ಕಲ್ಪ ಮೀಡಿಯಾ ಹೌಸ್ | ಸೊರಬ |
ಗ್ರಾಮದ ಅಭಿವೃದ್ಧಿಗಾಗಿ ಮೀಸಲಿಡಲಾದ ಜಾಗವನ್ನು ಬೇರೆ ಪ್ರಭಾವಿ ವ್ಯಕ್ತಿಗಳಿಗೆ ಮಂಜೂರು ಮಾಡಿದ್ದಾರೆ ಎಂದು ಕುಂಬತ್ತಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಹುಚ್ಚಪ್ಪ ಹೊನಗುಂಡಿ ದೂರಿದ್ದಾರೆ.
ಈ ಕುರಿತಂತೆ ತಾಲೂಕು ಕಚೇರಿ ಮುಂಭಾಗದಲ್ಲಿ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದ ವೇಳೆ ಅವರು ಮಾತನಾಡಿದರು.
ಉಳವಿ ಹೋಬಳಿ ಹೆಗ್ಗೊಡು ಗ್ರಾಪಂ ವ್ಯಾಪ್ತಿಯ ಕುಂಬತ್ತಿ ಗ್ರಾಮದ ಸರ್ವೆ ನಂ. 47ರಲ್ಲಿ 4 ಎಕರೆ ಮತ್ತು ಸರ್ವೆ ನಂ. 48ರಲ್ಲಿ 8 ಎಕರೆ ಜಮೀನಿದ್ದು, ಗ್ರಾಮದ ನಿವೇಶನ ರಹಿತರಿಗೆ ನಿವೇಶನ ನೀಡಲು ಮತ್ತು ಗ್ರಾಮದ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಗ್ರಾಮದಲ್ಲಿ ವಾಸಿಸುತ್ತಿರುವ ಸುಮಾರು 70 ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಜಾಗವಿಲ್ಲ ಎಂದಿದ್ದಾರೆ.
ಸ್ವಂತ ಮನೆ ಇಲ್ಲದ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಕಾಯ್ದಿರಿಸಲಾದೆ. ಈ ಸ್ಥಳದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಿಡಿಒ ಹುದ್ದೆಯಲ್ಲಿರುವ ಶಾಸಕರ ಆಪ್ತ ಸಹಾಯಕ ಉಮೇಶ್ ಗೌಡ ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ತಮ್ಮ ಅಧಿಕಾರ ಹಾಗೂ ರಾಜಕೀಯ ಪ್ರಭಾವ ಬಳಸಿ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗ್ರಾಮದ ಅಭಿವೃದ್ಧಿಗಾಗಿ ಮೀಸಲಿಟ್ಟ ಜಾಗವನ್ನು ಬೇರೆಯವರಿಗೆ ಮಂಜೂರು ಮಾಡಿರುವುದು ಖಂಡನಾರ್ಹವಾದುದು. ನಾವು ಇದನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ಈಗ ಆಗಿರುವ ಅನ್ಯಾಯವನ್ನು ತತಕ್ಷಣ ಸರಿಪಡಿಸಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ.
-ಹಿರಣ್ಯಪ್ಪ
ಈ ಹಿಂದೆ 2016ರಲ್ಲಿ ಕೆಲವರು ಅಕ್ರಮ ಸಕ್ರಮ ಯೋಜನೆಯಡಿ ಈ ಜಾಗದಲ್ಲಿ ಸಾಗುವಳಿ ಮಾಡದೇ ಬಗರ್ ಹುಕುಂ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಗ್ರಾಮದಿಂದ ತಕರಾರು ಸಲ್ಲಿಸಿ, ಮಂಜೂರಾತಿಯನ್ನು ತಡೆ ಹಿಡಿದು, 2017ರಲ್ಲಿ ಜಾಗಕ್ಕೆ ಅಗಳ ಹೊಡೆಸಲಾಗಿತ್ತು. ಇದೀಗ ಗ್ರಾಮಸ್ಥರ ಗಮನಕ್ಕೂ ಬಾರದೇ ಶಾಸಕರ ಆಪ್ತ ಸಹಾಯಕ ಉಮೇಶ್ ಗೌರ್ಡ ಅವರಿಗೆ ಸರ್ವೆ ನಂ. 48/3ರಲ್ಲಿ ನಾಲ್ಕು ಎಕರೆ, ಸರ್ವೆ ನಂ. 48/ 4ರಲ್ಲಿಸಿ, ಲಿಂಗರಾಜ ಮತ್ತು ಸರ್ವೆ ನಂ. 47ರಲ್ಲಿ ರಾಜೇಶ್ ಎಂಬುವವರಿಗೆ ತಲಾ ನಾಲ್ಕು ಎಕರೆ ಮಂಜೂರು ಮಾಡಲಾಗಿದೆ ಎಂದರು.
ಉಮೇಶ್ ಗೌಡ ಅವರು ಇತ್ತೀಚೆಗೆ ಜಾಗವನ್ನು ಸಮತಟ್ಟು ಮಾಡಲು ಆಗಮಿಸಿದ ವೇಳೆಯಲ್ಲಿಯೇ ಜಮೀನು ಮಂಜೂರಾಗಿರುವ ವಿಷಯ ಗ್ರಾಮಸ್ಥರ ಗಮನಕ್ಕೆ ಬಂದಿದೆ. ಯಾವುದೇ ಸ್ಥಳ ತನಿಖೆ ನಡೆಸದೇ, ಮಂಜೂರಾತಿ ಮಾಡಿರುವುದು ಕಾನೂನು ಬಾಹಿರವಾಗಿದೆ. ಅಲ್ಲದೆ, ಅಕ್ರಮ ಮಂಜೂರಾತಿಯಾಗಿದ್ದು, ಕೂಡಲೇ ಇದನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಾಭಿವೃದ್ಧಿಯ ಹಿರಣ್ಯಪ್ಪ, ಬಂಗಾರಪ್ಪ, ಮೋಹನ್, ನಿಂಗರಾಜ, ಅನಿಲ್ ಕುಮಾರ್, ಅಣ್ಣಪ್ಪ, ಜಗದೀಶ್, ಬಸಪ್ಪ, ಈಶ್ವರಪ್ಪ, ವೀರೇಶ್, ಪ್ರವೀಣ್, ಇಂದ್ರಪ್ಪ, ಪವನ್ ಕುಮಾರ್, ಇಂದೂಧರ, ಸಂದೀಪ, ರಾಜಶೇಖರ್, ಸಂಜಯ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post