ಕಲ್ಪ ಮೀಡಿಯಾ ಹೌಸ್ | ಸೊರಬ |
ರೋಟರಿ ಸಂಸ್ಥೆಯು ಮಾನವೀಯ ಸೇವೆ, ಸಾಮಾಜಿಕ ಕಳಕಳಿ ಹಾಗೂ ನಾಯಕತ್ವದ ಮೂಲಕ ವಿಶ್ವದಾದ್ಯಂತ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಯುವಜನರ ಸಬಲೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರೋಟರಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ರೋಟರಿ ಜಿಲ್ಲೆ ೩೧೮೨ನ ಜಿಲ್ಲಾ ಗೌವರ್ನರ್ ಮುಖ್ಯ ಬಿ.ಎಂ. ಭಟ್ ನುಡಿದರು.
ಗುರುವಾರ ಸಂಜೆ ಸೊರಬ ಪಟ್ಟಣದ ಗಿರಿಜಾ ಶಂಕರ ಸಭಾ ಭವನದಲಿ ನಡೆದ ೨೦೨೫-೨೬ನೇ ಸಾಲಿನ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಭೋಧಿಸಿ ಮಾತನಾಡಿದರು.
ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಮನೋಭಾವವೇ ರೋಟರಿಯ ನಿಜವಾದ ಶಕ್ತಿಯಾಗಿದೆ ಎಂದರು.
ಸಂಸ್ಥಾಪಕ ಅಧ್ಯಕ್ಷ ಡಾ. ಜ್ಞಾನೇಶ್ ಹೆಚ್.ಇ. ಮಾತನಾಡಿ, ಸದಸ್ಯರ ಸಹಕಾರದಿಂದ ಕಳೆದ ಹತ್ತು ವರ್ಷಗಳಿಂದ ಕ್ಲಬ್ ನಿರಂತರವಾಗಿ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಅಗತ್ಯ ಸೌಲಭ್ಯಗಳ ವಿತರಣೆ, ವೃಕ್ಷಾರೋಪಣ, ಮಹಿಳಾ ಸಬಲೀಕರಣ ಹಾಗೂ ಯುವಜನರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಕ್ಲಬ್ ಸದಸ್ಯತ್ವ ವಿಸ್ತರಣೆಯೊಂದಿಗೆ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳಲಾಗಿದೆ. ಕೋವಿಡ್-೧೯ ಸಂಕಷ್ಟದ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳಿಗೆ ಆಹಾರ, ಔಷಧ ಹಾಗೂ ಅಗತ್ಯ ನೆರವು ಒದಗಿಸಲಾಗಿದೆ. ಶಕ್ತಿಹೀನರು, ದೀನದಲಿತರು ಹಾಗೂ ವೃದ್ಧರ ನೆರವಿಗೆ ಧಾವಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ಸಮಾಜದೊಂದಿಗೆ ರೋಟರಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
Also read: Sudhamurthy | ಪುಣ್ಯಕೋಟಿ ಶತಕರುಣಿ ದೃಶ್ಯಕಾವ್ಯ ಲೋಕಾರ್ಪಣೆ
ನಿರ್ಗಮಿತ ಅಧ್ಯಕ್ಷ ಮಹಾಂತೇಶ್ ಅವರು ಕಳೆದ ಸಾಲಿನಲ್ಲಿ ಹಮ್ಮಿಕೊಂಡ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆ, ಶಿಕ್ಷಣ ಪ್ರೋತ್ಸಾಹ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ವಿವರ ನೀಡಿದರು. ಈ ಎಲ್ಲ ಕಾರ್ಯಗಳಿಗೆ ಸಹಕರಿಸಿದ ಸದಸ್ಯರು, ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ನೂತನ ಅಧ್ಯಕ್ಷ ಮಾಲತೇಶ್ ಹೆಚ್.ಇ. ಮಾತನಾಡಿ, “ನಾವೆಲ್ಲರೂ ರೈತರ ಕುಟುಂಬಗಳಿಂದ ಬಂದವರು. ರೋಟರಿ ಕ್ಲಬ್ನ ೧೧ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಹೆಮ್ಮೆಯ ಸಂಗತಿ. ಆರಂಭದಿಂದಲೂ ಸಮಾಜಸೇವೆಯನ್ನು ಧ್ಯೇಯವಾಗಿಸಿಕೊಂಡು ಕಾರ್ಯನಿರ್ವಹಿಸಿರುವ ಕ್ಲಬ್ನ ಸೇವಾ ಪರಂಪರೆಯನ್ನು ಸದಸ್ಯರ ಸಹಕಾರದೊಂದಿಗೆ ಇನ್ನಷ್ಟು ಬಲಪಡಿಸಲಾಗುವುದು. ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಯುವಜನರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು” ಎಂದರು.
2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಾಲತೇಶ್ ಹೆಚ್.ಇ. ಹಾಗೂ ಕಾರ್ಯದರ್ಶಿಯಾಗಿ ಪ್ರಕಾಶ್ ಬೇಳವಗೋಡು ಪದಗ್ರಹಣ ಸ್ವೀಕರಿಸಿದರು.
ಸಾಧಕರಾದ ಎಚ್.ಗುರುಮೂರ್ತಿ, ಹಿರಿಯ ವಾಹನ ಚಾಲಕ ಎಸ್.ರಾಮಪ್ಪ, ವಿಶ್ವನಾಥ ಹೆಚ್ಚೆ, ಡಾ|| ಅಜಿತ್ ಹರೀಶಿ, ಜಗನ್ನಾಥ ವಿ., ಚನ್ನಬಸಪ್ಪ ತೊರವಂದ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಗೌವರ್ನರ್ ನಾಗರಾಜ ಎಸ್., ವಲಯ ಸೇನಾನಿ ಕೃಷ್ಣಪ್ಪ ಓಟೂರು ರೋಟರಿ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







