ಕಲ್ಪ ಮೀಡಿಯಾ ಹೌಸ್
ಸೊರಬ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತನ್ನು ನೀಡುತ್ತಿದ್ದು, ರೈತ ಸಂಪರ್ಕ ರಸ್ತೆಗಳ ನಿರ್ಮಾಣದ ಸಂದರ್ಭದಲ್ಲಿ ರೈತರ ಸಹಕಾರ ಅತ್ಯಗತ್ಯ ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ತಾಲೂಕಿನ ಶಿಗ್ಗಾ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ ಚಾಲನೆ ಹಾಗೂ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಆಧುನಿಕ ತಂತ್ರಜ್ಞಾನಗಳನ್ನು ರೈತರು ಬಳಕೆ ಮಾಡುತ್ತಿದ್ದಾರೆ. ಕೃಷಿ ಯಂತ್ರಗಳು ಜಮೀನುಗಳಿಗೆ ಸಾಗಿಸಲು ರಸ್ತೆ ಅವಶ್ಯಕ. ಈ ನಿಟ್ಟಿನಲ್ಲಿ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ರೈತರು ಸಹಕಾರ ನೀಡಬೇಕು ಎಂದರು.
ತಾಲೂಕಿನಲ್ಲಿಯೇ ಶಿಗ್ಗಾ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. 100 ಕೋಟಿ ರೂ., ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳುವ ಗುರಿ ಹೊಂದಲಾಗಿದ್ದು, ಈಗಾಗಲೇ ಸುಮಾರು 93 ಕೋಟಿ ರೂ., ವೆಚ್ಚದ ಕಾಮಗಾರಿಗಳು ಜರುಗಿದೆ. ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದ ಅವರು, ತಾಲೂಕಿನ ದಂಡಾವತಿ ನೀರಾವರಿ ಯೋಜನೆಯನ್ನು ಯಾವುದೇ ರೈತರಿಗೆ ತೊಂದರೆಯಾಗದಂತೆ 37 ಬ್ಯಾರೇಜ್ ಗಳನ್ನು ನಿರ್ಮಿಸಿ, ಬಲ ಮತ್ತು ಎಡ ನಾಲೆಗಳ ಮೂಲಕ ರೈತರ ಜಮೀನುಗಳಿಗೆ ನೀರು ಪೂರೈಸಲಾಗುವುದು. ಶೀಘ್ರದಲ್ಲಿ ಕೆರೆಹಳ್ಳಿ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಮಾವಲಿ ಮತ್ತು ಉಳವಿಯ ವಿದ್ಯುತ್ ಗ್ರಿಡ್ ಕಾಮಗಾರಿಗಳು ಪ್ರಗತಿಯಲ್ಲಿದೆ. ಇಂಡುವಳ್ಳಿ ಶಿಗ್ಗಾ ಭಾಗದಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಇಂಡುವಳ್ಳಿ ವಿದ್ಯುತ್ ಗ್ರಿಡ್ ನಿರ್ಮಿಸಲು ಜಾಗ ಗುರುತಿಸುವಂತೆ ತಿಳಿಸಿದ ಅವರು, ರಾಜ್ಯದಲ್ಲಿ ಕೊರೋನಾ ಇಳಿಮುಖವಾಗಿದ್ದರೂ ಸಹ ಜನತೆ ಎಚ್ಚರ ತಪ್ಪಬಾರದು. ಗಣೇಶೋತ್ಸವ ಮತ್ತು ಸಾಲು ಸಾಲು ಹಬ್ಬಗಳು ಬರುತ್ತಿದ್ದು ಜಾಗೃತಿ ವಹಿಸಬೇಕು. ಕೊರೋನಾ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದರು.
ಸೊರಬ ಪಟ್ಟಣದ ಸರ್ವೆ ನಂ.113 ರಲ್ಲಿ ಬಡವರ ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ತಪ್ಪು ಸಂದೇಶವನ್ನು ಹರಿಬಿಡುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಲಾಗುತ್ತಿದೆ. ಆದರೆ. ಬಡವರಿಗೆ ತಲುಪುವ ಯೋಜನೆಗಳು ಮತ್ತು ಸೌಲಭ್ಯಗಳು ಉಳ್ಳವರ ಪಾಲಾಗುತ್ತಿರುವುದು ತಡೆಗಟ್ಟುವುದು ಜನಪ್ರತಿನಿಧಿಯ ಜವಾಬ್ದಾರಿಯಾಗಿದೆ. ಮತದಾರರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಕರ್ತವ್ಯ ಜನಪ್ರತಿನಿಧಿಯ ಮೇಲಿರುತ್ತದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಾಗುತ್ತಿದ್ದು, ನಕಲಿ ಹಕ್ಕುಪತ್ರಗಳನ್ನು ಜನರಿಗೆ ಯಾಮಾರಿಸುವ ಕೆಲಸವೂ ಕ್ಷೇತ್ರದಲ್ಲಿ ಜರುಗಿ ಹೋಗಿದೆ. ಇದೇ ಕಾರಣಕ್ಕೆ ತಹಶೀಲ್ದಾರ್ ಒಬ್ಬರು ಅಮಾನತುಗೊಂಡಿರುವುದೇ ಸಾಕ್ಷಿ ಎಂದರು.
ಶಿಗ್ಗಾ ಗ್ರಾಪಂ ಅಧ್ಯಕ್ಷ ಪ್ರಭು, ಉಪಾಧ್ಯಕ್ಷೆ ಪ್ರೇಮಾ, ಎಪಿಎಂಸಿ ಅಧ್ಯಕ್ಷ ದಯಾನಂದ ಗೌಡ, ಸದಸ್ಯ ನಾರಾಯಣ, ಬಗರ್ ಹುಕುಂ ಸಮಿತಿ ಸದಸ್ಯ ದೇವೇಂದ್ರಪ್ಪ, ಕೆಡಿಪಿ ಸದಸ್ಯ ಕಿರಣ್, ಪ್ರಮುಖರಾದ ಭೋಗೇಶ್ ಶಿಗ್ಗಾ, ಕೊಟ್ರೇಶ್ ಗೌಡ, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಶಿವಕುಮಾರ್ ಕಡಸೂರು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಗಳು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post