರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















