ಕಲ್ಪ ಮೀಡಿಯಾ ಹೌಸ್ | ಸೊರಬ |
ದೇಶದಲ್ಲಿ ಸ್ವಾತಂತ್ರ್ಯದ ಸಂಭ್ರಮೋತ್ಸವ ಆಚರಿಸುವ ಜೊತೆಗೆ ಅಖಂಡ ಭಾರತ ವಿಭಜನೆಯಾದ ಸಂದರ್ಭದಲ್ಲಿನ ಕರಾಳ ಘಟನೆಗಳನ್ನು ಸಹ ಮರೆಯಬಾರದು ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.
ಶನಿವಾರ ಪಟ್ಟಣದ ಡಾ. ರಾಜ್ ಕಲಾಕ್ಷೇತ್ರದಲ್ಲಿ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಜಾಗೋ ಭಾರತ್ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ದೇಶಕ್ಕೆ ಕೇವಲ ಅಹಿಂಸಾ ಮಾರ್ಗದಿಂದ ಮಾತ್ರ ಸ್ವಾತಂತ್ರ್ಯ ಲಭಿಸಲಿಲ್ಲ. ಬ್ರಿಟೀಷರ ವಿರುದ್ಧ ಮಾಡಿದ ಹೋರಾಟವನ್ನೇ ಸ್ವಾತಂತ್ರ್ಯ ಹೋರಾಟ ಎಂಬುದು ಬ್ರಿಟೀಷರು ದಾಖಲಿಸಿದ ಇತಿಹಾಸಕಾರರ ಕಲ್ಪನೆ. ಆದರೆ, ಸುಮಾರು ಒಂದು ಸಾವಿರ ವರ್ಷಗಳಿಂದ ದೇಶದ ಸಂಸ್ಕೃತಿ ಮತ್ತು ಧರ್ಮದ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಎರಡು ನೂರು ವರ್ಷಗಳ ಸ್ವಾತಂತ್ರ್ಯ ಹೋರಾಟವನ್ನೇ ಗಮನಿಸಿದಾಗ ಅಹಿಂಸಾ ಮಾರ್ಗಕ್ಕಿಂತ ಲಕ್ಷಾಂತರ ಕ್ರಾಂತಿಕಾರರ ಬಲಿದಾನವಾಗಿದೆ. ಅಖಂಡವಾಗಿದ್ದ ಭಾರತ 1947ರ ಆ. 14ರಂದು ಮಧ್ಯರಾತ್ರಿ ಧರ್ಮದ ಆಧಾರದ ಮೇಲೆ ವಿಭಜಿತವಾಗಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳ ಉಗಮವಾಯಿತು. ಅಲ್ಲಿನ ಭಾರತೀಯರು ನಿರಾಶ್ರಿತರಾದರು. ಸುಮಾರು 20 ಲಕ್ಷ ಜನರ ನರಮೇಧವಾದ ಘಟನೆಯನ್ನು ಭಾರತೀಯರು ಎಂದೂ ಮರೆಯಬಾರದು ಎಂದರು.
Also read: ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ನಿವೃತ್ತ ಕರ್ನಲ್ ಆನಂದ್ ರಾವ್ ಅವರಿಗೆ ಸನ್ಮಾನ
ಮಹಾತ್ಮ ಗಾಂಧೀಜಿಯವರು ಕರೆ ನೀಡಿದ ಎಲ್ಲಾ ಹೋರಾಟಗಳಿಗೂ ಭಾರತೀಯರು ಕೈಜೋಡಿಸಿದರು. ಆದರೆ, ಸ್ವಾತಂತ್ಯ ನಂತರ ಭಾರತೀಯರು ಸಂಕಷ್ಟದಲ್ಲಿರುವ ಸಮಯದಲ್ಲಿ ದೇಶವಾಸಿಗಳ ಪರವಾಗಿ ಧ್ವನಿ ಎತ್ತಲಿಲ್ಲ ಎಂಬುದು ನೈಜ ಇತಿಹಾಸ. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಪಠ್ಯದಲ್ಲಿ ಶಿಕ್ಷಕರು ಬೋಧಿಸುತ್ತಿರುವುದೇ ಇತಿಹಾಸ ಎಂದೇ ಭಾವಿಸಲಾಗುತ್ತಿದೆ. ಈ ನಡುವೆ ಕ್ರಾಂತಿಕಾರಿಗಳ ಹೋರಾಟವನ್ನು ಮರೆಮಾಚಲಾಗುತ್ತಿದೆ. ಬ್ರಿಟೀಷರು ದಾಖಲಿಸಿದ ಇತಿಹಾಸವನ್ನೇ ಪುನಃ ಪುನಃ ಅಧ್ಯಯನ ಮಾಡಲಾಗುತ್ತಿದೆ. ಇದರ ಹೊರತಾಗಿ ಹುದುಗಿರುವ ಸತ್ಯಾಂಶವನ್ನು ಬೆಳಕಿಗೆ ತರುವ ಕೆಲಸವಾಗಬೇಕು. ಸಾವಿರಾರು ವರ್ಷಗಳ ಕಾಲ ದೇಶದ ಮೇಲೆ ಅನೇಕ ಆಕ್ರಮಣಕಾರರು ದಾಳಿ ಮಾಡಿದ ಹೊರತಾಗಿಯೂ ಧರ್ಮ ಮತ್ತು ಸಂಸ್ಕೃತಿ ಉಳಿದಿದೆ. ಪ್ರಸ್ತುತ ಶಾಲಾ-ಕಾಲೇಜ್ಗಳಲ್ಲಿಯೂ ಸಾಂಸ್ಕೃತಿಕವಾಗಿ ದಾಳಿ ನಡೆಯುತ್ತಿದೆ. ಈ ಬಗ್ಗೆ ವಿದ್ಯಾರ್ಥಿ ಸಮೂಹ ಎಚ್ಚೆತ್ತುಕೊಂಡು, ಪೋಷಕರ ಕನಸು ಹುಸಿಯಾಗದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಮಾಜ ಸೇವಕ ಪ್ರಸನ್ನ ಕುಮಾರ್ ಎಂ. ಸಮನವಳ್ಳಿ ಮಾತನಾಡಿ, ಅಧುನಿಕತೆಯ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಎಂಬುದು ಸರಳವಾಗಿ ಲಭಿಸಲಿಲ್ಲ. ಅನೇಕ ತ್ಯಾಗ ಮಹನೀಯರ ಹೋರಾಟ ಫಲವಾಗಿ ನಾವಿಂದು ಸುಭೀಕ್ಷವಾಗಿದ್ದೇವೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ವಾಗ್ಮಿ ಹಾರಿಕಾ ಮಂಜುನಾಥ್ ಅವರು ಸಾಕಷ್ಟು ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಬ್ಬರು ಹೆಚ್ಚು ಹೆಚ್ಚು ಓದುವುದರಿಂದ ಜ್ಞಾನವಂತರಾಗಬೇಕು. ಓದಿನಡೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷದ್ ತಾಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಗಾರ್ಲ್ಫಾಡ್, ಜಿಲ್ಲಾ ಸಹ ಕಾರ್ಯದರ್ಶಿ ರಾಘವೇಂದ್ರ ಕಾಮತ್, ತಾಲೂಕು ಕಾರ್ಯದರ್ಶಿ ಪ್ರಶಾಂತ್, ಸಹ ಕಾರ್ಯದರ್ಶಿ ಬಿ. ಶಶಿಕುಮಾರ್, ನಗರ ಉಪಾಧ್ಯಕ್ಷ ಲೋಕೇಶ್, ನಗರ ಕಾರ್ಯದರ್ಶಿ ಎಸ್.ಎಂ. ಶರತ್, ಬಜರಂಗದಳ ತಾಲೂಕು ಸಂಯೋಜಕ್ ರಂಗನಾಥ ಮೊಗವೀರ್, ನಗರ ಸಹ ಕಾರ್ಯದರ್ಶಿ ರಾಘು ಗಜಮುಖ, ಪ್ರಮುಖರಾದ ವಿನುತ್ ಭೋಗರಾಜ್, ಕಾರ್ಯಕರ್ತರಾದ ರಮೇಶ್, ಅರುಣ್, ಆನಂದ್, ಪ್ರೀತಿಕ್, ಹನುಮಂತ, ವಿನಾಯಕ, ಕಾರ್ತಿಕ, ಸೂರಜ್, ಸುನೀಲ್, ಅಭಿ ಹೊಯ್ಸಳ, ಆದರ್ಶ, ಹೇಮಂತ್, ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ, ಸಮಾಜ ಸೇವಕ ಪ್ರಸನ್ನ ಕುಮಾರ್ ಎಂ. ಸಮನವಳ್ಳಿ ಸೇರಿದಂತೆ ಮಾತೃ ಶಕ್ತಿ, ದುರ್ಗಾವಹಿನಿ ಪ್ರಮುಖರು ಹಾಗೂ ಮತ್ತಿತರರಿದ್ದರು. ನಗರ ಅಧ್ಯಕ್ಷ ರಾಜು ಹಿರಿಯಾವಲಿ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post