ಕಲ್ಪ ಮೀಡಿಯಾ ಹೌಸ್ | ಸೊರಬ |
ಬಾಲ್ಯದಲ್ಲಿ ಮಕ್ಕಳು ಪೋಷಕರನ್ನು ಅನುಸರಿಸುತ್ತವೆ. ಈ ನಿಟ್ಟಿನಲ್ಲಿ ಪೋಷಕರಾದವರು ಮೊಬೈಲ್ ಗೀಳಿಗೆ ಸಿಲುಕದೇ ಪುಸ್ತಕಗಳ ಓದಿನ ಕಡೆ ಗಮನ ಹರಿಸಬೇಕು ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಚಾಮರಾಜ ಪೇಟೆಯ ಕಾನುಕೇರಿ ಮಠದ ಆವರಣದಲ್ಲಿ ಸಮರ್ಪಣ ಎಜುಕೇಷನಲ್ ಟ್ರಸ್ಟ್ ನ ಸ್ಮಾರ್ಟ್ ಕಿಡ್ಸ್ ಪ್ರೀ ಸ್ಕೂಲ್ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡುವ ಹೊಣೆ ಪೋಷಕರ ಮೇಲಿದೆ. ಮಕ್ಕಳು ಪ್ರೌಢಾವಸ್ಥೆಗೆ ಬರುವ ತನಕ ಅವರ ಮೇಲೆ ನಿಗಾ ವಹಿಸಬೇಕು. ಮಕ್ಕಳ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಪೋಷಕರು ಹೊಂದಿರುತ್ತಾರೆ. ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುವುದು ಸಲ್ಲದು. ಶಿಕ್ಷಣಕ್ಕೆ ಪೂರಕವಾದ ವಾತಾವರಣ ಲಭಿಸಿದಾಗ ಸುಶಿಕ್ಷಿತರಾಗಲು ಸಾಧ್ಯವಿದೆ. ಜೊತೆಗೆ ನಾವು ವಾಸಿಸುವ ಪರಿಸರವೂ ಸಹ ಮಕ್ಕಳ ಮೇಲೆ ಪರಿಣಾಮ ಭೀರುತ್ತದೆ ಎಂದರು.
Also read: ಮಂಡ್ಯ ಕಬ್ಬು ಬೆಳೆಗಾರರಿಗೆ ಸಚಿವ ಜಾರ್ಜ್ ಗುಡ್ ನ್ಯೂಸ್ | ಏನದು?
ಅಧ್ಯಕ್ಷತೆ ವಹಿಸಿದ್ದ ಸಮರ್ಪಣ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಕೆ.ಪಿ. ರಾಜೇಶ್ ಮಾತನಾಡಿ, ಹಿಂದುಳಿದ ಪ್ರದೇಶದ ಮಕ್ಕಳಿಗೂ ಸಹ ನಗರ ಪ್ರದೇಶದಂತೆ ಉತ್ತಮ ಶಿಕ್ಷಣ ದೊರಕಿಸಿಕೊಡಬೇಕು ಎನ್ನುವ ಸದುದ್ದೇಶದಿಂದ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಕಳೆದ ಎಂಟು ವರ್ಷಗಳಿಂದ ನುರಿತ ಶಿಕ್ಷಕ ವೃಂದವನ್ನು ಹೊಂದಿದ್ದು, ಬಾಲ್ಯಾವ್ಯಸ್ಥೆಯಲ್ಲಿಯೇ ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತರಾಗಿಸದೇ, ವ್ಯವಹಾರಿಕ ಜ್ಞಾನ ಮತ್ತು ಸಂಸ್ಕಾರವನ್ನು ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಪೋಷಕರು ಸಹ ಉತ್ತಮವಾದ ಸಹಕಾರ ನೀಡುತ್ತಿದ್ದಾರೆ ಎಂದರು.
ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪುರಸಭೆ ಸದಸ್ಯ ಮಧುರಾಯ್ ಜಿ. ಶೇಟ್, ಶ್ರೀ ಯಲ್ಲಮ್ಮ ಶ್ರೀ ಪಾರ್ವತಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್. ಚಂದ್ರಶೇಖರ ನಿಜಗುಣ, ಹವ್ಯಾಸಿ ಬರಹಗಾರ್ತಿ ಹಾಗೂ ಶಿಕ್ಷಕಿ ಶ್ರೀಮತಿ ಜೋಶಿ, ಸಂಸ್ಥೆಯ ಕಾರ್ಯದರ್ಶಿ ಬಿ.ಎಂ. ಮಮತಾ ರಾಜೇಶ್, ಶಿಕ್ಷಕ ವೃಂದ ಮತ್ತು ಪೋಷಕರು ಮತ್ತಿತರರಿದ್ದರು. ದಾನೇಶ್ವರಿ ನಿರ್ವಹಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post