ಕಲ್ಪ ಮೀಡಿಯಾ ಹೌಸ್ | ಸೊರಬ |
ಈಗಾಗಲೇ ಈ ಗಣಿಗಾರಿಕೆಯಿಂದ ನಾವು ತತ್ತರಿಸಿ ಹೋಗಿದ್ದೇವೆ. ಮನಃಶಾಂತಿಯ ಜೊತೆಗೆ ದೈಹಿಕವಾಗಿಯೂ ಬಳಲಿದ್ದೇವೆ. ಸರ್ಕಾರದ ನಿಯಮಾನುಸಾರ ಗಣಿಗಾರಿಕೆ ನಡೆಯಬೇಕೆಂದರೂ ನಡೆಯುವುದಿಲ್ಲ. ಸಾಮಾನ್ಯ ಜನರ ಅಳಲಿಗೆ ಕಿಮ್ಮತ್ತು ಇಲ್ಲ. ಹಾಗಾಗಿ ನಮಗೆ ಇಲ್ಲಿ ಗಣಿಗಾರಿಕೆಯೇ ಬೇಡ ಎಂದು ಬಸ್ತಿಕೊಪ್ಪ ಗ್ರಾಮಸ್ಥರು ಆಗ್ರಹಿಸಿದರು.
ಇಲ್ಲಿನ ಗಣಿಯೊಂದಕ್ಕೆ ತಡೆ ಒಡ್ಡಿರುವ ಹಿನ್ನೆಲೆಯಲ್ಲಿ ಪುನಃ ಸರ್ಕಾರ ಗಣಿ ನಡೆಸಲು ಅನುಮತಿ ನೀಡಿರುವುದರಿಂದ ಗಣಿಗಾರಿಕೆ ಮಾಲೀಕ ಮತ್ತು ಗ್ರಾಮಸ್ಥರ ಸಭೆ ಜರುಗಿದ್ದು, ಆ ವೇಳೆ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹಿನ್ನೆಲೆ:
ಚಂದ್ರಗುತ್ತಿ ಸಮೀಪದ ಬಸ್ತಿಕೊಪ್ಪ ಗ್ರಾಮದ ಸನಿಹ ಹಲವಾರು ವರ್ಷಗಳಿಂದ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಈಚೆಗೆ ಗಣಿಗಾರಿಕೆ ನಿಯಮ ಮೀರಿ ಕಾರ್ಯಚಟುವಟಿಕೆ ನಡೆದು ಗ್ರಾಮಸ್ಥರ ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಗಣಿಗಾರಿಕೆ ತಡೆಯಲು ಮುಂದಾಗಿತ್ತು. ಅಂತೆಯೆ ಜಿಲ್ಲಾಧಿಕಾರಿಗಳೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತೀವ್ರತೆ ಗಮನಿಸಿ ತಾತ್ಕಾಲಿಕ ಗಣಿಯನ್ನು ಸ್ಥಗಿತಗೊಳಿಸಿದ್ದರು. ತದನಂತರ ವ್ಯಾಪಕ ತನಿಖೆ ನಡೆಸಿ ಗಣಿಗಾರಿಕೆ ನಿಯಮಾನುಸಾರ ಮಾತ್ರ ನಡೆಯಬೇಕು ಇಲ್ಲದಿದ್ದರೆ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ ಎಂಬ ಎಚ್ಚರಿಕೆ, ಪುನಃ ಸರ್ಕಾರದ ನಿಯಮಾನುಸಾರ ಗಣಿ ಮುಂದುವರೆಸಲು ಅನುಮತಿ ಪತ್ರ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗಣಿ ಮಾಲಿಕರೊಂದಿಗೆ ಸಭೆ ನಡೆಸಿ ಅಂತಿಮವಾಗಿ ಷರತ್ತುಬದ್ಧ ನಿಯಮವನ್ನು ನೀಡಿ ಮುಂದುವರೆಸಲು ಅವಕಾಶ ನೀಡಿತು.
Also read: ಮನುಷ್ಯ ಉಪಕಾರದ ಕೆಲಸಗಳನ್ನು ಮಾಡುವ ಮೂಲಕ ತನ್ನ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು…
ಷರತ್ತು:
ಸರ್ಕಾರದ ಆದೇಶಕ್ಕನುಗುಣವಾಗಿ ನಾವು ಸಣ್ಣ ಪ್ರಮಾಣದಲ್ಲಿ ಗಣಿ ನಡೆಸಲು ಸಮ್ಮತಿಸುತ್ತೇವೆ. ಜನ, ಜಾನುವಾರಿಗೆ ತೊಂದರೆಯಾಗದಂತೆ ಸಧ್ಯ ಮಳೆಗಾಲ ಮುಗಿಯುವ ತನಕ ಬ್ಲಾಸ್ಟ್ ಬೇಡ, ನಂತರ 15 ದಿನಕ್ಕೊಮ್ಮೆ ಮಾತ್ರ ಅಪಾಯವಿಲ್ಲದಂತೆ ನಿಗಧಿತ ವೇಳೆಯಲ್ಲಿ ಬ್ಲಾಸ್ಟ್ ನಡೆಸಬಹುದು. ಬೆಳಿಗ್ಗೆ 7ರಿಂದ ಸಂಜೆ 6ರ ತನಕ ಮಾತ್ರ ಗಣಿ ಚಟುವಟಿಕೆ ನಡೆಸಬೇಕು. ಗಣಿಯಿಂದ ಹೊರಹಾಕುವ ನೀರು ಕೃಷಿ ಭೂಮಿಗೆ ಬರದಂತೆ ನೋಡಿಕೊಳ್ಳಬೇಕು. ಈ ಹಿಂದಿನ ಬ್ಲಾಸ್ಟ್ನಿಂದ ಒಳಗಾದ ಹಾನಿಗೆ ಪರಿಹಾರ ನೀಡಬೇಕು, ಪ್ರತಿ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು. ರಸ್ತೆ ದುರಸ್ಥಿಯಾಗಬೇಕು, ಸಾಗಣಿಕೆ 5 ವಾಹನ ಮಾತ್ರ ಬಳಸಬೇಕು. ವೇಗವಾಗಿ ಚಲಾಯಿಸುವಂತಿಲ್ಲ ಮುಂತಾದ ಷರತ್ತು ಹಾಕಿ ಗಣಿ ಚಟುವಟಿಕೆಯನ್ನು ನಡೆಸಲು ಸಮ್ಮತಿಸಿದ್ದು, ಸಣ್ಣ ಲೋಪ ಕಂಡರೂ ಶಾಶ್ವತ ಗಣಿ ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗ್ರಾಮದ ಷರತ್ತಿಗೆ ಗಣಿಗಾರಿಕೆ ಮಾಲೀಕ ಅರುಣ ಒಪ್ಪಿದ್ದು, ಜನರಿಗೆ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಈ ವೇಳೆ ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಗಣಿ ಮಾಲಿಕ ಅರುಣ, ಮುಖಂಡರಾದ ಬೋವಿ ಪರಶುರಾಮ್, ಹೊಳೆಲಿಂಗಪ್ಪ, ಸಮಸ್ತ ಗ್ರಾಮಸ್ಥರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post