ಕಲ್ಪ ಮೀಡಿಯಾ ಹೌಸ್ | ಸೊರಬ | ಶ್ರೀಪಾದ ಬಿಚ್ಚುಗತ್ತಿ, ಯಲಸಿ, ಇತಿಹಾಸ ಸಂಶೋಧಕ |
ತಾಲ್ಲುಕು ಕಾನಹಳ್ಳಿಯಲ್ಲಿ ಕ್ರಿ.ಶ. 1207ರ ಅವಧಿಯ ವೀರಗಲ್ಲನ್ನು ಇತಿಹಾಸ ಅಧ್ಯಯನಕಾರ ಉಳವಿಯ ಅವಿನಾಶ್ ಚಕ್ರಸಾಲಿಯವರು ಪತ್ತೆ ಮಾಡಿದ್ದಾರೆ.
ವೀರಗಲ್ಲು 9 ಅಡಿ ಉದ್ದ , ಪ3 ಅಡಿ ಅಗಲವಿದ್ದು ಮೂರು ಹಂತಗಳಲ್ಲಿ ಖಂಡರಿಸಲಾಗಿದೆ. ಕೆಳಗಿನ ಹಂತದಲ್ಲಿ ವೀರನು ಬಿಲ್ಲು, ಬಾಣ ಆಯುಧಗಳನ್ನು ಹಿಡಿದು ವೈರಿಯೊಂದಿಗೆ ಹೋರಾಡುತ್ತಿರುವ ಚಿತ್ರಣವಿದ್ದು, ಮಧ್ಯದಲ್ಲಿ ಕಾಳಗದಲ್ಲಿ ವೀರಮರಣ ಹೊಂದಿದ ವೀರನನ್ನು ಸುರಾಂಗನೆಯರು ದೇವಲೋಕಕ್ಕೆ ಕೊಂಡೊಯ್ಯುವ ಚಿತ್ರಣವಿದೆ. ಮೇಲಿನ ಹಂತದಲ್ಲಿ ದೇವಲೋಕದ ಸಂಕೇತವಾಗಿ ಶಿವಲಿಂಗ, ನಂದಿ ಹಾಗೂ ಪದ್ಮಾಸನದಲ್ಲಿ ಕೈಮುಗಿದು ಪ್ರಾರ್ಥಿಸುತ್ತಿರುವ ವೀರನನ್ನು ಖಂಡರಿಸಲಾಗಿದೆ.
ಇದರಲ್ಲಿ 14 ಸಾಲಿನ ಶಾಸನ ಪಾಠವನ್ನು ಎರಡು ಪಟ್ಟಿಕೆಗಳಲ್ಲಿ ಬರೆಯಲಾಗಿದೆ. ಚಾಳುಕ್ಯ ಅರಸನಾದ ಜಗದೇಕಮಲ್ಲನ ಆಡಳಿತವನ್ನು ಉಲ್ಲೇಖಿಸಿದ್ದು ಅದರಲ್ಲಿ ಜಗದೇಕಮಲ್ಲನನ್ನು ಶಾಸನವು ಪ್ರಥವಿ ವಲ್ಲಭಮಹಾ ರಾಜಾಧಿರಾಜ ಪರಮೇಶ್ವರಂ ಪರಮ ಭಟಾರಕ ಸತ್ಯಾಶ್ರಯ ಕುಳತಿಳಕ ಚಾಳುಕ್ಯಾಭರಣ ಎಂಬ ಬಿರುದುಗಳನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಬನವಾಸಿ ಹನ್ನೆರೆಡು ಸಾವಿರ ರಾಜ್ಯವನ್ನು ಹಾನಗಲ್ಲಿನ ಕದಂಬ ಚಕ್ರೇಶ್ವರ ಕೀರ್ತಿ ದೇವನ ಕುಮಾರ ಹೆಮ್ಮಾಡಿದೇವನು ಆಳುತ್ತಿರುತ್ತಾನೆ. ಈ ಅವಧಿಯಲ್ಲಿ ಬನವಾಸಿ ನಾಡಿನ ಮನ್ನೇಯ ಮಾಂಡಳೀಕನ ಅನುಮತಿ ಪಡೆದು ಕಾನಹಳ್ಳಿಯ ಹಡವಳ ಕನ್ನಯ್ಯನು ಒಂದು ಕಾಳಗದಲ್ಲಿ ತಾನೇ ನೇರವಾಗಿ ಹೋರಾಟಕ್ಕೆ ದುಮುಕುತ್ತಾನೆ. ಹೋರಾಟದಲ್ಲಿ ವಿರೋಧಿಗಳ ಕುದುರೆಗಳನ್ನು ಹಲವು ಸೈನಿಕರನ್ನು ಕೊಂದು ವೀರಭಟನಾಗಿ ಸ್ವರ್ಗ ಪಡೆಯುತ್ತಾನೆ. ಶಾಸನದ 10ನೇ ಸಾಲಿನ ಹಲವು ಅಕ್ಷರಗಳು ಅಳಿಸಿಹೋಗಿರುವುದರಿಂದ ಕನ್ನಯ್ಯನು ಯಾರೊಂದಿಗೆ ಕಾಳಗ ಮಾಡಿದ ಎಂಬ ಮಾಹಿತಿ ದೊರೆಯುತ್ತಿಲ್ಲ.
ಆತನ ಕುಟುಂಬಕ್ಕೆ ಹೆಮ್ಮಾಡಿದೇವನು ಕಾನಹಳ್ಳಿಯ ನಾಯಕ ವೃತ್ತಿಯನ್ನು ಮರು ನೀಡುತ್ತಾನೆ. ಈ ವೀರಗಲ್ಲನ್ನು ಬೀರಯ್ಯ ಎಂಬವವನು ರಚಿಸಿದ್ದಾನೆ.
ಸೊರಬ ತಾಲ್ಲೂಕಿನಲ್ಲಿ ಹೆಮ್ಮಾಡಿದೇವನ ಉಲ್ಲೇಖ ಇದೇ ಮೊದಲನೆಯದ್ದಾಗಿದೆ. ಕನ್ನಯ್ಯ ಎಂಬ ಕಾನಹಳ್ಳಿಯ ನಾಯಕನು ನೇರವಾಗಿ ಕಾಳಗಕ್ಕೆ ಇಳಿದಿದ್ದು ಇದು ಅಂದಿನ ವೀರತ್ವದ ಸಂಕೇತವಾಗಿದೆ. ಕಾನಹಳ್ಳಿ ಆ ವೇಳೆಗಾಗಲೇ ಅವರಿಬ್ಬರ ಆಡಳಿತಗಾರರನ್ನು ಹೊಂದಿತ್ತು ಎಂಬುದು ಈ ಶಾಸನದಿಂದ ತಿಳಿದು ಬರುತ್ತದೆ.
ಈ ವೀರಗಲ್ಲು ದೊರೆತ ಸ್ಥಳದಿಂದ 800 ಮೀ ದೂರದಲ್ಲಿ ಐದನೇ ಶತಮಾನಕ್ಕೆ ಸೇರಿದ ಸಿಂಹಶಿಲ್ಪ ಪತ್ತೆಯಾಗಿದೆ. ಇದು 65 ಸೆಂ ಮೀ ಉದ್ದ 12 ಸೆಂ ಮೀ ಎತ್ತರವಿದ್ದು ಮುಂಭಾಗದ ಒಂದು ಭಾಗ ಒಡೆದು ಹೋಗಿದೆ. ಇದನ್ನು ಕದಂಬರ ಆಡಳಿತ ನೆಲೆಯ ಸಂಕೇತ ಎಂತಲೂ ಪ್ರಾಚೀನ ನರಸಿಂಹ ಆರಾಧನೆ ಎಂದೂ ಗುರುತಿಸಲಾಗಿದೆ.
ಇದೇ ಪರಿಸರದಲ್ಲಿ ಕೋಟೆಗಳ ಸುತ್ತ ಕಾಣಗುವ ಬೃಹತ್ ಸುತ್ತಳತೆ ಇರುವ ಅಗಳ(ಕಾಲುವೆ) ಪತ್ತೆಯಾಗಿದ್ದು ಆ ಪ್ರದೇಶದಲ್ಲಿ ಹಿಂದೆ ರಾಷ್ಟ್ರಕೂಟರ ಅವಧಿಯ ಕೋಣನ ತಲೆ ಶಿಲ್ಪ ಹಾಗೂ 13ನೇ ಶತಮಾನದ ಹೊಸಗುಂದದ ಸಾಂತರಸರ ಉಲ್ಲೇಕವಿರುವ ವೀರಗಲ್ಲು ಪತ್ತೆಯಾಗಿದ್ದು ಅಧ್ಯಯನ ಮಾಡಲಾಗಿದೆ.
ಈ ಕ್ಷೇತ್ರಕಾರ್ಯಕ್ಕೆ ಇತಿಹಾಸ ಸಂಶೋಧಕರಾದ ರಮೇಶ್ ಬಿ ಹಿರೇಜಂಬೂರು ಸ್ಥಳಕ್ಕೆ ಬೇಟಿ ನೀಡಿ ಮಾರ್ಗದರ್ಶನ ಮಾಡಿದ್ದು, ಶಾಸನ ವಿಶ್ಲೇಷಣೆ ಮಾಡಿದ್ದಾರೆ, ಪರಿಸರ ಅಧ್ಯಯನಕಾರರಾದ ಅರುಣಕುಮಾರ್ ಜಿ, ಗ್ರಾಮಸ್ಥರಾದ ನೆಮ್ಮದಿ ಸಂತೋಷ್, ಸೋಮಶೇಖರ, ಸೋಮಪ್ಪ ಹಾಗೂ ಟೋಕಪ್ಪ ಶಾಸನ ಪತ್ತೆ ಹಚ್ಚಲು ಸಹಕರಿಸಿದ್ದಾರೆ.
ಈ ಶಾಸನದಲ್ಲಿ ಹಾನಗಲ್ ಕದಂಬರ ಹೆಮ್ಮಾಡಿ ದೇವನ ಉಲ್ಲೇಖ ಗಮನಾರ್ಹವಾಗಿದೆ. ವೀರಮರಣ ಹೊಂದಿದವ ಹಡವಳ ಕನ್ನಯ್ಯ ಎಂದಿರುವುದರಿಂದ ಈ ಭಾಗದಲ್ಲಿ ಹಡವಳ ಅಥವಾ ಪಡೆವಳರ (ಸ್ವಂತ ಸೈನ್ಯ ಉಳ್ಳವರು) ಇರುವಿಕೆಯನ್ನು ಸೂಚಿಸುತ್ತದೆ. ಸೊರಬ ಚೀಲನೂರು, ಕುಪ್ಪೆ ಮುಂತಾದೆಡೆ ಪಡೆವಳರಿದ್ದ ಬಗ್ಗೆ ಶಾಸನುಲ್ಲೇಖವಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















