ಕಲ್ಪ ಮೀಡಿಯಾ ಹೌಸ್ | ಸೊರಬ |
ಸಹಸ್ರಾರು ಜೀವಜಂತುಗಳಿಗೆ, ಮನುಷ್ಯನ ಸ್ವಾಸ್ಥ್ಯ ಬದುಕಿಗೆ ಸದಾ ಆಶ್ರಯವಾಗಿ ನಿಲ್ಲುವಂತಹ ಅರಣ್ಯ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ವಕೀಲ ಎಂ.ಆರ್. ಪಾಟೀಲ್ ಕರೆ ನೀಡಿದರು.
ಪಟ್ಟಣದ ಹೊರವಲಯದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅರಣ್ಯ ಇಲಾಖೆ, ಕೆ.ವಿ.ಸುಬ್ಬಣ್ಣ ರಂಗಸಮೂಹ ಹೆಗ್ಗೋಡು ಹಾಗೂ ಸಾರ ಸಂಸ್ಥೆ ಹಮ್ಮಿಕೊಂಡಿದ್ದ ಪೊಡವಿಯ ಕೊಡವಿದರೆ ಶೀರ್ಷಿಕೆ ಯ ಕಾಡು ಸಂರಕ್ಷಣೆ ಕುರಿತ ಬೀದಿ ನಾಟಕ ಉದ್ಧೇಶಿಸಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಸತತ ನಾಲ್ಕು ತಿಂಗಳು ಕಾಲ ಸುರಿಯಬೇಕಿದ್ದ ಇಲ್ಲಿ ಕೇವಲ 14 ದಿನ ಮಾತ್ರ ಮಳೆಯಾಗಿದೆ. ತಾಲ್ಲೂಕಿನ ಅನೇಕ ಕಡೆ ಬೋರ್ವೆಲ್ ಸೇರಿದಂತೆ ಕೆರೆಕಟ್ಟೆ ಹಳ್ಳ ನದಿಗಳು ಈಗಾಗಲೇ ಬತ್ತಿಹೋಗಿವೆ. ಕುಡಿಯುವ ನೀರಿಗೆ ತತ್ತರಗೊಳ್ಳುವ ದಿನಗಳು ದೂರವಿಲ್ಲ. ಈ ಹಿನ್ನೆಲೆಯನ್ನು ಗಮನಿಸಿಯಾದರೂ ವೃಕ್ಷರಕ್ಷಣೆಗೆ ಮುಂದಾಗಬೇಕು. ಸ್ವಾರ್ಥ ಲಾಲಸೆಯಿಂದ ದೂರವಾಗಿ ನಮ್ಮ ಸ್ವಾಸ್ಥ್ಯ ಬದುಕನ್ನು ನಾವೇ ಸೃಷ್ಟಿಸಿಕೊಳ್ಳಬೇಕು ಎಂದರು.
Also read: ಸಾರ್ವಜನಿಕರನ್ನು ಅನಗತ್ಯ ಅಲೆದಾಡಿಸದೆ ತ್ವರಿತಗತಿಯಲ್ಲಿ ಸೇವೆ ನೀಡಿ
ಪಜಾಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಪರಿಸರ ಸಂರಕ್ಷಣೆ ವಿಷಯದಲ್ಲಿ ಕೇವಲ ಇಲಾಖೆ, ಸಂಘಸಂಸ್ಥೆಗಳತ್ತ ಬೆರಳು ತೋರಿಸುವುದನ್ನು ಬಿಟ್ಟು ರಕ್ಷಣೆ ಕಾರ್ಯದಲ್ಲಿ ನಮ್ಮದೂ ಆದ್ಯ ಕರ್ತವ್ಯ ಎಂದು ಭಾವಿಸಿ ಕೈ ಜೋಡಿಸಿ ಉಳಿದಿರುವ ಅರಣ್ಯ ಸಂಪತ್ತಾನಾದರೂ ರಕ್ಷಿಸಿಕೊಳ್ಳುವ ಸಂಕಲ್ಪ ಎಲ್ಲರದ್ದಾಗಬೇಕು ಎಂದರು.
ಹೆಗ್ಗೋಡು ರಂಗಸಮೂಹ ಪರಿಣಾಮಕಾರಿ ಪರಿಸರ ಸಂರಕ್ಷಣೆಯ ಪ್ರಹಸನ ವನ್ನು ಕಟ್ಟಿಕೊಂಡು ಬೀದಿ ನಾಟಕಗಳ ಮೂಲಕ ರಕ್ಷಣಾ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಮಾರುತಿ ಮಾತನಾಡಿ, ಅರಣ್ಯ ರಕ್ಷಣೆಯ ಜೊತೆಗೆ ಶಾಲಾ ಪರಿಸರ ರಕ್ಷಣೆಯ ಹೊಣೆ ಶಿಕ್ಷಕ, ವಿದ್ಯಾರ್ಥಿಗಳದ್ದು, ಈ ನಿಟ್ಟಿನಲ್ಲಿ ಮಕ್ಕಳ ಜೊತೆಗೂಡಿ ಶಾಲಾ ಆವರಣದಲ್ಲಿ ವ್ಯವಸ್ಥಿತ ಅರಣ್ಯವನ್ನು ಬೆಳೆಸಿ ಸಂರಕ್ಷಿಸಲಾಗುತ್ತಿದೆ ಎಂದರು.
ರಂಗಸಮೂಹ ದ ತಂಡದಲ್ಲಿ ಶ್ರೀಪಾದ ಭಾಗವತ್, ಪ್ರಸನ್ನ ಹುಣಸೆಕೊಪ್ಪ, ಕೃಷ್ಣಕುಮಾರ್ ಖಂಡಿಕ, ಗಣಪತಿ ಹೆಗಡೆ ನಂದಿತಳೆ, ಶ್ರೀಧರ ಭಾಗವತ, ಕುಮಾರ್ ಸಾರ ಇದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು, ಶಾಲಾ ಸಹಶಿಕ್ಷಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post