ಸೊರಬ: ಐದು ವರ್ಷದ ಅವಧಿಗಾಗಿ ಸಂಸದನಾಗಿ ಆಯ್ಕೆಮಾಡಿ ಕಳುಹಿಸಿದ ಜಿಲ್ಲೆಯ ಮತದಾರರಿಗೆ ಯಡಿಯೂರಪ್ಪನವರ ನಡೆ ಪ್ರಜಾಪ್ರಭುತ್ವವನ್ನು ವ್ಯವಸ್ಥೆಯನ್ನು ಕಸದ ಬುಟ್ಟಿಗೆ ಎಸೆಯುವಂತಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಿಡಿ ಕಾರಿದರು.
ಪಟ್ಟಣದ ಬಂಗಾರಧಾಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಮಗನ ಸೋಲು ರಾಜ್ಯದಲ್ಲಿ ಹೊಸ ರಾಜಕಾರಣಕ್ಕೆ ಜಾಲನೆ ಸಿಕ್ಕಂತಾಗುತ್ತದೆ. ಜಿಲ್ಲೆಯ ಜನ ಯಡಿಯೂರಪ್ಪನವರನ್ನು ಗೆಲ್ಲಿಸಿದ್ದು ರಾಜಿನಾಮೇಯನ್ನು ನೀಡುವುದಕ್ಕಾಗಿರಲ್ಲಿಲ್ಲ. ಅವರ ಅಧಿಕಾರದ ಆಸೆಯಿಂದಾಗಿ ಪುನಃ ನಾಲ್ಕೇ ತಿಂಗಳಿಗೆ ಚುನಾವಣೆ ಎದುರಿಸುವಂತಾಗಿದೆ. ರಾಷ್ಟ್ರ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇನ್ನೂ 26 ಪ್ರಕರಣಗಳು ಅವರ ವಿರುದ್ಧ ವಿಚಾರಣಾಹಂತದಲ್ಲಿದ್ದು, ಮತ್ಯಾವಾಗ ಜೈಲಿಗೆ ಹೋಗುತ್ತಾರೂ ಕಾದು ನೋಡಬೇಕಾಗಿದೆ ಎಂದು ವ್ಯಂಗ್ಯವಾಡಿದರು.
ಇಂದು ಬಂಗಾರಪ್ಪನವರು ನಮ್ಮೊಂದಿಗಿಲ್ಲ. ಅವರೊಂದಿಗೆ ರಾಜಕಾರಣ ಮಾಡಿದ ನಾನು ಇನ್ನೂ ಉಳಿದಿದ್ದೇನೆ. ಮಧುಬಂಗಾರಪ್ಪನವರನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪನವರಿಗೆ ತಕ್ಕ ಪಾಠ ಕಲಿಸಬೇಕಾಗಿದ್ದು, ಮಧು ಗೆಲುವು ನನ್ನ ಮಗನ ಗೆಲುವಾಗಿದೆ ಎಂದ ಅವರು ತಾಲೂಕು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಪುಣ್ಯಭೂಮಿಯಾಗಿದ್ದು, ರಾಜ್ಯ ಮತ್ತು ರಾಷ್ಟ್ರನಾಯಕನನ್ನು ನೀಡಿದ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಇವೆರಡು ಪಕ್ಷಗಳಿಗೂ ಬಹುಮತ ಕೊರತೆಯಿಂದಾಗಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಐದು ವರ್ಷ ಸರ್ಕಾರ ಸುಭದ್ರವಾಗಿರಲಿದ್ದು ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಪ್ರಾಣ ಹೋದರೂ ಚಿಂತೆಯಿಲ್ಲ ಬಗರಹುಕುಂ ರೈತರಿಗೆ ರಕ್ಷಣೆ ನೀಡುತ್ತೇನೆಂದು ಭರವಸೆ ನೀಡಿದರು.
(ವರದಿ: ಮಧುರಾಮ್, ಸೊರಬ)
Discussion about this post