ಕಲ್ಪ ಮೀಡಿಯಾ ಹೌಸ್
ಸೊರಬ: ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಮುಚ್ಚಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ದಿನಸಿ ವಸ್ತುಗಳ ಕಿಟ್ ವಿತರಿಸಲಾಗುತ್ತಿದೆ ಎಂದು ಯುವಾ ಬ್ರಿಗೇಡ್ ತಾಲ್ಲೂಕು ಸಂಚಾಲಕ ಮಹೇಶ್ ಖಾರ್ವಿ ಹೇಳಿದರು.
ಪಟ್ಟಣದ ಚಾಮರಾಜ ಪೇಟೆ ಬಡಾವಣೆಯಲ್ಲಿ ಯುವಾ ಬ್ರಿಗೇಡ್ ವತಿಯಿಂದ ಗುರು ಗೌರವ ಕಾರ್ಯಕ್ರಮದ ಅಡಿಯಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಸುಮಾರು 22 ಸಾವಿರ ಖಾಸಗಿ ಶಾಲಾ ಶಿಕ್ಷಕರಿಗೆ ದಿನಸಿ ವಸ್ತುಗಳ ಕಿಟ್ ವಿತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾವಾರು ಹಾಗೂ ತಾಲ್ಲೂಕು ವಾರು ಗುರುಗೌರವ ಕಾರ್ಯಕ್ರಮದ ಅಡಿಯಲ್ಲಿ ಕಿಟ್ ವಿತರಿಸಲಾಗುತ್ತಿದ್ದು, ಪಟ್ಟಣ ಹಾಗೂ ಕುಪ್ಪಗಡ್ಡೆ, ನಿಸರಾಣಿ, ಹಳೇಸೊರಬ, ಚಿಕ್ಕಶಕುನ, ಆನವಟ್ಟಿ, ಬಾರಂಗಿ, ಹಾಲಗಳಲೆ, ಗುಡುವಿ ಸೇರಿದಂತೆ ತಾಲ್ಲೂಕಿನಾದ್ಯಂತ ಸುಮಾರು 171 ಜನ ಶಿಕ್ಷಕರಿಗೆ ಕಿಟ್ ವಿತರಿಸಲಾಗುತ್ತಿದೆ. ಒಟ್ಟು 150 ಕಿಟ್ ಬಂದಿದ್ದು, 15 ಶಾಲೆಗಳ ಶಿಕ್ಷಕರಿಗೆ 120 ಕಿಟ್ ಹಂಚಿಕೆ ಮಾಡಲಾಗಿದೆ. 30 ಕಿಟ್ ವಿತರಣೆಗೆ ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಖಾಸಗಿ ಶಾಲೆಗಳು ಮುಚ್ಚಿದ ಪರಿಣಾಮ ಬೋಧನೆಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದ ಅನೇಕ ಖಾಸಗಿ ಶಾಲಾ ಶಿಕ್ಷಕರು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದ ಅವರು, ಕೊರೋನಾ ತಂದ ಸಂಕಷ್ಟಕ್ಕೆ ಜನತೆ ಆತಂಕಕ್ಕೆ ಒಳಗಾಗದೇ ಸಮಸ್ಯೆಯನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಹಾಗೂ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಆರೋಗ್ಯದ ಕಡೆಗೆ ಗಮನ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ನ ನಿಕಟಪೂರ್ವ ಸಂಚಾಲಕ ವಿಷ್ಣು ಮೆಸ್ತಾ, ರಂಗನಾಥ ಮೊಗವೀರ, ಮಂಜು, ಇಂಧೂದರ, ಮಧುಕೇಶ್ವರ, ವಿನೋದ್ ವಾಲ್ಮೀಕಿ, ಅನಿಲ್ ಮಾಳವಾದೆ, ರಾಘವೇಂದ್ರ, ಆದಿತ್ಯ, ದೀಪಕ್ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















