ಕಲ್ಪ ಮೀಡಿಯಾ ಹೌಸ್
ಸೊರಬ: ಪಟ್ಟಣದ ಹೊರವಲಯದಲ್ಲಿರುವ ಹಳೇಸೊರಬ ಕಾನು ಅರಣ್ಯ ಪ್ರದೇಶದಲ್ಲಿ, ಅಮೂಲ್ಯವಾದ ಹಲವಾರು ಬೃಹತ್ ಮರಗಳನ್ನು ಇತ್ತೀಚೆಗೆ ಅಕ್ರಮವಾಗಿ ದುಷ್ಕರ್ಮಿಗಳು ಕಡಿದಿರುವ ಘಟನೆಯನ್ನು, ತೀವ್ರವಾಗಿ ಖಂಡಿಸಿರುವ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರು, ಈ ಕುರಿತು ಎಲ್ಲ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಗೆ ಆದೇಶಿಸಿದ್ದಾರೆ.
ಈಗಾಗಲೇ ಸ್ಥಳೀಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂಧಿಗಳು, ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ, ಕಡಿದ ಮರಗಳನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಮಾಡುತ್ತಿರುವದಕ್ಕೆ ಅವರು ಶ್ಲಾಘಿಸಿದ್ದು, ಈ ಬಗೆಯ ಭಾರಿ ಪ್ರಮಾಣದ ಮರಗಳ್ಳತನ ತಡೆಯಲು ಅರಣ್ಯ ಇಲಾಖೆಗೆ ಬೆಂಬಲ ನೀಡಬೇಕೆಂದು ಅವರು ಸಾರ್ವಜನಿಕರನ್ನು ವಿನಂತಿಸಿದ್ದಾರೆ.
ಹಳೇಸೊರಬ ಗ್ರಾಮದ ಸರ್ವೆ ನಂ.245ರಲ್ಲಿ ಸುಮಾರು 540ಎಕರೆಗೂ ಮಿಕ್ಕಿ ವಿಸ್ತಾರದ ಈ ಕಾನುಅರಣ್ಯವಿದೆ. ಈ ನಿತ್ಯಹರಿದ್ವರ್ಣ ಕಾಡಿನಲ್ಲಿ 250-300 ವರ್ಷಗಳಿಗೂ ಹೆಚ್ಚಿನ ಆಯುಷ್ಯದ ಭಾರಿ ಗಾತ್ರದ ಬಹಳಷ್ಟು ಹಳೆಯ ಮರಗಳಿವೆ. ದೇವದಾರು, ಹಲಸು, ಬರಣಿ, ನೇರಳೆ, ಹೊನ್ನೆ, ಬೀಟೆ ಇತ್ಯಾದಿ ಹಲವು ಬಗೆಯ ಅಮೂಲ್ಯವಾದ ಹಾಗೂ ವಿನಾಶದಂಚಿನ ಪ್ರಬೇಧಗಳ ಬಲಿತಮರಗಳಿವೆ. ಅಂಥವನ್ನೇ ಈಗ ಕಡಿದಿರುವದು ಖೇದಕರ ಎಂದು ಅವರು ತಿಳಿಸಿದ್ದಾರೆ.
ಅಪಾರ ಜೀವವೈವಿಧ್ಯವಿರುವ ಮಲೆನಾಡಿನ ಈ ಪ್ರಾತಿನಿಧಿಕ ಕಾನುಅರಣ್ಯವನ್ನು ಈವರೆಗೂ ಸಂರಕ್ಷಿಸಿಕೊಂಡು ಬಂದಿರುವ ಈ ಭಾಗದ ಗ್ರಾಮಸ್ಥರ ಕಾಳಜಿ ಶ್ಲಾಘನಾರ್ಹ. ಇವನ್ನೆಲ್ಲ ಮನಗಂಡೇ ರಾಜ್ಯ ಸರ್ಕಾರದ ಪಶ್ಚಿಮಘಟ್ಟ ಕಾರ್ಯಪಡೆಯು ಇದನ್ನು “ಜೀವವೈವಿಧ್ಯ ತಾಣ”ವನ್ನಾಗಿ ಘೋಷಿಸಲು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ 2011ರಲ್ಲೇ ಶಿಫಾರಸ್ಸು ಮಾಡಿತ್ತು. ಈ ಜಾಗೃತಿಯ ಫಲವಾಗಿ ಅರಣ್ಯ ಇಲಾಖೆಯು, ಗ್ರಾಮಸ್ಥರು, ರೈತರು, ಜನಪ್ರತಿನಿಧಿಗಳು, ಸ್ವಯಂಸೇವಾಸಂಸ್ಥೆಗಳು- ಹೀಗೆ ಎಲ್ಲ ಸ್ಥಳೀಯರ ಸಹಕಾರದೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಈ ದೇವರಕಾಡನ್ನು ಸಂರಕ್ಷಿಸುತ್ತ ಬಂದಿದೆ. ಇಲಾಖೆಯು ಸುತ್ತಲೂ ಕಂದಕ ರಚಿಸಿ, ಸಂಪೂರ್ಣ ರಕ್ಷಣೆಯನ್ನೂ ಒದಗಿಸಿದೆ. ಆದರೂ, ಕೆಲವೇ ಕೆಲವು ದುಷ್ಕರ್ಮಿಗಳು ಸರ್ಕಾರ ಹಾಗೂ ಸಮೂದಾಯದ ಈ ಎಲ್ಲ ಸಂರಕ್ಷಣೆಯ ಪ್ರಯತ್ನಗಳನ್ನು ಧಿಕ್ಕರಿಸಿ ಇಲ್ಲಿ ಮರಗಳನ್ನು ಕಡಿದಿರುವದು ಖಂಡನಾರ್ಹ. ಇದು “ಅರಣ್ಯ ಸಂರಕ್ಷಣೆ ಕಾನೂನು”, “ಜೀವವೈವಿಧ್ಯ ಸಂರಕ್ಷಣೆ ಕಾನೂನು” ಹಾಗೂ “ವನ್ಯಜೀವಿ ರಕ್ಷಣೆ ಕಾನೂನು”ಗಳ ಹಲವು ಅಂಶಗಳ ಭಾರಿ ಉಲ್ಲಂಘನೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಪಾರ ಜೀವಸಂಪತ್ತಿನ ಭಂಡಾರವಾಗಿರುವ ಹಾಗೂ ಐತಿಹಾಸಿಕ ಮಹತ್ವವಿರುವ ಈ ಹಳೇಸೊರಬ ಕಾನನ್ನು, ಹಳೇಸೊರಬ ಗ್ರಾಮ ಪಂಚಾಯಿತಿಯ ಜೀವವೈವಿಧ್ಯ ನಿರ್ವಹಣಾ ಸಮಿತಿಯು, ಜೀವವೈವಿಧ್ಯ ತಾಣ ಎಂದು ಗುರುತಿಸಿ, ಕಳೆದ ದಿ. 24 ಜುಲೈ 2020ರಂದು ಅದನ್ನು ಅಧಿಕೃತವಾಗಿ ಘೋಷಿಸಿದೆ. ಇದಕ್ಕೆ ಹೆಚ್ಚಿನ ಮನ್ನಣೆ ನೀಡಲು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದು, ಆ ಕುರಿತಂತೆ ಚಿಂತನೆ ಕೂಡ ಸಾಗಿದೆ. ಇನ್ನು ಮುಂದಾದರೂ ಈ ಬಗೆಯ ದುಷ್ಕೄತ್ಯ ನಡೆಯದಂತೆ ನಿಗಾವಹಿಸಬೇಕೆಂದು, ಅವರು ಜಿಲ್ಲಾಡಳಿತಕ್ಕೂ ಸೂಚಿಸಿದ್ದಾರೆ.
ಕೊರೋನಾ ಲಾಕ್ಡೌನ್ ಅವಧಿಯನ್ನು ದುಷ್ಕರ್ಮಿಗಳು ಈ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುವದನ್ನು ತಡೆಯಬೇಕಿದೆ. ಹೋದವರ್ಷದ ಲಾಕ್ಡೌನ್ ಅವಧಿಯಲ್ಲೂ ಈ ಬಗೆಯಲ್ಲಿ ಮರಗಳ್ಳತನ ಹಾಗೂ ಕಾಡಿನ ಹೊಸ ಅತಿಕ್ರಮಣದ ಘಟನೆಗಳು ನಡೆದಿರುವದು ಇಲ್ಲಿ ಉಲ್ಲೇಖನಾರ್ಹ. ಆದ್ದರಿಂದ, ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗದ ತಾಲ್ಲೂಕುಗಳ ಅರಣ್ಯಗಳ ರಕ್ಷಣೆಗೆ ವಿಶೇಷ ಆದ್ಯತೆಯನ್ನು ಅರಣ್ಯ ಇಲಾಖೆ ನೀಡಬೇಕಿದೆ ಹಾಗೂ ಇದಕ್ಕೆ ಜಿಲ್ಲಾಡಳಿತ ಸಂಪೂರ್ನ ಸಹಕಾರ ನೀಡಬೇಕಿದೆ ಎಂದು ಅವರು ತಿಳಿಸಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post