ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಗ್ರಾಮೀಣ ಭಾಗದ ಕಲೆ ಸಾಹಿತ್ಯ ಸಂಸ್ಕೃತಿಯ ಜೊತೆಗೆ ಗ್ರಾಮೀಣ ಕ್ರೀಡೆಯಾದ ಹೋರಿ ಹಬ್ಬ ಉಳಿಯಬೇಕು ಎಂದು ಕಾರ್ಪೋರೇಷನ್ ಬ್ಯಾಂಕ್ ನೌಕರ ಬಿ. ಆನಂದಪ್ಪ ಹೇಳಿದರು.
ತಾಲ್ಲೂಕಿನ ಗುಡ್ಡೆಗೊಪ್ಪ ಗ್ರಾಮದಲ್ಲಿ ಶ್ರೀ ದುರ್ಗಾದೇವಿ, ಶ್ರೀ ಬಸವೇಶ್ವರ, ಶ್ರೀ ಸಿದ್ದರಾಮೇಶ್ವರ ದೇವರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾನಪದ ಸೊಗಡನ್ನು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಆಧುನಿಕತೆಗೆ ಬದಲಾಗಿರುವ ಜನತೆ ತಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಮರೆಯುತ್ತಿರುವುದು ಸಲ್ಲದು. ನಾವು ಬೆಳೆದು ಬಂದ ಹಾದಿ ಮತ್ತು ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆಡೆದಾಗ ಬದುಕಿನಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.
ಹಿರಿಯ ಪತ್ರಕರ್ತ ಜಿ.ಎಂ. ತೋಟಪ್ಪ (ಸಂತೋಷ್) ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿ.ವಿಗಳ ವ್ಯಾಮೋಹಕ್ಕೆ ಬಲಿಯಾಗಬಾರದು. ಓದಿನ ಕಡೆ ಹೆಚ್ಚಿನ ಗಮನ ನೀಡಬೇಕು. ಸಾಧನೆ ಮಾಡಲು ಹಲವಾರು ಕ್ಷೇತ್ರಗಳಿವೆ. ಸಂಗೀತ, ಶಿಕ್ಷಣ ಮತ್ತು ಕಲೆ ಸೇರಿ ದಂತೆ ಹಲವಾರು ಕ್ಷೇತ್ರಗಳಿದ್ದು, ಮಕ್ಕಳ ಅಭಿರುಚಿಗೆ ತಕ್ಕಂತೆ ಪೋಷಕರು ಸಹ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದ ಜನಪದ ಕ್ರೀಡೆ ಹೋರಿ ಹಬ್ಬದ ಹೋರಾಟಗಾರ ಬಸವರಾಜ ಬಂಡಿವಡ್ಡರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಂದ್ರಪ್ಪ ಉದ್ರಿ, ಶಿವಾನಂದಪ್ಪ ಮಣಿಗಾರ್, ನಾಗರಾಜ್ ಸುರಣಗೇರ್, ಬಸವಂತಪ್ಪ ಕಡೇಮನೆ, ಹನುಮಂತಪ್ಪ ಸಂತೋಳ್ಳಿ, ಸೋಮಪ್ಪ ದ್ಯಾವನಹಳ್ಳಿ, ಬಸವರಾಜ್ ಪೂಜಾರ್, ಇತರರಿದ್ದರು. ಶ್ರೀಧರ್ ದ್ಯಾವನ ಕೇರ್ ಸ್ವಾಗತಿಸಿದರು. ಶ್ರೀದೇವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post