ಕಲ್ಪ ಮೀಡಿಯಾ ಹೌಸ್ | ಸೊರಬ |
ಇಪ್ಪತ್ತು ವರ್ಷಗಳಿಂದ ಮನೆಗೊಬ್ಬರಂತೆ ಕಾಡು ಉಳಿಸಿಕೊಂಡ ಸಮೃದ್ಧ ಅರಣ್ಯವನ್ನು ಇಪ್ಪತ್ತು ನಿಮಿಷದಲ್ಲಿ ಹೊಸಕಿ ಹಾಕಿದ್ದಾರೆ ಎಂದು ತಾಲ್ಲೂಕಿನ ಹಲಸಿನಕೊಪ್ಪ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಹಲಸಿನಕೊಪ್ಪ ಗ್ರಾಮದಲ್ಲಿ ಸನಂ4 ರಲ್ಲಿನ ಗೋಮಾಳವನ್ನು ಗ್ರಾಮಸ್ಥರೆ ಉಳಿಸಿಕೊಂಡು ಬಂದಿದ್ದು, ಈಚೆಗೆ ನೆರೆ ಸಾಗರ ತಾಲ್ಲೂಕಿನ ಕೆಲವರು ಈ ಗೋಮಾಳ ಕ್ಕೆ ಲಗ್ಗೆ ಹಾಕಿ ಬೆಲೆ ಬಾಳುವ ಮರಮುಟ್ಟುಗಳನ್ನು ನಾಶಪಡಿಸಿ ಅಡಿಕೆ ತೋಟ ಬೆಳೆಸಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಎಲ್ಲಾ ಇಲಾಖೆಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ರಾಜ್ಯ ಜೀವವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತಹೆಗಡೆ ಅಶಿಸರ ಅವರನ್ನು ಗ್ರಾಮಸ್ಥರು ಆಹ್ವಾನಿಸಿ ತಮ್ಮ ಅಳಲು, ಆತಂಕ ವ್ಯಕ್ತಪಡಿಸಿದರು.
ನಮ್ಮ ಗ್ರಾಮದ ಅರಣ್ಯವನ್ನು ಹಾಳು ಮಾಡಿದ್ದಲ್ಲದೆ ವಿನಾಕಾರಣ ನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ಮರಗಳಿಗೆ ಇಂಗು ಹಾಕಿ ನಾಶಪಡಿಸಿದ್ದಾರೆ. ಈ ಗೋಮಾಳ ಹಿಂದೆ ಅರಣ್ಯ ಇಲಾಖೆಯ ವತಿಯಿಂದ ಸಿಪಿಟಿ ಆಗಿದ್ದು ಅದನ್ನು ಮುಚ್ಚಿ ಈ ರೀತಿ ಗಿಡಮರ ನಾಶಪಡಿಸಿದ್ದು ಆಕ್ಷಮ್ಯ. ಗ್ರಾಮದ ಜಾನುವಾರುಗಳಿಗೆ, ಗ್ರಾಮಸ್ಥರಿಗೆ ಅವಶ್ಯವಿರುವ ಈ ಜಾಗದ ಕಬಳಿಕೆಯನ್ನು ನಾವು ಸಹಿಸುವುದಿಲ್ಲ. ಕೂಡಲೆ ಜಾಗ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ವಲಯಾರಣ್ಯ ಅಧಿಕಾರಿ, ಉಪತಹಶೀಲ್ದಾರ್, ಗ್ರಾಪಂ ಪಿಡಿಒ ಮುಂತಾದ ಅಧಿಕಾರಿಗಳೊಂದಿಗೆ ಮಾತನಾಡಿದ ಅಶಿಸರ ಅವರು, ಅರಣ್ಯ ನಾಶದ ಕುರಿತು ಖೇದ ವ್ಯಕ್ತಪಡಿಸಿದರು. ಈ ಅರಣ್ಯ ಕ್ಯಾಸನೂರು ಕಾಯ್ದಿಟ್ಟ ಅರಣ್ಯಕ್ಕೆ ಸೇರಿಕೊಂಡಿದೆ, ಸಮೀಪದಲ್ಲೇ ರಕ್ಷಿತ ಪಾರಂಪರಿಕ ಜೇನು ಕಾನು ಕೂಡ ಇದೆ. ಇಪ್ಪತ್ತು ದಶಕದಿಂದಲೂ ಬರಿಗೆ ಹಲಸಿನಕೊಪ್ಪ ಗ್ರಾಮಸ್ಥರು ಕಾಡು ಉಳಿಸಿಕೊಂಡಿದ್ದಾರೆ.
ಸ್ಥಳೀಯ ಗ್ರಾಪಂ ಆಡಳಿತವೂ ಸೇರಿದಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪರಿಸರ ಸಂಘಟನೆಗಳು ಕೈಜೋಡಿಸಿ ಉಳಿಸಿಕೊಳ್ಳಬೇಕು.
ಕಾನೂನಾತ್ಮಕ ವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಅಧ್ಯಕ್ಷ, ಸದಸ್ಯರು, ಗ್ರಾಮಸ್ಥರು, ವಾಲ್ಮೀಕಿ ಗ್ರಾಮೀಣಾಭಿವೃದ್ಧಿ ಸಂಘದ ರಾಜಾರಾಂ ಭಟ್, ವಿಎಫ್ಸಿಯ ಬಿಎನ್ಸಿ ರಾವ್, ಶ್ರೀನಿವಾಸ್, ವೃಕ್ಷಲಕ್ಷ ಆಂದೋಲನದ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ ಮೊದಲಾದವರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post