ಕಲ್ಪ ಮೀಡಿಯಾ ಹೌಸ್ | ಸೊರಬ |
ದೇಶದಲ್ಲಿ ಕೋಮುಭಾವನೆಗಳನ್ನು ಕೆರಳಿಸಿ ಅಧಿಕಾರ ನಡೆಸುತ್ತಿರುವ ಬಿಜೆಪಿಯು ಆಟಗಳು ಇನ್ನು ಮುಂದೆ ನಡೆಯುವುದಿಲ್ಲ ಎನ್ನುವುದಕ್ಕೆ ಬಿಹಾರದಲ್ಲಿನ ಬೆಳವಣಿಗೆಗಳೇ ಸಾಕ್ಷಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ.
ಬಂಗಾರಧಾಮದಲ್ಲಿ ತಾಲೂಕು ಯುವ ಕಾಂಗ್ರೆಸ್ ಹಾಗೂ ಎನ್’ಎಸ್’ಯುಐ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಾದ್ಯಂತ ಬಿಜೆಪಿ ಜನರ ಭಾವನೆ ಹಾಗೂ ಧರ್ಮಗಳ ನಡುವೆ ಕೆರಳಿಸಿ ಅಧಿಕಾರಕ್ಕೆ ಬಂದಿದೆ. ಶಾಶ್ವತವಾಗಿ ನಾವು ಅಧಿಕಾರದಲ್ಲಿ ಇರುತ್ತೇವೆ ಎಂಬ ಭ್ರಮೆಯಲ್ಲಿ ಇದ್ದಾರೆ. ಆದರೆ, ಈಗ ಇವರ ಯೋಗ್ಯತೆ ಜನರಿಗೆ ತಿಳಿದಿದ್ದು, ಜನರು ಪ್ರಜ್ಞಾವಂತರಾಗಿದ್ದಾರೆ. ಹೀಗಾಗಿ, ಇವರ ಆಟಗಳು ಇನ್ನು ಮುಂದೆ ನಡೆಯುವುದಿಲ್ಲ. ಬಿಹಾರದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯೇ ಇದಕ್ಕೆ ಸಾಕ್ಷಿ ಎಂದು ಕಟಕಿಯಾಡಿದರು.
ನಮ್ಮ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಭಾರತೀಯರೇ ಆಗಿದ್ದು, ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲಾ ಜಾತಿ-ಧರ್ಮಗಳ ಮಹನೀಯರ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ ಲಭಿಸಿದೆ. ಮಹಾತ್ಮಾ ಗಾಂಧೀಜಿಯವರಿಂದ ಹಿಡಿದು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರೆಗೆ ದೇಶದ ಸ್ವಾತಂತ್ರ ಮತ್ತು ಅಭಿವೃದ್ಧಿಗಾಗಿ ಕಾಂಗ್ರೆಸ್ನ ಕೊಡುಗೆ ಅನನ್ಯವಾಗಿದ್ದರೆ, ಬಿಜೆಪಿಯ ಕೊಡುಗೆ ಶೂನ್ಯವಾಗಿದೆ ಎಂದು ಚಾಟಿ ಬೀಸಿದರು.
ಅಂದು ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪನಿ ದೇಶವನ್ನು ಗುಲಾಮಗಿರಿಗೆ ತಳ್ಳಿತು. ಆದರೆ ಇಂದು ಉದ್ಯಮಿಗಳಾದ ಅಂಬಾನಿ, ಅದಾನಿ ದೇಶವನ್ನು ತಮ್ಮ ಕಪಿಮುಷ್ಠಿಯಟ್ಟುಕೊಂಡು ಸರ್ಕಾರವನ್ನು ನಡೆಸುತ್ತಿದ್ದಾರೆ. ಇಂಥವರಿAದ ದೇಶವನ್ನು ಬಿಡಿಸಿಕೊಳ್ಳಬೇಕಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಹಾರ ಪದಾರ್ಥ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಹಾಕುವ ಮೂಲಕ ಬಡವರ ಮೇಲೆ ಪ್ರಹಾರ ನಡೆಸಿದ್ದಾರೆ. ಬೆಲೆ ಏರಿಕೆ ಹಾಗೂ ಜಿಎಸ್ಟಿಯಂದಾಗಿ ರೋಸಿ ಹೋಗಿರುವ ಮತದಾರರು ಕಾಂಗ್ರೆಸ್ ಕಡೆ ಮುಖ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಅಲ್ಲದೇ ತಾವು ಸೊರಬ ಕ್ಷೇತ್ರದಿಂದ ಗೆಲ್ಲುವುದು ನೂರಕ್ಕೆ ನೂರು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕರು ಸಭೆ ಸಮಾರಂಭಗಳಲ್ಲಿ ಮೂಡಿ, ಮೂಗೂರು ಏತ ನೀರಾವರಿ ಯೋಜನೆಯನ್ನು ತಾವೇ ಅನುಷ್ಠಾನಕ್ಕೆ ತಂದಿರುವುದಾಗಿ ಮಾತನಾಡುತ್ತಿದ್ದಾರೆ. ಆದರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮೂಲಕ ಕಚವಿ ಏತ ನೀರಾವರಿಗೆ 16 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿಕೊಂಡಿದ್ದವನು ನಾನು. ಶಾಸಕರಿಗೆ ಪರ್ಸೆಂಟೇಜ್ ಹಣ ಕೊಡಲಾಗದ ಗುತ್ತಿಗೆದಾರರು ಎಲ್ಲಾ ನೀರಾವರಿ ಯೋಜನೆಗಳನ್ನು ನೆನೆಗುದಿಗೆ ಬೀಳುವಂತೆ ಮಾಡಿದ್ದಾರೆ. ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಎಸ್. ಬಂಗಾರಪ್ಪನವರ ಮೂಲಕ ನೀರಾವರಿ ಸಚಿವರಾಗಿದ್ದ ಈಗಿನ ಶಾಸಕರು ತಾಲೂಕಿನಲ್ಲಿರುವ ಯಾವುದೇ ಕೆರಗಳನ್ನು ಅಭಿವೃದ್ಧಿ ಮಾಡದೇ ನಿರ್ಲಕ್ಷ ಧೋರಣೆ ಅನುಸರಿಸಿದ್ದರು. ಈಗ ತಾವು ಮಂಜೂರು ಮಾಡಿಸಿದ್ದ ನೀರಾವರಿ ಯೋಜನೆಗಳಿಗೆ ತಮ್ಮವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್’ಎಸ್’ಯುಐ ಘಟಕದ ಅಧ್ಯಕ್ಷ ಅಭಿಷೇಕ್ ಮಾತನಾಡಿ, ಭಾರತ ಸ್ವಾತಂತ್ರ ಸಂಗ್ರಾಮದಲ್ಲಿ ಬಿಜೆಪಿಯ ಪಾತ್ರ ಶೂನ್ಯವಾಗಿದ್ದು, ಬಂಧಿಯಾಗಿದ್ದ ಸಾವರ್ಕರ್ ಜೈಲು ವಾಸಕ್ಕೆ ಹೆದರಿ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದರು. ಇಂತಹವರನ್ನು ಬಿಜೆಪಿ ವೀರ ಎಂದು ಬಿಂಬಿಸುತ್ತಿದೆ ಎಂದು ಹೇಳಿದರು.
ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಎನ್’ಎಸ್’ಯುಐ ಪದಾಧಿಕಾರಿಗಳಾದ ಸಂಜಯ ದೇವತಿಕೊಪ್ಪ, ಯಶೋಧರ ಅಂದವಳ್ಳಿ, ರವಿ ಕೆಸರಿ, ಪಾಂಡು ಕೊಡಕಣಿ, ಸಚಿನ್, ಮಧು, ಸಿದ್ದೇಶ್, ನಂಜುಂಡ ಕಲ್ಲಂಬಿ, ಅನಿಲ್, ಮಂಜು ಹೆಸರಿ, ಅಭಿಷೇಕ್ ಬಿಳವಾಣಿ, ಜಗದೀಶ ಕಕ್ಕರಸಿ, ರಾಘು ಹುಲ್ತಿಕೊಪ್ಪ, ಪ್ರದೀಪ್, ಮಂಜುನಾಥ ಚಿಕ್ಕಶಕುನ ಮುಖಂಡರಾದ ಎಚ್. ಗಣಪತಿ, ನಾಗಪ್ಪ ಮಾಸ್ತರ್, ನಾಗರಾಜ ಚಂದ್ರಗುತ್ತಿ, ಪ್ರಭಾಕರ ಶಿಗ್ಗಾ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಶಿ ಚಿಲನೂರು ಮೊದಲಾದವರು ಹಾಜರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















