ಬೆಂಗಳೂರು: ಖ್ಯಾತ ನಟ ಸಿಹಿಕಹಿ ಚಂದ್ರು ಹಾಗೂ ಗೀತಾ ಅವರ ಪುತ್ರಿ ಹಿತಾ ಚಂದ್ರಶೇಖರ್ ಮೇ 1ರ ಇಂದು ತಮ್ಮ ಗೆಳೆಯ, ಹಾಗೆ ಸುಮ್ಮನೆ ಖ್ಯಾತಿಯ ನಟ ಕಿರಣ್ ಶ್ರೀನಿವಾಸ್ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿ ಬಂದಿದೆ.

ಹಲವು ದಿನಗಳ ಹಿಂದೆಯೇ ಈ ಜೋಡಿ ಹಸೆಮಣೆ ಏರುವ ಸುದ್ದಿ ಮಾಧ್ಯಮಗಳಲ್ಲಿ ಬಂದಿದ್ದು ಇಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಟ ಕಿರಣ್ ಹಾಗೂ ಹಿತಾ ಕಳೆದ ಕೆಲ ವರ್ಷಗಳಿಂದ ಪರಸ್ಪರ ಇಷ್ಟಪಟ್ಟಿದ್ದರು. ಕಿರಣ್ 2008ರಲ್ಲಿ ಹಾಗೆ ಸುಮ್ಮನೆ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದು ಹಲವು ಸಿನಿಮಾ, ಕಿರುತೆರೆ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ.

ಹಿತಾ ಚಂದ್ರಶೇಖರ್ ಸಹ ಬಹಳಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಇತ್ತೀಚೆಗೆ ಬಿಡುಗಡೆಯಾದ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿಯಲ್ಲಿ ಸಹ ಹಿತಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇಂದು ಈ ತಾರಾ ಜೋಡಿ ಕುಟಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವಿವಾಹದ ದಿನಾಂಕ ಇನ್ನೂ ತಿಳಿದುಬಂದಿಲ್ಲ.

















